ಅಥಣಿ.ಆಶಾಢ ಏಕಾದಶಿ ನಿಮಿತ್ಯ ಶ್ರೀ ಸುಧಾ ಮಹಿಳಾ ಭಜನಾ ಮಂಡಳದ ಭಗಿನಿಯರು ಕೋಲಾಟ, ನೃತ್ಯದೊಂದಿಗೆ ಗ್ರಾಮ ಪ್ರದಕ್ಷಿಣೆ ಹಾಕುವ ಮೂಲಕ ಶ್ರೀ ವಿಠ್ಠಲ ಮಂದಿರಕ್ಕೆ ಆಗಮಿಸಿದರು.
ಶ್ರೀ ಸುಧಾ ಭಜನಾ ಮಂಡಳದ ಭಗಿನಿಯರು ಸ್ಥಳೀಯ ಶ್ರೀ ನರಸಿಂಹ ದೇವಸ್ಥಾನದಲ್ಲಿ ಪಲ್ಲಕ್ಕಿಗೆ, ನರಸಿಂಹ ದೇವರಿಗೆ ಆರತಿ ಮಾಡಿದ ನಂತರ ಮೆರವಣಿಗೆ ಮೂಲಕ ಹೊರಟು ಬಾರೆ ಭಾಗ್ಯದ ನಿಧಿಯೇ, ಇಟ್ಟಿಗೆ ಮೇಲೆ ನಿಂತಾನಮ್ಮ , ಗುರು ಮಧ್ವರಾಯರಿಗೆ, ರಂಗಾ ನಿನ್ನ ಕೊಂಡಾಡುವೆ, ಶ್ರೀಪತಿಯು ನಮಗೆ ಸಂಪದವೀಯಲಿ ಸೇರಿದಂತೆ ಅನೇಕ ದಾಸರ ಪದಗಳನ್ನು ಹಾಡುತ್ತ, ಕುಣಿಯುತ್ತ, ವಿಠ್ಠಲನ ನಾಮಸ್ಮರಣೆ ಮಾಡುತ್ತ ಕೋಲಾಟ ಆಡಿದರು, ತುಳಸಿ ಕಟ್ಟೆ ತಲೆ ಮೇಲೆ ಹೊತ್ತು ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ಮೆರವಣಿಗೆ ಜೋಶಿ ಗಲ್ಲಿ, ಹಬ್ಬು ಗಲ್ಲಿ, ದೇಶಪಾಂಡೆ ಗಲ್ಲಿಯ ಮೂಲಕ ಶ್ರೀ ವಿಠ್ಠಲ ಮಂದಿರ ತಲುಪಿ ಸಮಾವೇಶ ಗೊಂಡಿತು. ಮೆರವಣಿಗೆ ಬರುವ ದಾರಿಯುದ್ದಕ್ಕೂ ಜನರು ಆರತಿ ಮಾಡಿ ಬರಮಾಡಿಕೊಂಡರು. ಹರಿವಾಣ ಸೇವೆಯನ್ನು ದೇವರಿಗೆ ಅರ್ಪಿಸಲಾಯಿತು, ವಿಠ್ಠಲ ದೇವರಿಗೆ ಆರತಿ ಮಾಡಲಾಯಿತು. ಏಕಾದಶಿ ವೃತದ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶಿಷ್ಠವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಶ್ರೀ ಸುಧಾ ಭಜನಾ ಮಂಡಳದ ರಮಾ ಕುಲಕರ್ಣಿ ಹೇಳಿದರು.
ಮೆರವಣಿಗೆಯಲ್ಲಿ ಶ್ರೀ ಸುಧಾ ಭಜನಾ ಮಂಡಳಿಯ ಸದಸ್ಯೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.
