ವಿಶ್ವದಲ್ಲೇ ಮೊದಲು ಎನ್ನುವಂತೆ ರಿಯಲ್ ಅಂದ ದಂಪತಿಗಳು ರೀಲ್ದಲ್ಲಿ ನಾಯಕ, ನಾಯಕಿಯಾಗಿ ನಟಿಸಿರುವ ‘ಶರತ್ ಮತ್ತು ಶರಧಿ’ ಕಿರುಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
‘ಏಪ್ರಿಲ್ನ ಹಿಮಬಿಂದು’ ಚಿತ್ರದ ನಿರ್ದೇಶಕ ಎಂ.ಜಗದೀಶ್ ಕತೆ ಬರೆದು ಆಕ್ಷನ್ ಕಟ್* ಹೇಳುವುದರ ಜತೆಗೆ ನಿರ್ಮಾಣದಲ್ಲಿ ಪಾಲುದಾರರು. ಟಾಕ್ಗುರು ಕ್ರಿಯೇಶನ್ಸ್ ಅಡಿಯಲ್ಲಿ ಗಣೇಶ್ ಬಿ.ಎಂ. ಬಂಡವಾಳ ಹೂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಎಂ. ಜಗದೀಶ್ “ಒಂದು ಸನ್ನಿವೇಶದಲ್ಲಿ ನಾವು ಕರೆಂಟ್ ಬಿಲ್ ದುಡ್ಡು ಉಳಿಸಬಹುದು ಎಂಬುದಿತ್ತು ಇತ್ತು. ಅಶ್ವಿನಿರವರು ಇದನ್ನು ತಲೆಯಿಂದ ತೆಗೆದುಬಿಡಿ. ನಮಗೆ ಕತ್ತಲೆ ಇರಬಹುದು. ನಮ್ಮ ಮನೆಯಲ್ಲಿ ಕತ್ತಲಿರಬಾರದು. ಹಾಗೇನಾದರೂ ಇದ್ದರೆ ರಸ್ತೆಯಲ್ಲಿ ಕತ್ತಲೆ ಮನೆ ಆಂತ ಆಗೋಗುತ್ತೆ. ಇಬ್ಬರು ಬದುಕನ್ನು ಸಕಾರಾತ್ಮಕವಾಗಿ ನೋಡುತ್ತಿದ್ದಾರೆ. ಕೇವಲ ಮೂರು ಗಂಟೆಗಳಲ್ಲಿ ಡಬ್ಬಿಂಗ್ ಮುಗಿಸಿಕೊಟ್ಟರು. ದತ್ತಣ್ಣ ಸರ್ ಕಿರುಚಿತ್ರ ಒಪ್ಪಿಕೊಳ್ಳುವುದಿಲ್ಲ. ಆದರೆ ವಿಷಯಗಳು ಚೆನ್ನಾಗಿರುವುದರಿಂದ ಯಾವುದೇ ಸಂಭಾವನೆ ಪಡೆಯದೆ ನಟಿಸಿ ಪ್ರೋತ್ಸಾಹ ಕೊಟ್ಟರು. ಬೇರೆ ಭಾಷೆಗಳಿಗೆ ತರ್ಜುಮೆ ಮಾಡಲು ಚಿಂತನೆ ನಡೆಸಲಾಗಿದೆ” ಎಂದು ತಿಳಿಸಿದರು.
ಅಂತರರಾಷ್ಟ್ರೀಯ ಪ್ರಶಸ್ತಿ ಮತ್ತು ಬ್ರಿಟನ್ ರಾಣಿಯಿಂದ ಗೌರವ ಸ್ವೀಕರಿಸಿರುವ ನಾಯಕಿ ಅಶ್ವನಿ ಅಂಗಡಿ ಹೇಳುವಂತೆ “ಇದೊಂತರ ಹೊಸ ಪ್ರಯತ್ನ. ನಾವು ಎಲ್ಲರಂತೆ ಸಂತೋಷವಾಗಿ ಜೀವನ ಸಾಗಿಸುತ್ತಿದ್ದೇವೆ. ದಿವ್ಯಾಂಗದ ಪೋಷಕರು ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಮಕ್ಕಳನ್ನು ಚೆನ್ನಾಗಿ ಬೆಳಸಿ” ಎಂದು ಧೈರ್ಯ ತುಂಬಿದರು.
ಸರ್ಕಾರಿ ಶಾಲೆಯಲ್ಲಿ ಮ್ಯೂಸಿಕ್ ಟೀಚರ್ ಆಗಿರುವ ದಾವಣಗೆರೆ ಮೂಲದ ನಾಯಕನಾಗಿ ನಟಿಸಿರುವ ವೀರೇಶ್.ಎಂ ಶೂಟಿಂಗ್ ಅನುಭವಗಳನ್ನು ಹಂಚಿಕೊಂಡರು.
ಹಿರಿಯ ನಟ ದತ್ತಣ್ಣ “ವೀರೇಶ್ ಹಾಗೂ ಅಶ್ವನಿ ಎಲ್ಲರ ಮಧ್ಯೆ ಸುಖದಿಂದ ಬದುಕಿನ ಪಯಣ ಸಾಗಿಸುತ್ತಿದ್ದಾರೆ. ನಮಗೂ ಅವರಿಗೂ ದೊಡ್ಡ ವ್ಯತ್ಯಾಸ ಏನೂ ಇಲ್ಲ. ಸಮಾಜ ಕೂಡ ಅವರನ್ನು ಬೇರೆ ರೀತಿಯಲ್ಲಿ ನೋಡಬೇಕಾದ ಅಗತ್ಯ ಇಲ್ಲ. ನಾವು ವಿಭಿನ್ನವಾಗಿ ಸಬಲರಾಗಿದ್ದೇವೆ. ಆದರೆ ನಾವು ಅಂಗವಿಕಲರಲ್ಲ ಎಂಬ ಅರ್ಥಪೂರ್ಣ ಸಂದೇಶ ಹೇಳಿದ್ದಾರೆ. ನಿರ್ದೇಶಕರಲ್ಲಿ ಗಮನಾರ್ಹ ಸೃಜನಾತ್ಮಕತೆ ಇದೆ. ಇಂತಹ ಚಿತ್ರಕ್ಕೆ ಮಾನ್ಯತೆ ಸಿಗಬೇಕಾಗಿದೆ. ನಿರ್ದೇಶಕರು ಹೇಳಿದಂತೆ ಅರ್ಥೈಸಿಕೊಂಡು ದಂಪತಿಗಳು ಕ್ಯಾಮಾರ ಮುಂದೆ ಅಭಿನಯಿಸಿದ್ದಾರೆ” ಎಂದರು. ಹಾಗೆಯೇ ಶಾರ್ಟ್ ಫಿಲಂ ಮಾಡುವವರಿಗೆ ಒಂದಷ್ಟು ತೂಕದ ಸಲಹೆಗಳನ್ನು ನೀಡಿದರು.
ಅನುಬಂಧದ ಮೇಲೆ ಮದುವೆ ಆಗಬೇಕು ಹೊರತು ಅನುಕಂಪದ ಮೇಲೆ ಮದುವೆ ಆಗಬಾರದು. ದುಖ: ಪಡೋದಕ್ಕೆ ಸಾಕಷ್ಟು ಕಾರಣ ಇರುತ್ತವೆ. ಅದೇ ಸುಖವಾಗಿ ಇರೋದಕ್ಕೆ ಕಾರಣಗಳು ಬೇಕಾಗಿಲ್ಲ. ಸಂತೋಷವಾಗಿ ಇದ್ದೇವೆ ಅಂತ ಮನಸ್ಥಿತಿ ಇದ್ದರೆ ಸಾಕು. ಇಂತಹ ಹಲವು ಮನಸ್ಸನ್ನು ಕದಡುವ ಡೈಲಾಗ್ಗಳು ಮತ್ತು ಇವರ ಮಗಳು ಪುಟಾಣಿ ವೇದಿಕಾ ಕೂಡ ಅಂದಳಾಗಿದ್ದರಿಂದ ನೆರೆದಿದ್ದವರ ಕಣ್ಣುಗಳು ಒದ್ದೆಯಾಗಿದ್ದವು.
ಸಂಗೀತ ಸತೀಶ್ ಪದ್ಮನಾಬನ್, ಛಾಯಾಗ್ರಹಣ ವಿನಯ್ ಹೊಸಗೌಡರ್, ಕೋ ಡೈರಕ್ಟರ್ ಚೇತನ್ ತ್ರಿವೇಣ್, ಸಂಕಲನ ಸುಪ್ರೀತ್ .ಬಿ.ಕೆ.