ಅಥಣಿ: ಆಲಮಟ್ಟಿ ಜಲಾಶಯದ ಮಟ್ಟವನ್ನು ೫೨೪ ಮೀಟರ್ಗೆ ಹೆಚ್ಚಿಸಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ. ಇದರಿಂದ ರೈತರಿಗೆ ಬಹಳಷ್ಟು ಜಮೀನಿಗೆ ನೀರು ದೊರೆಯಲಿದ್ದು, ಅಮ್ಮಾಜೇಶ್ವರಿ ಮತ್ತು ಕರಿಮಸೂತಿ ಯೋಜನೆಗಳು ವರ್ಷದ ೯ ತಿಂಗಳು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಗ್ರಾಮದಲ್ಲಿ ಗ್ರಾಮದಲ್ಲಿ ೩೦ ಕೋಟಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ಕಾರ್ಯಾಂಗ ಮತ್ತು ಶಾಸಕಾಂಗ ಸಮನ್ವಯದಿಂದ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ. ಪ್ರಾಮಾಣಿಕ ಹಾಗೂ ಮಾನವೀಯ ಮೌಲ್ಯ ಹೊಂದಿದ ಅಧಿಕಾರಿಗಳು ಇದ್ದರೆ ಯಾವುದೇ ಕೆಲಸ ಅಸಾಧ್ಯವಲ್ಲ. ಅಮ್ಮಾಜೇಶ್ವರಿ, ಕರಿಮಸೂತಿ ಏತ ನೀರಾವರಿ ಯೋಜನೆಯಡಿ ೯ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ೨೦ ವರ್ಷಗಳವರೆಗೆ ರೈತರಿಗೆ ವಿದ್ಯುತ್ ಸಮಸ್ಯೆ ಆಗದಂತೆ ಯೋಜನೆ ರೂಪಿಸಲಾಗಿದೆ. ರೈತ ಮಕ್ಕಳಿಗೆ ಗ್ರಾಮದಲ್ಲೇ ಗುಣಮಟ್ಟದ ಶಿಕ್ಷಣ ಸಿಗಬೇಕು. ಕನ್ನಡದ ಜೊತೆಗೆ ಇಂಗ್ಲಿಷ್ ಶಿಕ್ಷಣವೂ ಅಗತ್ಯ ಎಂದು ಹೇಳಿದ ಅವರು, ನೀರಾವರಿ, ವಿದ್ಯುತ್, ರಸ್ತೆ ಹಾಗೂ ಶಿಕ್ಷಣ ಮೂಲಭೂತ ಸೌಕರ್ಯಗಳ ಮೇಲೆ ಒತ್ತು ನೀಡಲಾಗಿದೆ. ತಾಲ್ಲೂಕಿನಲ್ಲಿ ೧೧ ಹೊಸ ಆರೋಗ್ಯ ಕೇಂದ್ರಗಳನ್ನು ತರಲಾಗಿದ್ದು, ತೆಲಸಂಗ, ಐಗಳಿ ಹಾಗೂ ಕೊಕಟನೂರ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಜೊತೆಗೆ ೧೦೦ ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣವೂ ನಡೆಯುತ್ತಿದೆ. ಹಿಂದೆ ಒಬ್ಬರ ತಪ್ಪಿನಿಂದ ಅಥಣಿ ಬೇಡಿಕೆ ರಹಿತ ತಾಲೂಕಾಗಿತ್ತು. ಹೋರಾಟದ ಫಲವಾಗಿ ಇಂದು ಬೇಡಿಕೆ ಇರುವ ತಾಲೂಕಾಗಿದೆ. ಅಥಣಿ ರಾಜ್ಯದಲ್ಲೇ ಅತಿ ಹೆಚ್ಚು ಕಬ್ಬು ಬೆಳೆಯುವ ತಾಲೂಕು ಎಂದು ಹೇಳಿದ ಅವರು, ರೈತರಿಗೆ ತೂಕದಲ್ಲಿ ಮೋಸ ಮಾಡುವ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ೩೦೦ ಎಕರೆ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಿ ಭವಿಷ್ಯದಲ್ಲಿ ವಿದ್ಯುತ್ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಮಾತು ಕಡಿಮೆ, ಕೆಲಸ ಜಾಸ್ತಿ ಎನ್ನುವುದು ನನ್ನ ಧ್ಯೇಯ. ರಾಜಕಾರಣಕ್ಕಿಂತ ಅಭಿವೃದ್ಧಿ ಕಾರ್ಯಗಳು ಶಾಶ್ವತ. ಇಂದಿನ ರಾಜಕಾರಣದಲ್ಲಿ ಹಣದ ಲೆಕ್ಕಾಚಾರ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ೨೫ ವರ್ಷದ ರಾಜಕೀಯ ಅನುಭವ ಉಲ್ಲೇಖಿಸಿದ ಸವದಿ, ದೂರದೃಷ್ಟಿಯ ಯೋಜನೆಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಕೇಂದ್ರಿಯ ವಿದ್ಯಾಲಯ ಸ್ಥಾಪನೆ ಹಲವು ವರ್ಷಗಳ ಹೋರಾಟದ ಫಲ. ನಾನು ರೈತನ ಮಗ. ಟ್ರ?ಯಾಕ್ಟರ್ ಓಡಿಸಿ, ಹೊಲದಲ್ಲಿ ಕೆಲಸ ಮಾಡುತ್ತಲೇ ಬೆಳೆದಿದ್ದೇನೆ. ರೈತರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ನನ್ನ ಮೌನ ದೌರ್ಬಲ್ಯವಲ್ಲ. ನಾನು ಸಾಮ್ರಾಜ್ಯ ಕಟ್ಟಲು ಬಂದಿಲ್ಲ. ಜಾತಿ ಪಕ್ಷಾತೀತವಾಗಿ ರೈತರ ಸ್ವಾಭಿಮಾನ ಕಾಪಾಡಿ ಅಥಣಿಯ ಅಭಿವೃದ್ಧಿ ಮಾಡುವುದು ನನ್ನ ಗುರಿ ಎಂದು ಹೇಳಿದರು.
ಈಸಂದರ್ಭದಲ್ಲಿ ಹಿರಿಯರಾದ ಶೇಖರ ನೇಮಗೌಡ, ಸಿದರಾಯ ಯಲ್ಲಡಗಿ, ಶಿವು ಗುಡ್ಡಾಪೂರ, ಗುರು ದಾಶ್ಯಾಳ, ಅರವಿಂದ ಉಂಡೋಡಿ, ಅಧಿಕಾರಿಗಳಾದ ಜಿ.ವಿ.ಸಂಪನ್ನವರ, ಪ್ರವೀಣ ಹುಣಸಿಕಟ್ಟಿ, ಈರಣ್ಣ ವಾಲಿ, ಭರತೇಶ ನಂದೇಶ್ವರ, ಮಲ್ಲಿಕಾರ್ಜುನ ಮುಗದುಮ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ರೈತಕುಲಕ್ಕೆ ಅನ್ಯಾವಾದರೆ ಮೆಟ್ಟಿನಿಂದ ಹೊಡೆಯುವೆ ನಾನೂ ಕೂಡ ಹಳ್ಳಿಯಲ್ಲೇ ಹುಟ್ಟಿ ಬೆಳೆದವನು. ಕಬಡ್ಡಿ, ಗಿಲ್ಲಿ-ದಾಂಡು ಆಡುತ್ತಾ ಬೆಳೆದಿದ್ದೇನೆ. ಟ್ರಾಕ್ಟರ್ ಓಡಿಸುವುದು, ಹೊಲದ ಕೆಲಸ ಮಾಡುವುದು ನನ್ನ ಬದುಕು. ನನ್ನನ್ನು ಟ್ರಾಕ್ಟರ್ ಓಡಿಸಲು ಕಳಿಸುತ್ತೇನೆ ಎನ್ನುವವರಿಗೆ ಹೇಳುವುದಿಷ್ಟೇ; ಕೃಷಿ ಮಾಡುವುದು ನನಗೆ ಹೆಮ್ಮೆಯ ವಿಷಯ. ಆದರೆ ನನ್ನ ರೈತರಿಗೆ ಅನ್ಯಾಯವಾದರೆ ನಾನು ಸುಮ್ಮನಿರುವುದಿಲ್ಲ, ನನ್ನ ಮೌನ ದೌರ್ಬಲ್ಯವಲ್ಲ, ಸಂಸ್ಕಾರವಷ್ಟೇ. ನನಗೆ ಎತ್ತು, ಟ್ರಾಕ್ಟರ್ ಹೊಡೆಯುವುದು ಗೊತ್ತು ಪ್ರಸಂಗ ಬಂದರೆ ರೈತಕುಲಕ್ಕೆ ಅನ್ಯಾಯವಾದರೆ ಮೆಟ್ಟಿನಿಂದ ಹೊಡೆಯುವುದು ಗೊತ್ತು ಎಂದು ಕುಟುಕಿದರು.
