ಗದಗ, 16 : ಈ ಭಾಗದ ಸರ್ವ ಜನಪ್ರತಿನಿಧಿಗಳ ಸಹಕಾರದೊಂದಿಗೆ ಶ್ರೀಕ್ಷೇತ್ರ ವರವಿಯ ಸಮಸ್ತ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಎಚ್. ಕೆ. ಪಾಟೀಲ ಹೇಳಿದರು.
ಅವರು ಶ್ರೀಕ್ಷೇತ್ರ ವರವಿಯ ಮೌನೇಶ್ವರರ ಜಾತ್ರಾಮಹೋತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಹಾಗೂ ಹೊರರಾಜ್ಯಗಳಿಂದ ಮೌನೇಶ್ವರರ ದರ್ಶನಕ್ಕೆ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅವರಿಗೆ ತಂಗಲು ಎಲ್ಲ ಮೂಲಭೂತ ಸೌಲಭ್ಯಗಳುಳ್ಳ 25 ಕೊಠಡಿಗಳ ಅತಿಥಿಗೃಹ ನಿರ್ಮಾಣ, ಗಣೇಶ ಹಾಗೂ ವಿಠೋಭ ಮಂದಿರಗಳ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದು, ಮೌನೇಶ್ವರ ಸಮುದಾಯ ಭವನ ಮತ್ತು ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಬೇಕಾಗುವ ಅನುದಾನ ಸರ್ಕಾರದಿಂದ ಬಿಡುಗಡೆಗೊಳಿಸಲು ಶ್ರಮಿಸುತ್ತೇನೆ ಎಂದರು.
ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯ ಅಧ್ಯಕ್ಷರಾದ ವಿಜಯಕುಮಾರ ಪತ್ತಾರ ಮಾತನಾಡಿ, ಸಮುದಾಯ ಭವನದ ಉಳಿದ ಕಾಮಗಾರಿಗಳಿಗಾಗಿ ಈಗಾಗಲೇ ಒಂದು ಕೋಟಿ ರೂಗಳ ಅನುದಾನ ಬಿಡುಗಡೆಯಾಗಿದೆ. ಸಚಿವರು, ಶಾಸಕರ ಸಹಕಾರದೊಂದಿಗೆ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸುವ ಮೂಲಕ ಹಾಗೂ ಟ್ರಸ್ಟಿನ ಮತ್ತು ಸಮಾಜದ ಸಹಕಾರದಲ್ಲಿ ವರವಿಯ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿದ್ದ ಶ್ರೀಕ್ಷೇತ್ರ ವರವಿಯ ಮೌನೇಶ್ವರ ದೇವಸ್ಥಾನದ ಹಾಗೂ ಮಠದ ವಿಕಾಸ ಟ್ರಸ್ಟನ ಅಧ್ಯಕ್ಷರಾದ ಮೋಹನ ಸಿ. ನರಗುಂದ ಮಾತನಾಡಿದರು.
ಶಹಾಪುರ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ಜಿಲ್ಲಾ ಕಾಂಗ್ರೆಸ ಅಧ್ಯಕ್ಷರಾದ ವಾಸಣ್ಣ ಕುರಡಗಿ, ಮುಖಂಡರಾದ ವಿಶ್ವನಾಥ ಕಪ್ಯತ್ತನವರ, ಹುಮಾಯೂನ ಮಾಗಡಿ, ಡಿ. ಕೆ. ಹೊನ್ನಪ್ಪನವರ, ರಾಜಗೋಪಾಲ ಕಡ್ಲಿಕೊಪ್ಪ, ತಿಪ್ಪಣ್ಣ ಕೊಂಚಿಗೇರಿ, ವೀರಯ್ಯ ಮಠಪತಿ, ದೇವಪ್ಪ ಲಮಾಣಿ, ಅಜ್ಜನಗೌಡ ಪಾಟೀಲ, ಮುತ್ತಣ್ಣ ಕಪ್ಯತ್ತನವರ, ಅಶೋಕ ಮಂದಾಲಿ, ನಾಗರಾಜ ಕಮ್ಮಾರ ಸೇರಿದಂತೆ ಟ್ರಸ್ಟಿನ ಸರ್ವ ಸದಸ್ಯರು ಉಪಸ್ಥಿತರಿದ್ದರು. ವಿಶ್ವನಾಥ ಕಮ್ಮಾರ ಕಾರ್ಯಕ್ರಮ ನಿರೂಪಿಸಿದರು.