ಬಳ್ಳಾರಿ, ಮೇ.04.: ನಗರದ ಅಭಿವೃದ್ಧಿಗೆ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೊಡುಗೆ ಅಪಾರವಾಗಿದೆ. ಅವರ ರಾಜಕೀಯ ಜೀವನದ 50 ವರ್ಷಗಳ ಅಭಿಮಾನೋತ್ಸವವನ್ನು ಯಶಸ್ವಿಗೊಳಿಸೋಣ ಎಂಬ ಅಭಿಮತ ನಗರದ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ವ್ಯಕ್ತವಾಯ್ತು.
ಚಿತ್ರದುರ್ಗದಲ್ಲಿ ಮೇ 9 ರಂದು ಹಮ್ಮಿಕೊಂಡಿರುವ ಯಡಿಯೂರಪ್ಪನವರ ಅಭಿಮಾನೋತ್ಸವದ ಪೂರ್ವ ಸಿದ್ದತಾ ಸಭೆ ನಿನ್ನೆ ಸಂಜೆ ನಗರದ ವೀರಶೈವ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಭೆಯನ್ನು ಕುರಿತು. ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಕಾರ್ಯ ಒತ್ತಡದಿಂದ ದೂರವಾಣಿ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಿ, 50 ವರ್ಷಗಳ ರಾಜಕಾರಣ ಮಾಡಿರುವ ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು, ವಿವಿಧ ಮಠಾಧೀಶರು ಬರುತ್ತಾರೆ. ನೀವೆಲ್ಲಾ ಬನ್ನಿ ಎಂದು ವಿನಂತಿಸಿದರು.
ಕಾರ್ಯ ನಿಮಿತ್ತ ದೆಹಲಿಗೆ ತೆರಳಿದ್ದ ಗಂಗಾವತಿ ಶಾಸಕ ಜಿ. ಜನಾರ್ಧನರೆಡ್ಡಿ ಅವರು ಸಹ ದೂರವಾಣಿ ಮೂಲಕವೇ ಮಾತನಾಡಿ, ಯಡಿಯೂರಪ್ಪ ಆಶಿರ್ವಾದದಿಂದ ನಾವೆಲ್ಲ ಉತ್ತಮ ರಾಜಕೀಯ ಜೀವನ ಕಂಡುಕೊಂಡಿದ್ದೇವೆ. ಜೊತೆಗೆ ಬಳ್ಳಾರಿಯ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾದುದು. ಅವರ ರಾಜಕೀಯ ಜೀವನ ಚರಿತ್ರೆಯಲ್ಲಿ ಉಳಿಯುವಂತಹದು. ಇಂತಹ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು.
ನಗರದ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಮಾತನಾಡಿ, ನಾನು ಬಿಜೆಪಿ ಮುಖಂಡನಾಗಿ ಇಲ್ಲಿ ಬಂದಿಲ್ಲ. ಯಡಿಯೂರಪ್ಪ ಅಭಿಮಾನಿಯಾಗಿ ಬಂದಿರುವೆ. ಅವರ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಖಜಾನೆ ಖಾಲಿ ಆಗಿರಲಿಲ್ಲ. ನಗರದ ರಸ್ತೆಯ ಅಭಿವೃದ್ಧಿಗೆ ಪ್ರತಿವರ್ಷ 100 ಕೋಟಿ ರೂ ನೀಡಿದ್ದರು. ಅಂತಹ ಗಣ್ಯರ ಅಭಿಮಾನೋತ್ಸವಕ್ಕೆ ನಾವೆಲ್ಲ ತೆರಳೋಣ ಎಂದು ಮನವಿ ಮಾಡಿದರು.
ಮಾಜಿ ಸಂಸದ ಸಣ್ಣ ಪಕ್ಕೀರಪ್ಪ ಮಾತನಾಡಿ, ಯಡಿಯೂರಪ್ಪ ಅವರು ಶಿವಮೊಗ್ಗದಂತೆ ಬಳ್ಳಾರಿಯನ್ನು ಒಂದು ಕಣ್ಣಾಗಿ ನೋಡಿ ಬಳ್ಳಾರಿ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಪಕ್ಷಾತೀತವಾಗಿ ನಾವು ಅವರ ಅಭಿಮಾನೋತ್ಸವವನ್ನು ಯಶಸ್ವಿ ಮಾಡೋಣ ಎಂದರು.
ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಚ ವೀರಶೈವ ಮುಖಂಡ ಗುತ್ತಿಗನೂರು ವಿರೂಪಸಕ್ಷಗೌಡ ಮಾತನಾಡಿ, ಬಹುಜನಪ್ರಿಯವಾದ ನಮ್ಮ ವೀರಶೈವ ಸಮಾಜ. ಇಂತಹ ಸಮಾಜದ ಯಡಿಯೂರಪ್ಪ ಅವರು ಹೋರಾಟದ ಮೂಲಕ ರಾಜಕೀಯವಾಗಿ ಬೆಳೆದವರು. ಇಡೀ ರಾಜ್ಯದ ತುಂಬ ಸಂಚರಿಸಿ ಅತಿವೃಷ್ಟಿ, ಅನಾವೃಷ್ಠಿ ಸಂದರ್ಭದಲ್ಲಿ ಸರ್ವರಿಗೆ ಸಹಕಾರಿಯಾಗಿ ದುಡಿದವರು. ಅಂತವರ ಈ ಕಾರ್ಯಕ್ರಮಕ್ಕೆ ಬಹುಸಂಖ್ಯೆಯಲ್ಲಿ ತೆರಳೋಣ ಎಂದರು.
ಬಸವರಾಜೇಶ್ವರಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ
ಡಾ.ಎಸ್.ಜೆ.ವಿ.ಮಹಿಪಾಲ್ ಮಾತನಾಡಿ, ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ಮಾಡಿ, ವಿಶ್ವದ ಗಮನ ಸೆಳೆಯುವಂತ ಬಸವೇಶ್ವರ ವಿಗ್ರಹ ನಿರ್ಮಾಣ ಆಗಲು ಯಡಿಯೂರಪ್ಪನವರೇ ಕಾರಣ ಇಂತಹ ಮುಖಂಡನ ಅಭಿಮಾನೋತ್ಸವ ಯಶಸ್ವಿಯಾಗಿ ಮಾಡೋಣ ಎಂದರು.
ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ
ಅರವಿಂದ ಪಾಟೀಲ್ ಮಾತನಾಡಿ, ಮಠ ಮಾನ್ಯಗಳು ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರ, ಅಂತಹ ಮಠಗಳನ್ನು ಆರ್ಥಿಕವಾಗಿ ಸಬಲವಾಗಿ ಮಾಡಿದ ಕೆಲಸ ಯಡಿಯೂರಪ್ಪ ಅವರಿಂದ ಆಗಿದ್ದನ್ನು ಸ್ಮರಿಸಿದರೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ. ಕೆ.ಎಂ.ಮಹೇಶ್ವರ ಸ್ವಾಮಿ, ಕಳೆದ 50 ವರ್ಷಗಳಿಂದ ರಾಜಕೀಯ ಜೀವನದಲ್ಲಿರುವ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವ ಮೇ. 9 ರಂದು ಚಿತ್ರದುರ್ಗದಲ್ಲಿ ನಡೆಯಲಿದೆ. ನಾವೆಲ್ಲ ವೀರಶೈವ ಅಭಿಮಾನಿಗಳಾಗಿ ಹೋಗಿ ಸಮಾರಂಭವನ್ನು ಯಶಸ್ವಿಗೊಳಿಸ ಬೇಕಿದೆಂದರು.
ಈ ಸಮಾವೇಶದಲ್ಲಿ 10 ಲಕ್ಷ ಕ್ಕೂ ಹೆಚ್ಚು ಜನ ಸೇರಲಿದ್ದಾರೆ. ನಾವು ಬಳ್ಳಾರಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೋಗಬೇಕಿದೆಂದರು.
ಅಧ್ಯಕ್ಷತೆವಹಿಸಿದ್ದ ವೀರಶೈವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಜಾನೆಕುಂಟೆ ಬಸವರಾಜ್ ಮಾತನಾಡಿ, ಯಡಿಯೂರಪ್ಪ ಅವರಿಂದ ಬಳ್ಳಾರಿ ಅಭಿವೃದ್ಧಿಗೆ, ಜೊತೆಗೆ ಸಮಾಜದ ಶ್ರೇಯಸ್ಸಿಗೆ ನೀಡಿದ ಕೊಡುಗೆ ಅಪಾರ ಎಂದರು. ಚಿತ್ರದುರ್ಗಕ್ಕೆ ತೆರಳಲು ಬಸ್ ವ್ಯವಸ್ಥೆ ಮಾಡುತ್ತಿದೆ ಎಲ್ಲರೂ ಹೋಗೋಣ ಎಂದರು.
ನಮ್ಮಲ್ಲಿನ ಎಲ್ಲಾ ಪಂಗಡಗಳು ಒಗ್ಗಟ್ಟಾಗಿ ಅವರ ಕಾರ್ಯಕ್ರಮ ಯಶಸ್ಸು ಮಾಡೋಣ ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು ಮಾತನಾಡಿ, ಈ ಕಾರ್ಯಕ್ರಮಕ್ಕೆ ಎಲ್ಲಾ ಪಂಚ ಪೀಠಾದೇಶರು, ದಜ್ಷಿಣ ಭಾರತದ ಪ್ರಮುಖ ಮಠಾಧೀಶರು ಆಗಮಿಸಲಿದ್ದಾರೆ. ಸಮಾವೇಶದ ಹಿಂದಿನ ದಿನ ಇಲ್ಲ ಮೇ. 9 ರಂದೇ ಬೆಳಿಗ್ಗೆಯೇ ಇಲ್ಲಿಂದ ತೆರಳೋಣ ಎಂದರು
ಅಖಿಲ ಭಾರತ ವೀರಶೈವ ಮಹಾಸಭಾದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಕೋರಿ ವಿರೂಪಾಕ್ಷಪ್ಪ ಮಾತನಾಡಿ, ಯಡಿಯೂರಪ್ಪನವರು ರಾಜಕೀಯ ಚಾಣಕ್ಯ ಜೊತೆಗೆ ಸರ್ವ ಸಮಾಜವನ್ನು ಒಗ್ಗೂಡಿಸಿಕೊಂಡು ಹೋಗುವ ಶಕ್ತಿಯನ್ನು ಹೊಂದಿದರುವ ಮೇರು ವ್ಯಕ್ತಿದವರು. ನಾವೆಲ್ಲ ಭಾಗವಹಿಸೋಣ ಎಂದರು.
ಸಭೆಯಲ್ಲಿ ಮುಖಂಡರುಗಳಾದ
ಎಸ್.ಗುರುಲಿಂಗನಗೌಡ, ಮಿಂಚೇರಿ ನರೇಂದ್ರಬಾಬು, ಕಾತ್ಯಾಯಿನಿ ಮರಿದೇವಯ್ಯ, ರೇಣುಕಾ ಮಂಜುನಾಥ, ಹೆಚ್.ತಿಮ್ಮನಗೌಡ, ಎಸ್.ಜಿ. ಟಿ. ರುದ್ರಪ್ಪ, ನಡವಿ ವೀರಭದ್ರಗೌಡ, ಹಾವಿನಾಳ್ ಶರಣಪ್ಪ, ಎ.ಹೇಮರೆಡ್ಡಿ, ಜಯಪ್ರಕಾಶ್ ಗೌಡ, ಗಂಗಾವತಿ ವೀರೇಶ್, ಗೌರಿ ಶಂಕರ್ ಸ್ವಾಮಿ, ಮುರಹರಗೌಡ ಗೋನಾಳ್, ದರೂರು ಶಾಂತನಗೌಡ, ಗಾಳಿ ಶಂಕ್ರಪ್ಪ, ಶ್ರೀಧರಗಡ್ಡೆ ಸಿದ್ದಲಿಂಗಪ್ಪ ಮೊದಲಾದವರು ಇದ್ದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಬಿಚ್ಚುಗಲ್ ಪಂಚಾಕ್ಷರಪ್ಪ ಸ್ವಾಗತಿಸಿದರೆ, ಕೋಳೂರು ಚಂದ್ರಶೇಖರಗೌಡ ಕಾರ್ಯಕ್ರಮ ನಿರೂಪಣೆ.