ಸಿರುಗುಪ್ಪ : 29:.ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸೆ.9ರಂದು ತಾಲ್ಲೂಕಿನ ರಾವಿಹಾಳ್ ಗ್ರಾಮದಲ್ಲಿ ನಡೆಯಲಿರುವ 8ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ನಿವೃತ್ತ ಶಿಕ್ಷಕ ಹಾಗೂ ಹಾಸ್ಯ ಕಲಾವಿದ ಜೆ. ನರಸಿಂಹಮೂರ್ತಿ ಅವರು ಆಯ್ಕೆಯಾಗಿದ್ದು, ಕಸಾಪ ಪದಾಧಿಕಾರಿಗಳು ಅವರಿಗೆ ಅಧಿಕೃತವಾಗಿ ಶುಕ್ರವಾರ ಆಹ್ವಾನ ನೀಡಿದ್ದರು.
ಕನ್ನಡ ಸಾಹಿತ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಜೆ. ನರಸಿಂಹಮೂರ್ತಿ ಅವರು ನೀಡಿದ ಗಣನೀಯ ಕೊಡುಗೆ, ಸಾಹಿತ್ಯಾಸಕ್ತಿ ಹಾಗೂ ಕನ್ನಡ ಪ್ರೇಮವನ್ನು ಗುರುತಿಸಿ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ಪರಿಷತ್ತಿನ ಪದಾಧಿಕಾರಿಗಳು ನರಸಿಂಹಮೂರ್ತಿ ಅವರ ನಿವಾಸದಲ್ಲಿ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ಮನವಿ ಮಾಡಿ, ಅಧಿಕೃತವಾಗಿ ಆಹ್ವಾನಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಮಧುಸೂದನ ಕಾರಿಗನೂರು ಮಾತನಾಡಿ "ನರಸಿಂಹಮೂರ್ತಿಯವರಂತಹ ಹಿರಿಯ ಸಾಹಿತಿ ಹಾಗೂ ಅನುಭವಿ ಶಿಕ್ಷಕರು ಈ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಅವರ ಅಪಾರ ಅನುಭವ ಮತ್ತು ಮಾರ್ಗದರ್ಶನದಿಂದ ಸಮ್ಮೇಳನವು ಮತ್ತಷ್ಟು ಅರ್ಥಪೂರ್ಣವಾಗಿ ಮೂಡಿಬರಲಿದೆ. ವಿಶೇಷವಾಗಿ ಗಡಿಭಾಗವಾದ ರಾವಿಹಾಳ್ನಲ್ಲಿ ಈ ಸಾಹಿತ್ಯ ಹಬ್ಬ ನಡೆಯುತ್ತಿದ್ದು, ಅವರ ಅಧ್ಯಕ್ಷತೆಯು ಗ್ರಾಮೀಣ ಭಾಗದ ಸಾಹಿತ್ಯಾಸಕ್ತರಿಗೆ ಹಾಗೂ ಕನ್ನಡಿಗರಿಗೆ ದೊಡ್ಡ ಪ್ರೇರಣೆಯಾಗಲಿದೆ" ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಮತ್ತು ಮುಖಂಡರು ಭಾಗವಹಿಸಿದ್ದರು.