ಕೊಪ್ಪಳ ಮೇ ೧೩: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮೇ ೧೬ ಮತ್ತು ಮೇ ೧೭ರಂದು ನಿಗದಿಯಾದ, ಕನಕಗಿರಿಯ ಗತವೈಭವದ ಬಿಂಬಿಸುವ ಕನಕಗಿರಿ ಉತ್ಸವ-೨೦೨೬ಕ್ಕೆ ಅಂತಿಮ ಹಂತದ ಸಿದ್ಧತೆಗಳು ಯುದ್ದೋಪಾದಿಯಲ್ಲಿ ಸಾಗಿದೆ ಎಂದು ಕನಕಗಿರಿ ಉತ್ಸವ ೨೦೨೬ರ ಆಚರಣಾ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ ಇಟ್ನಾಳ ಅವರು ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಮೇ ೧೨ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ಸವದ ನಿಮಿತ್ತ ಮೇ ೧೪ ಮತ್ತು ಮೇ ೧೫ರಂದು ವಾಲಿಬಾಲ್, ಕಬಡ್ಡಿ ಮತ್ತು ಕುಸ್ತಿ ಪಂದ್ಯಗಳು ನಡೆಯಲಿವೆ. ಮೇ ೧೬ರಂದು ಎದುರು ಹನುಮಪ್ಪ ದೇವಸ್ಥಾನದಿಂದ ಕನಕಾಚಲಪತಿ ದೇವಾಲಯದವರೆಗೆ ಸುಮಾರು ೪೦ ಕಲಾ ತಂಡಗಳಿಂದ ಮೆರವಣಿಗೆ ನಡೆಯಲಿದೆ. ಅಂದು ಸಂಜೆ ೬.೩೦ಕ್ಕೆ ಮುಖ್ಯಮಂತ್ರಿಗಳು ಉತ್ಸವವನ್ನು ಉದ್ಘಾಟಿಸುವರು. ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಚಿವರು, ಸಂಸದರು, ಶಾಸಕರು ಸೇರಿದಂತೆ ಎಲ್ಲ ಗಣ್ಯ ಮಹನಿಯರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುತ್ತಿದೆ.
ಮೇ ೧೬ರಂದು ಮೊದಲನೇ ದಿನ ಖ್ಯಾತ ಚಲನಚಿತ್ರ ನಟ ಶ್ರೀ ಮುರಳಿ, ಗಾಯಕರಾದ ಸಂಚಿತ್ ಹೆಗಡೆ, ಸವಾರಿ ಬ್ಯಾಂಡ್ ಮತ್ತು ಡಿಕೆಡಿ ಡ್ಯಾನ್ಸ್ ತಂಡದಿಂದ ವೈವಿದ್ಯಮಯ ಕಾರ್ಯಕ್ರಮಗಳು ನಡೆಯಲಿವೆ.
ಮೇ ೧೭ರಂದು ಸಂಜೆ ೬.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಎರಡನೇ ದಿನ ಚಲನಚಿತ್ರ ನಟ ಡಾಲಿ ಧನಂಜಯ, ಚಲನಚಿತ್ರ ನಟಿ ಸಪ್ತಮಿ ಗೌಡ, ಗಾಯಕರಾದ ಅರ್ಜುನ ಜನ್ಯ, ಸಾದ್ವಿನಿ ಕೊಪ್ಪ, ಐಶ್ವರ್ಯ ರಂಗರಾಜನ್ಯ ಅವರಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕೂಹು ನಾಟಕ ಪ್ರದರ್ಶನ ಕೂಡ ಇರುತ್ತದೆ. ಮೇ ೧೬ ಮತ್ತು ಮೇ ೧೭ರಂದು ಎರಡೂ ದಿನವೂ ಕಾರ್ಯಕ್ರಮದ ಸ್ಥಳದಲ್ಲಿ ಮೈಸೂರ ದಸರಾ ಉತ್ಸವದ ಮಾದರಿಯಲ್ಲಿ ಆಕರ್ಷಕ ಡ್ರೋನ್ ಶೋ ನಡೆಯಲಿದೆ ಇರುತ್ತದೆ.
ಮುಖ್ಯ ವೇದಿಕೆ ರಾಜ ಉಡಚಪ್ಪ ನಾಯಕ ಮತ್ತು ಉಪ ವೇದಿಕೆ ಜಯತೀರ್ಥ ರಾಜಪುರೋಹಿತ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಮೇ ೧೬ರಂದು ಕನಕಗಿರಿ ಪರಂಪರೆ ಮತ್ತು ಪ್ರಗತಿ ಮೇಲೆ ವಿಚಾರಗೋಷ್ಠಿ ನಡೆಯಲಿದೆ. ಮೇ ೧೭ರಂದು ಮಹಿಳೆ ವರ್ತಮಾನದ ತಲ್ಲಣಗಳು ವಿಷಯದ ಮೇಲೆ ಮಹಿಳಾಗೋಷ್ಠಿ ನಡೆಯಲಿದೆ. ಕವಿಗಳಿಂದ ಕವಿತಾ ವಾಚನ ಇರುತ್ತದೆ. ಡ್ರೋನ್ ಶೋ, ಕನಕಗಿರಿ ಪಟ್ಟಣಕ್ಕೆ ದೀಪಾಲಂಕಾರ ಮತ್ತು ಹೆಲಿಕ್ಯಾಪ್ಟರ್ ರೈಡ್ ಉತ್ಸವದ ವಿಶೇಷತೆಗಳಾಗಿವೆ ಎಂದು ಅವರು ತಿಳಿಸಿದರು.
ಸಾರ್ವಜನಿಕರಲ್ಲಿ ಮನವಿ: ಕನಕಗಿರಿ ಉತ್ಸವವು ಈ ಬಾರಿ ಬೇರೆ ಬೇರೆ ವಿಶೇಷತೆಗಳನ್ನು ಹೊಂದಿದೆ. ಉತ್ಸವಕ್ಕೆ ಆಗಮಿಸಲಿರುವ ಜನತೆಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ಸಿನ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಪುಸ್ತಕ ಪ್ರಾಧಿಕಾರದಿಂದ ಪುಸ್ತಕ ಮಳಿಗೆ, ವಿವಿಧ ಇಲಾಖೆಗಳಿಂದ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯ ಮಳಿಗೆಗಳು, ಸ್ವಸಹಾಯ ಸಂಘಗಳಿಂದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು, ತೋಟಗಾರಿಕಾ ಇಲಾಖೆಯಿಂದ
ಫಲಪುಷ್ಪ ಪದರ್ಶನ ಸೇರಿದಂತೆ ನಾನಾ ವಿಶೇಷತೆಯ ಉತ್ಸವಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ ಅವರು ಕೊಪ್ಪಳ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಉಪಸ್ಥಿತರಿದ್ದರು.
