ನೇಸರಗಿ: ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಹಾಗೂ ಕೃಷಿ ಇಲಾಖೆ ಸವದತ್ತಿ ಇವರ ಇವರ ಸಹಯೋಗದಲ್ಲಿ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಡಿ ಎಣ್ಣೆಕಾಳು ಬೆಳೆಗಳ ಸುಧಾರಿತ ಉತ್ಪಾದನಾ ತಾಂತ್ರಿಕತೆಗಳ ಕುರಿತು ತರಬೇತಿಯನ್ನು ಸವದತ್ತಿ ತಾಲೂಕಿನ ರುದ್ರಾಪುರ ಹಾಗೂ ಹಾರುಗೊಪ್ಪ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಎಸ್. ಎಮ್. ವಾರದ ಮಾತನಾಡಿ, ದೇಶದಲ್ಲಿ ಕೃಷಿಯಲ್ಲಿ ಹಸಿರುಕ್ರಾಂತಿಯಾಗಿದೆ. ಆಹಾರ ಸ್ವಾವಲಂಬನೆ ಜೊತೆಗೆ ಪೋಷಕಾಂಶಗಳ ಭದ್ರತೆಗೆ ಒತ್ತು ನೀಡಲಾಗುತ್ತಿದೆ. ನಾವು ಸುಮಾರು ೧.೫೦ ಲಕ್ಷ ಕೋಟಿ ರೂಪಾಯಿ ಮೊತ್ತದ ಖಾದ್ಯತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ದೇಶದಲ್ಲಿ ಎಣ್ಣೆಕಾಳು ಬೆಳೆಗಳಾದ ಸೋಯಾಬಿನ್, ಶೇಂಗಾ, ಸೂರ್ಯಕಾಂತಿ, ಕುಸುಬೆ, ಅಗಸೆ ಮುಂತಾದ ಖಾದ್ಯತೈಲ ಬೆಳಗಳ ಇಳುವರಿಯನ್ನು ಅಧಿಕ ಇಳುವರಿ ನೀಡುವ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ತಳಿಗಳನ್ನು ಹಾಗೂ ಸೂಕ್ತ ಉತ್ಪಾದನಾ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ವ್ಯವಸಾಯ ಮಾಡುವುದರಿಂದ ದೇಶವು ಎಣ್ಣೆ ಕಾಳು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಕೆಲಸ ನಿರ್ವಹಿಸಬೇಕಾಗಿದೆ ಎಂದು ಮಾಹಿತಿ ನೀಡಿದರು. ಈ ದಿಸೆಯಲ್ಲಿ ರೈತರು ಅಧಿಕ ಇಳುವರಿ ನೀಡುವ ತಳಿಗಳಿಗೆ ಸೂಕ್ತ ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಬೇಕು, ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರಗಳನ್ನು ಬಳಸಬೇಕು ಹಾಗೂ ಈ ಗ್ರಾಮಗಳಲ್ಲಿ ಸೋಯಾಬಿನ್ ಬೆಳೆಯನ್ನು ಅಧಿಕವಾಗಿ ಬೆಳೆಯುತ್ತಿದ್ದು, ಈಗ ಬೆಳೆದಿರುವ ಸೋಯಾಬಿನ್ ಬೆಳೆಗೆ ಹಸಿರು ಕಾಯಿಕೊರಕ /ಹೆಲಿಕೊವರ್ಪಾ ಕೀಟದ ಹಾವಳಿ ಕಂಡುಬರುತ್ತಿದ್ದು, ಈ ಕೀಟದ ಹತೋಟಿಗಾಗಿ ಕ್ಲೋರಾಂಟ್ರಿನಿಲಿಪ್ರೊಲ್ ೧೮.೫% ಎಸ್. ಸಿ. ಯನ್ನು ಪ್ರತಿ ಲೀಟರ ನೀರಿಗೆ ೦.೩ ಮಿ.ಲೀ ನಂತೆ ಬೆರೆಸಿ ಸಿಂಪರಣೆ ಮಾಡಬೇಕು. ಕಾಂಡಕೊರಕದ ಹತೋಟಿಗಾಗಿ ಥಯಾಮೆಥಾಕ್ಸಾಮ್ ೧೨.೬% ಮತ್ತು ಲ್ಯಾಂಬ್ಡಾಸೈಲ್ಹೋಥ್ರೀನ್ ೯.೫ % ಹೊಂದಿದ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ೧ ಮಿ.ಲೀ. ನಂತೆ ಬೆರೆಸಿ ಸಿಂಪರಣೆ ಮಾಡಬೇಕೆಂದು ತಿಳಿಸಿದರು.
ಮುರಗೋಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀ ಎಮ್. ಎ. ಅಮಟೆ ಮಾತನಾಡಿ, ಎಣ್ಣೆಕಾಳು ಬೆಳೆಗಳ ಸಸ್ಯ ಸಂರಕ್ಷಣೆಗೆ ಬೇಕಾಗುವ ರೋಗ/ಕೀಟನಾಶಕಗಳು ಕೃಷಿ ಇಲಾಖೆಯ ಮೂಲಕ ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು. ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಶ್ರೀಮತಿ ಶ್ವೇತಾ ಕೋಟಗಿ ಪ್ರಾಸ್ತಾವಿಕ ಮಾತನಾಡಿದರು.ಕಾರ್ಯಕ್ರಮದಲ್ಲಿ ೧೦೦ ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.