ಬಳ್ಳಾರಿ, ಜು. 02:: ನಗರದ ವಾಲ್ಮೀಕಿ ಸರ್ಕಲ್ ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಆರು ತಿಂಗಳಾದರೂ ಅನಾವರಣಗೊಳಿಸದಿರುವುದನ್ನು ಖಂಡಿಸಿ, ಇಂದು ವಾಲ್ಮೀಕಿ ಸಮಾಜದ ಮುಖಂಡರು ಪುತ್ತಳಿಯನ್ನು ಅನಾವರಣಗೊಳಿಸಿ , ಲೋಕಾರ್ಪಣೆ ಗೊಳಿಸಬೇಕೆಂದು ಜಿಲ್ಲಾಡಳಿತ ಮತ್ತು ಸರ್ಕಾರವನ್ನು ಒತ್ತಾಯಿಸಿದರು.
ಈ ಕುರಿತು ಅವರಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಮತ್ತು ಭೂಮಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ, ಪುತ್ಥಳಿಗೆ ಹೊದಿಸಿರುವ ಬಟ್ಟೆಯನ್ನು ಕೂಡಲೇ ತೆರವುಗೊಳಿಸಿ ವಾಲ್ಮೀಕಿ ಸಮಾಜಕ್ಕೆ ಮತ್ತು ಸಾರ್ವಜನಿಕರಿಗೆ ಪೂಜೆ, ಮಾಲಾರ್ಪಣೆ ಹಾಗೂ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ಜಿಲ್ಲಾ ಘಟಕದ ನೇತೃತ್ವದಲ್ಲಿ ನೂರಾರು ಜನ ವಾಲ್ಮೀಕಿ ಮುಖಂಡರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಕಾಗೆ ಪಾರ್ಕ್ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ರಾಯಲ್ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು. ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಸಮಾಜದ ಮುಖಂಡರು, ಯುವಕರು ಹಾಗೂ ಮಹಿಳೆಯರು ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್. ಮುದಿಮಲ್ಲಯ್ಯ, ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಅನುದಾನದಲ್ಲಿ ಎಸ್ಪಿ ವೃತ್ತದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಿಸಲಾಗಿದೆ. ಅನಾವರಣಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದರೂ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ಕಾರ್ಯಕ್ರಮವನ್ನು ಮುಂದೂಡಲಾಗಿದೆ. ತಿಂಗಳುಗಳು ಕಳೆದರೂ ಪುತ್ಥಳಿ ಅನಾವರಣಗೊಳ್ಳದಿರುವುದು ವಾಲ್ಮೀಕಿ ಸಮಾಜದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದು, ಇದು ಶ್ರೀ ಮಹರ್ಷಿ ವಾಲ್ಮೀಕಿಯವರಿಗೆ ಸಲ್ಲಿಸಿರುವ ಅಗೌರವವಾಗಿದೆ ಎಂದು ಆರೋಪಿಸಿದ ಮುದುಮಲ್ಲಯ್ಯ, ಇನ್ನು ಒಂದು ತಿಂಗಳ ಕಾಲಾವಧಿಯಲ್ಲಿ ವಾಲ್ಮೀಕಿ ಪುತ್ಥಳಿಯನ್ನು ಲೋಕಾರ್ಪಣೆ ಗೊಳಿಸಿದೆ ಇದ್ದಲ್ಲಿ ವಾಲ್ಮೀಕಿ ಸಮಾಜದ ಸರ್ವ ಜನರಿಂದ ಪುತ್ತಳಿಯನ್ನು ನಾವೇ ಸ್ವತಃ ಅನಾವರಣಗೊಳಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುತ್ತೇವೆ ಎಂದು
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಸುರೇಶ್ ಮಾತನಾಡಿ, ಜನಪ್ರತಿನಿಧಿಗಳ ನಡುವಿನ ಭಿನ್ನಾಭಿಪ್ರಾಯ ಅಥವಾ ರಾಜಕೀಯ ಕಾರಣಗಳಿಂದ ಸಮಾಜದ ಭಾವನೆಗಳನ್ನು ಕಡೆಗಣಿಸಬಾರದು. ಸರ್ಕಾರ ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಒಂದು ತಿಂಗಳೊಳಗೆ ಪುತ್ಥಳಿಯ ಅನಾವರಣ ಕಾರ್ಯಕ್ರಮವನ್ನು ನಡೆಸಬೇಕು. ಇಲ್ಲವಾದಲ್ಲಿ ಸಮಸ್ತ ವಾಲ್ಮೀಕಿ ಸಮಾಜದ ಸಾವಿರಾರು ಜನರೊಂದಿಗೆ ತಾವೇ ಪುತ್ಥಳಿಯನ್ನು ಅನಾವರಣಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಎನ್. ಸತ್ಯನಾರಾಯಣ, ಹಿರಿಯ ವಕೀಲರಾದ ಬಿ. ಜಯರಾಮ್, ಜನಾರ್ಧನ ನಾಯಕ, ಬಿ. ರುದ್ರಪ್ಪ, ಎನ್. ದುರ್ಗಪ್ಪ, ಗಾದಿಲಿಂಗಪ್ಪ, ಬೆಣಕಲ್ ಸುರೇಶ್, ಗೋಪಾಲ್, ಸಿಂದಿಗೆರಿ ಗೋವಿಂದಪ್ಪ ಅಲ್ಲಿ ಪುರ ಲೋಕೇಶ್ ಕುರಿಹಟ್ಟಿ ಭಾಸ್ಕರ್ ಮಲ್ಲಿಕಾರ್ಜುನ ರಾಮಾಂಜಿನಪ್ಪ, ಈರಣ್ಣ ಸೇರಿದಂತೆ ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಮಾಜದ ನೂರಾರು ಸದಸ್ಯರು ಭಾಗವಹಿಸಿದ್ದರು.