ಬಳ್ಳಾರಿ, ಮೇ 06.: ವಿಶ್ವ ಬ್ರಾಹ್ಮಣ ವೈದಿಕ ಪ್ರತಿಷ್ಠಾನ ಟ್ರಸ್ಟ್ (ರಿ) ಬಳ್ಳಾರಿ ವತಿಯಿಂದ ಸಂಸ್ಕೃತ ಭಾರತಿ ಕರ್ನಾಟಕ ಉತ್ತರಂ ಹಾಗೂ ಶ್ರೀ ವಾಚಸ್ಪತಿ ಸಂಸ್ಕೃತ ಗುರುಕುಲದ ಸಹಯೋಗದಲ್ಲಿ ಏಪ್ರಿಲ್ 21ರಿಂದ ಮೇ 1ರವರೆಗೆ ಆಯೋಜಿಸಲಾದ ವಸಂತ ಸಂಸ್ಕೃತ ಶಿಬಿರ 2026 ಯಶಸ್ವಿಯಾಗಿ ನಡೆಯಿತು.
ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಮತ್ತು ಭಾರತೀಯ ಪರಂಪರೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಈ ಶಿಬಿರದಲ್ಲಿ ಪ್ರತಿದಿನವೂ ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಶಿಬಿರವನ್ನು ಶಂಕರಾಚಾರ್ಯ ಜಯಂತಿಯ ಅಂಗವಾಗಿ ಆನೆಗೂಂದಿ ಮಹಾಸಂಸ್ಥಾನ ಮಠದ ಶ್ರೀ ಕಾಳಹಸ್ತೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಕೃತ ಭಾರತಿ ಕಾರ್ಯಕರ್ತರು ಹಾಗೂ ರುದ್ರಗುರುಕುಲದ ಗುರುಗಳಾದ ಮಹಾಂತೇಶ ಶಾಸ್ತ್ರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಳಿಕಾಂಬಾ ದೇವಸ್ಥಾನದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು ಸಹ ಉಪಸ್ಥಿತರಿದ್ದರು.
ಶಿಬಿರದಲ್ಲಿ ಶಿಕ್ಷಕ ಹಾಗೂ ಸಂಗೀತಗಾರರಾದ ವಸುದ ಅವರು ಮಕ್ಕಳಿಗೆ ಸ್ತೋತ್ರ ಮತ್ತು ಭಜನೆಗಳನ್ನು ಕಲಿಸಿದರು. ಕಾಳಿಕಾಂಬಾ ದೇವಸ್ಥಾನದ ಅಧ್ಯಕ್ಷರಾದ ರವೀಂದ್ರ ಆಚಾರ್ಯ ಅವರು ಯೋಗಾಸನ ತರಬೇತಿ ನೀಡಿದರು. ಬಳ್ಳಾರಿಯ ಇಸ್ಕಾನ್ ದೇವಸ್ಥಾನದ ಸಂಕೀರ್ತನಕಾರರು ಮಕ್ಕಳಿಗೆ ಸಂಕೀರ್ತನೆ ಮಾಡಿಸಿದರು.
ಚಿತ್ರಕಲೆ ಕ್ಷೇತ್ರದಲ್ಲಿ ಖ್ಯಾತಿ ಪಡೆದ ಮಲ್ಲಿಕಾರ್ಜುನ ಅಪಗುಂಡಿ ಅವರು ಮಕ್ಕಳಿಗೆ ಚಿತ್ರಕಲಾ ತರಬೇತಿ ನೀಡಿದರೆ, ರಾಷ್ಟ್ರೋತ್ಥಾನ ಸಂಘದ ಕಾರ್ಯಕರ್ತರಾದ ಪ್ರಸನ್ನ ಅವರು ವಿವಿಧ ಕ್ರೀಡೆಗಳನ್ನು ನಡೆಸಿಕೊಟ್ಟರು. ದ್ವಾದಶ ಜ್ಯೋತಿರ್ಲಿಂಗಗಳ ಕುರಿತು ಮಕ್ಕಳಿಂದ ಪೌರಾಣಿಕ ವಿವರಣೆಗಳನ್ನು ನೀಡಲಾಯಿತು.
ಸಂಸ್ಕೃತ ಉಪನ್ಯಾಸಕರಾದ ಪಾಂಡುರಂಗ ಆಚಾರ್ಯ ಅವರು ಸಂಸ್ಕಾರಪರ ಉಪನ್ಯಾಸ ನೀಡಿದರು. ಪೋಷಕರ ಮಹತ್ವ ತಿಳಿಸಲು ಮಾತೃ ವಂದನೆ ಕಾರ್ಯಕ್ರಮವನ್ನು ಆಯೋಜಿಸಿ, ಮಕ್ಕಳು ತಂದೆ-ತಾಯಿಯ ಪಾದ ಪೂಜೆ ನೆರವೇರಿಸಿದರು.
ಇದಲ್ಲದೆ, ಸಂಸ್ಕೃತ ನೃತ್ಯ, ನಾಟಕ ತರಬೇತಿಯನ್ನು ಶ್ರೀ ವಿಶ್ವರೂಪ ಆಚಾರ್ಯ ಅವರು ನೀಡಿದರು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಬಳ್ಳಾರಿಯ ಶಂಕರಮಠದ ಧರ್ಮಾಧಿಕಾರಿಗಳಾದ ಬಿ.ಕೆ.ಬಿ.ಎನ್. ಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಳಿಕಾಂಬಾ ದೇವಸ್ಥಾನದ ಅಧ್ಯಕ್ಷರಾದ ರವೀಂದ್ರ ಆಚಾರ್ಯ ವಹಿಸಿದ್ದರು.
ಕಾರ್ಯಕ್ರಮಕ್ಕೆ ಸಂಸ್ಕೃತ ಉಪನ್ಯಾಸಕರಾದ ವೆಂಕಟೇಶ್ ಯಾದವ್ ಸ್ವಾಗತ ಕೋರಿದರು. ಶಿಕ್ಷಕರಾದ ವಸುದ ಅವರು ಕಾರ್ಯಕ್ರಮ ನಿರೂಪಣೆ ಮತ್ತು ಸಹಕಾರ ನೀಡಿದರು.
ಸಮಾರೋಪದಲ್ಲಿ ಮಕ್ಕಳಿಂದ ಸಂಸ್ಕೃತ ನೃತ್ಯ, ಭರತನಾಟ್ಯ, ಸ್ತೋತ್ರ ಪಠಣ, ಆದಿ ಶಂಕರಾಚಾರ್ಯ ನಾಟಕ ಹಾಗೂ ವಿಧಿ ವಿಲಾಸಿತಂ ಸಂಸ್ಕೃತ ನಾಟಕ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿತು.
ಈ ಶಿಬಿರಕ್ಕೆ ಸ್ಥಳವಕಾಶ ವ್ಯವಸ್ಥೆ ಮತ್ತು ಸಂಪೂರ್ಣ ಸಹಕಾರವನ್ನು ವಿಶ್ವ ಬ್ರಾಹ್ಮಣ ವೈದಿಕ ಪ್ರತಿಷ್ಠಾನ ಟ್ರಸ್ಟ್ (ರಿ) ಹಾಗೂ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಒದಗಿಸಿತು.
ಶಿಬಿರದ ಸಂಚಾಲಕರಾಗಿ ಸಂಸ್ಕೃತ ಶಿಕ್ಷಕರೂ ಸಾಹಿತಿಗಳೂ ಆದ ಶ್ರೀ ವಿಶ್ವರೂಪ ಆಚಾರ್ಯ ಕಾರ್ಯನಿರ್ವಹಿಸಿದರು.
