ಮೂಡಲಗಿ : ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಪುರಾತನ ಸಾರ್ವಜನಿಕ ಗಣೇಶ ಮಂಡಳಿಗಳಲ್ಲೊಂದಾದ ವಿದ್ಯಾನಗರದ ಶ್ರೀ ಗಜಾನನ ಯುವಕ ಮಂಡಳಿಯವರು, ಮಣ್ಣಿನ ಗಣಪನನ್ನು ಕೂರಿಸುವುದರ ಜೊತೆಗೆ ಏಳು ದಿನಗಳ ಕಾಲ ಗಣೇಶ ಹಬ್ಬದ ಆಚರಣೆನ್ನೂ ಕೂಡ ಪರಿಸರ ಸ್ನೇಹಿಯಾಗಿಯೇ ಆಚರಿಸುವ ಪಣ ತೊಟ್ಟು ಇತರರಿಗೆ ಮಾದರಿಯಾಗಿದ್ದಾರೆ.
ಸೋಮವಾರದಂದು ಗಣೇಶ ಚತುರ್ಥಿ ಅಂಗವಾಗಿ ಮಣ್ಣಿನ ಗಣಪತಿಯನ್ನು ಕರೆತರುವ ಮೆರವಣಿಗೆಯಲ್ಲಿ ಕೂಡ ವಾಯು ಹಾಗೂ ಶಬ್ಧ ಮಾಲಿನ್ಯಕ್ಕೆ ಕಾರಣವಾದ ಯಾವುದೇ ಪಟಾಕಿಗಳನ್ನು ಸಿಡಿಸದೇ, ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವ ಡಿಜೆ ಸಂಗೀತ ಬಳಸದೇ, ಕೇವಲ ದೇಸಿ ವಾದ್ಯಗಳನ್ನು ನುಡಿಸುವುದರೊಂದಿಗೆ ಯುವಕ ಮಂಡಳಿಯ ಸದಸ್ಯರು, ಸಮಸ್ತ ವಿದ್ಯಾನಗರ ನಿವಾಸಿಗಳು ಹಾಗೂ ಸುಮಂಗಲಿಯರು ಆರತಿಯನ್ನು ಹಿಡಿದು ಗಣೇಶನ ಸ್ತುತಿಗಳನ್ನು ಹಾಡುವುದರೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ೭ ದಿನಗಳ ಕಾಲ ಕೂರುವ ಗಣಪ ಇದಾಗಿದ್ದು, ಪ್ರತಿದಿನ ಸಾಯಂಕಾಲ ಪ್ರವಚನ ಕಾರ್ಯಕ್ರಮ ಆಯೋಜಿಸುವುದರೊಂದಿಗೆ, ಅನ್ನ ಪ್ರಸಾದ ಜರುಗುವುದು ವಿಶೇ?ವಾಗಿದೆ.
ಮಾನವ ಮಾಡುವ ಸ್ವಯಂಕೃತ ಅಪರಾಧದಿಂದ ಪರಿಸರ ಅಸಮತೋಲನವಾಗಿ, ರಾಜ್ಯ ಮಳೆ-ಬೆಳೆಯಿಲ್ಲದೇ, ಬರಗಾಲದಿಂದ ತತ್ತರಿಸುತ್ತಿರುವ ಈ ಸಂಧರ್ಭದಲ್ಲಿ, ಪ್ರಜ್ಞಾವಂತರಾದ ಮೂಡಲಗಿಯ ವಿದ್ಯಾನಗರದ ಶ್ರೀ ಗಜಾನನ ಯುವಕ ಮಂಡಳಿಯವರು , ಸಾಮಾಜಿಕ ಜಾಗೃತಿಗಾಗಿ ನಿಸರ್ಗದ ಮಾದರಿಯ ಮಂಟಪ ಮಾಡಿ, ಮಣ್ಣಿನ ಗಣಪನನ್ನು ಕೂಡಿಸುವುದರ ಮೂಲಕ ಪರಿಸರಸ್ನೇಹಿಯಾಗಿಯೇ ಗಣೇಶನ ಹಬ್ಬವನ್ನು ಆಚರಿಸುತ್ತಿರುವುದು, ಮೂಡಲಗಿ ತಾಲೂಕಾ ಆಡಳಿತ ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.