ಬಾಗಲಕೋಟೆ : ಎಪ್ರೀಲ್ ೧೬ : ಬೇಸಿಗೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರು ಮತ್ತು ಮೇವು ಪೂರೈಕೆಯಲ್ಲಿ ಅಭಾವ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕುಡಿಯುವ ನೀರು ಹಾಗೂ ಮೇವು ಪೂರೈಕೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಲಭ್ಯತೆ ಪರಿಶೀಲಿಸಿ, ಮುಂದಿನ ಎಷ್ಟು ದಿನಗಳ ವರೆಗೆ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂಬುದನ್ನು ಅರಿತು ಮುಂಜಾಗ್ರತಾ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರ ಪ್ರದೇಶ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು ಬಾಗಲಕೋಟೆ, ರಬಕವಿ-ಬನಹಟ್ಟಿ, ಜಮಖಂಡಿ, ಮುಧೋಳ ನಗರಸಭೆ, ತೇರದಾಳ, ಮಹಾಲಿಂಗಪೂರ ಪುರಸಭೆ, ಕೆರೂರ, ಬೀಳಗಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಮೇ ೩೧ ವರೆಗೆ ಹಾಗೂ ಇಲಕಲ್ಲ ಪುರಸಭೆ, ಬಾದಾಮಿ, ಗುಳೇದಗುಡ್ಡ, ಹುನಗುಂದ ಪುರಸಭೆ, ಕಮತಗಿ, ಅಮೀನಗಡ, ಬೆಳಗಲಿ, ಲೋಕಾಪೂರ, ಶಿರೂ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಜೂನ್ ೩೦ ವರೆಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಇರುವದಿಲ್ಲವೆಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ತಿಳಿಸಿದಿರು.
ಜಿ.ಪಂ ಸಿಇಓ ಶಶಿಧರ ಕುರೇರ ಅವರು ಜಿಲ್ಲೆಯಲ್ಲಿ ೧೯೬ ಗ್ರಾಮ ಪಂಚಾಯತಿಗಳಿದ್ದು, ೫೯೭ ಹಳ್ಳಿ ಹಾಗೂ ೧೦೦೬ ಜನವಸತಿಗಳಿವೆ. ೩೯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮೂಲಕ ಒಟ್ಟು ೪೦೨ ಹಳ್ಳಿಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಘಟಪ್ರಭಾ ನದಿ ಅವಲಂಭಿತ ೧೨, ಮಲಪ್ರಭಾ ನದಿ ಅವಲಂಬಿತ ೪ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳಿವೆ. ಈಗಾಗಲೇ ಎಪ್ರೀಲ್ ೨ ರಂದು ಘಟಪ್ರಭಾ ನದಿಗೆ ೧.೧೦ ಟಿಎಂಸಿ ನೀರನ್ನು ಬಿಡುಗಡೆ ಮಾಡಿದ್ದು, ಆನದಿನ್ನಿ ಬ್ಯಾರೇಜಗೆ ನೀರು ತಲುಪಿದ್ದು, ಯಾವುದೇ ಸಮಸ್ಯೆ ಇರುವದಿಲ್ಲವೆಂದು ತಿಳಿಸಿದರು.
ಎಪ್ರೀಲ್ ೧೦ ರಂದು ಮಲಪ್ರಭಾ ನದಿಗೆ ೧ ಟಿಎಂಸಿ ನೀರನ್ನು ಬಿಡುಗಡೆಗೊಳಿಸಿದ್ದು, ಎಪ್ರೀಲ್ ೧೫ ರಂದು ಶಿವಯೋಗ ಮಂದಿರದ ಬ್ಯಾರೇಜಗೆ ತಲುಪಿದ್ದು, ಇನ್ನು ೧೫ ಬ್ಯಾರೇಜ ದಾಟಿ ಹಡಗಲಿ ಬ್ಯಾರೇಜಗೆ ತಲುಪಲು ಬಾಕಿ ಇರುತ್ತದೆ. ನೀರು ಬಿಡುಗಡೆಯಿಂದ ಎಲ್ಲ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳು ಚಾಲ್ತಿಯಲ್ಲಿರುತ್ತವೆ. ಚಿಕ್ಕಪಡಸಲಗಿ ಬ್ಯಾರೇಜ ಅಡಿಯಲ್ಲಿ ೩ ಎಂವಿಎಸ್ ಯೋಜನೆಗಳಿದ್ದು, ೨೭ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವದಿಲ್ಲ. ಸದಸ್ಯದ ಪರಿಸ್ಥಿತಿಯಲ್ಲಿ ಚಿಕ್ಕಪಡಸಲಗಿ ಬ್ಯಾರೇಜನಿಂದ ಎಪ್ರೀಲ್ ಅಂತ್ಯದವರೆಗೆ ಮಾತ್ರ ನೀರು ಸರಬರಾಜು ಮಾಡಬಹುದಾಗಿದ್ದು, ಮೇ ಮಾಹೆಯಲ್ಲಿ ಹಿಪ್ಪರಗಿ ಬ್ಯಾರೇಜದಿಂದ ೦.೫ ಟಿಎಂಸಿ ನೀರು ಬಿಡುಗಡೆಗೊಳಿಸಿದಲ್ಲಿ ೨೭ ಗ್ರಾಮಗಳಿಗೆ ಜೂನ್ ಅಂತ್ಯವರೆಗೆ ನೀರು ಸರಬರಾಜು ಮಾಡಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಎಪ್ರೀಲ್ ತಿಂಗಳಲ್ಲಿ ೫೨ ಗ್ರಾಮ ಹಾಗೂ ಮೇ ತಿಂಗಳಲ್ಲಿ ೬೨ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಬಹುದಾಗಿದ್ದು, ತೊಂದರೆ ನಿವಾರಣೆಗೆ ಈಗಾಗಲೇ ೧೧೧ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ. ಸದ್ಯ ಗುಳೇದಗುಡ್ಡ ತಾಲೂಕಿನ ಚಿಮ್ಮಲಗಿ, ಇಲಕಲ್ಲ ತಾಲೂಕಿನ ಚಿಕ್ಕಕೊಡಗಲಿ ಗ್ರಾಮದಲ್ಲಿ ತೊಂದರೆಯಾಗಿದ್ದು, ಖಾಸಗಿ ಕೊಳವೆಬಾವಿ ಮೂಲಕ ಬಾಡಿಗೆ ಆಧಾರದ ಮೇಲೆ ನೀರು ಪೂರೈಸಲಾಗುತ್ತಿದೆ. ಪ್ರಸಕ್ತ ಸಾಲಿನ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ ಗ್ರಾಮಗಳಿಗೆ ಮುಂಜಾಗ್ರತೆ ಕ್ರಮವಾಗಿ ೨೦೬ ಕಾಮಗಾರಿಗಳಿಗೆ ೬೧೧.೮೯ ಲಕ್ಷಗಳಿಗೆ ಕ್ರೀಯಾ ಯೋಜನೆ ತಯಾರಿಸಲಾಗಿದೆ ಎಂದು ತಿಳಿಸಿದರು.
ಜಾನುವಾರುಗಳಿಗೆ ಅಗತ್ಯವಾದ ಮೇವು ಕೊರತೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಶು ಆಹಾರ ದಾಸ್ತಾನುಗಳನ್ನು ಸಿದ್ದವಾಗಿಡಲು ಹಾಗೂ ಅಗತ್ಯವಿರುವ ಕಡೆಗಳಿಗೆ ಮೇವು ಬ್ಯಾಂಕ್ ತೆರೆಯಲು ಕ್ರಮವಹಿಸಲು ತಿಳಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪವಿಭಾಗಾಧಿಕಾರಿಗಳಾದ ಸಂತೋಷ ಜಗಲಾಸರ, ಶ್ವೇತಾ ಬೀಡಿಕರ, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಎಸ್.ಎಚ್.ಕರಡಿಗುಡ್ಡ, ಗ್ರಾಮೀಣ ಕುಡಿಯುವ ನೀರಿನ ಯೋಜನೆ ಅಧಿಕಾರಿ ಆಕಾಶ ವಂದೆ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ ಎಂ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.


