ತಾಳಿಕೋಟೆ, ಜು,೧೬ : ಪಟ್ಟಣದ ಸಕಲ ಜನರ ಆರಾಧ್ಯ ದೇವಿ ಶ್ರೀ ಗ್ರಾಮದೇವತೆ(ದ್ಯಾಮವ್ವದೇವಿ) ಜಾತ್ರಾ ಮಹೋತ್ಸವವು ಇದೇ ದಿ.೧೭ ರಿಂದ ೨೧ರವರೆಗೆ ವಿಜೃಂಬಣೆಯಿಂದ ಜರುಗಲಿದೆ.
ದಿ. ೧೭ ಶುಕ್ರವಾರರಂದು ಬೆಳಿಗ್ಗೆ ೮ ಗಂಟೆಗೆ ಶ್ರೀ ಹೇಮರಡ್ಡಿ ಮಲ್ಲಮ್ಮ ತಾಯಿ ದೇವಸ್ಥಾನದಿಂದ ಶ್ರೀ ಗ್ರಾಮದೇವಿ(ದ್ಯಾಮವ್ವದೇವಿ) ಮಹಾ ಮೂರ್ತಿಯನ್ನು ಭವ್ಯ ರಥದಲ್ಲಿ ಕೂಡ್ರಿಸಿದ ನಂತರ ಮೇರವಣಿಗೆಗೆ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಚಾಲನೆ ನೀಡುವವರು.
ಮೇರವಣಿಗೆಯಲ್ಲಿ ರಾಜವಾಡೆಯ ಶ್ರೀ ದೇವಿ ಕೋಲಾಟ, ಡೊಳ್ಳಿನ ಮೇಳ, ಭಂಟವಾಳದ ಚಿಲಿಪಿಲಿ ಗೊಂಬೆ ಕುಣಿತ, ಮಹಿಷಾಸುರ ಮರ್ಧಿನಿ ಚಂಡಿ ಮೇಳ, ಕರಡಿ ಮಜಲು, ಶೋಭಾ ಜೋಗತಿ ತಂಡ, ಜೈ ಹನುಮಾನ ಸಾಂಬಳ ಕರಡಿ ಮಜಲು, ಬಾಜಾ ಭಜಂತ್ರಿ ಹಾಗೂ ಕರಡಿ ಮಜಲು, ನಾಶಿಕ ಡೋಲ ಕಲಾ ತಂಡ, ಸಿಡಿ ಮದ್ದು, ಒಳಗೊಂಡು ವಿವಿಧ ವಾದ್ಯ ಮೇಳಗಳೊಂದಿಗೆ ಶ್ರೀ ದೇವಿಯ ಮೇರವಣಿಗೆಯು ಅಂಬೇಡ್ಕರ್ ವೃತ್ತ, ಶ್ರೀ ಅಂಬಾಭವಾನಿ ಮಂದಿರ ರಸ್ತೆ, ಕತ್ರಿ ಭಜಾರ ಮಾರ್ಗವಾಗಿ ರಾಜವಾಡೆಯಲ್ಲಿರುವ ಶ್ರೀದೇವಿಯ ಪಾದಗಟ್ಟೆಗೆ ತಲುಪುವದು. ನಂತರ ಶ್ರೀದೇವಿಗೆ ಭಕ್ತಾಧಿಗಳು ವಿಶೇಷ ಪೂಜೆಯೊಂದಿಗೆ ಹರಕೆ ಸಲ್ಲಿಸುವರು.
ಅಂದೇ ರಾತ್ರಿ ೧೦-೩೦ ಗಂಟೆಗೆ ಶ್ರೀದೇವಿಯ ಬಯಲಾಟ ಜರುಗಲಿದೆ.
ದಿ. ೧೮ ಶನಿವಾರರಂದು ಮುಂಜಾನೆ ೯ ಗಂಟೆಯಿಂದ ೨ ಗಂಟೆಯವರೆಗೆ ಗೋಲಭಾವಿಯ ಶ್ರೀ ದುರ್ಗಾದೇವಿ ಗೀಗೀ ಗಾಯನ ಸಂಘ ಮತ್ತು ಕಣದಾಳ ಶ್ರೀ ಹುಲಿಕಾಂತೇಶ್ವರ ಹರದೇಶಿ ಗೀಗೀಪದ ಕಲಾಮೇಳದವರಿಂದ ಗೀಗೀಪದ ಜರುಗುವದು. ಸಂಜೆ ೬ ಗಂಟೆಯಿಂದ ಸ್ಟಾಟ್ ಲೈಟ್ ಕಲಾತಂಡ ವಿಜಯಪುರ ವಿರೇಶ ವಾಲಿ ಇವರಿಂದ ರಸಮಂಜರಿ ಹಾಗೂ ಹಾಸ್ಯ ಕಾರ್ಯಕ್ರಮ ಜರುಗಲಿದ್ದು ಸರಿಗಮಪ ಖ್ಯಾತಿಯ ಕದಂಬ ರಂಗಯ್ಯ, ವರುಣಾ ಚವ್ಹಾಣ, ಸಂಗೀತ ಹಾಗೂ ಜ್ಯೂ.ಪುನಿತರಾಜಕುಮಾರ ಖ್ಯಾತಿಯ ರಾಘವೇಂದ್ರ ಬಸ್ತಿ ಮತ್ತು ಜ್ಯೂ.ದೀನಿಶ್ಫಾಯರ್ ಡ್ಯಾನ್ಸ್ ಮಂಗಳೂರ ಇವರಿಂದ ಜರುಗಲಿದೆ. ರಾತ್ರಿ ೧೦-೩೦ ಗಂಟೆಗೆ ಶ್ರೀ ವಿಶ್ವಜ್ಯೋತಿ ಪಂಚಾಕ್ಷರಿ ನಾಟ್ಯ ಸಂಘ ಜೇವರ್ಗಿ ಅವರಿಂದ ಮುತ್ತಿನಂತ ಅತ್ತಿಗೆ ಎಂಬ ಸಾಮಾಜಿಕ ನಾಟಕ ಜರುಗುವದು.
ದಿ. ೧೯ ರವಿವಾರರಂದು ಬೆಳಿಗ್ಗೆ ೯ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ಗೀಗೀ ಪದ ಮತ್ತು ಬೆಳಿಗ್ಗೆ ೧೦ ಗಂಟೆಗೆ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿ ಜರುಗಲಿದೆ ವಿಜೇತ ತಂಡಕ್ಕೆ ಪ್ರಥಮ ಭಹುಮಾನ ೩೦ ಸಾವಿರ, ದ್ವಿತೀಯ ಭಹುಮಾನ ೨೦ ಸಾವಿರ, ತೃತೀಯ ಭಹುಮಾನ ೧೫ ಸಾವಿರ, ನಾಲ್ಕನೇ ಭಹುಮಾನ ೧೦ ಸಾವಿರ ನೀಡಲಾಗುತ್ತಿದೆ. ಸಾಯಂಕಾಲ ೬-೩೦ ಗಂಟೆಗೆ ಶ್ರೀ ಮದಾನಾಗುಂದಿ ಸಂಸ್ಥಾನ ಸರಸ್ವತಿ ಪೀಠ ವಿಶ್ವಕರ್ಮ ಏಕದಂಡಿಮಠ ಶಾಹಾಪೂರ ಇವರಿಂದ ಹಾಸ್ಯದೊಂದಿಗೆ ನೀತಿ ಪ್ರವಚನ, ಕನಸಿನ ಭೂತ ದೇವಿ ಪುರಾಣ ಜರುಗುವದು. ಅಂದೇ ರಾತ್ರಿ ೯-೩೦ ಗಂಟೆಗೆ ಝೀ ಕನ್ನಡ ವಾಹಿನಿ ಉತ್ತರ ಕರ್ನಾಟಕ ಕಾಮಿಡಿ ಕಿಲಾಡಿ ವಿನ್ನರ್ ಮಹಾಂತೇಶ ತಾಳಿಕೋಟಿ ಇವರಿಂದ ಉತ್ತರ ಕರ್ನಾಟಕದ ಜಾನಪದ ಹಾಗೂ ಹಾಸ್ಯ ಸಂಭ್ರಮ ಶಬ್ಬೀರ ಢಾಂಗೆ, ರಮೇಶ ಕುರುಬಗಟ್ಟಿ ಒಳಗೊಂಡು ಅನೇಕ ಹಾಸ್ಯ ಕಲಾವಿದರಿಂದ ಮೀಮಿಕ್ರಿ ಹಾಗೂ ಭರ್ಜರಿ ಹಾಸ್ಯ ಭರಿತ ಮನರಂಜನೆ ಕಾರ್ಯಕ್ರಮ ಜರುಗಲಿದೆ.
ದಿ. ೨೦ ಸೋಮವಾರರಂದು ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೨ರವರೆಗೆ ಗೀಗೀಪದ ಮಧ್ಯಾಹ್ನ ೩ ಗಂಟೆಯಿಂದ ಭಾರ ಎತ್ತುವ ಸ್ಪರ್ದೆ ಮತ್ತು ಜೋಳದ ಚೀಲ ಎತ್ತುವ ಮತ್ತು ಗುಂಡು ಎತ್ತುವ ಅಲ್ಲದೇ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ದೆ ನಡೆಯಲಿದೆ. ಸಾಯಂಕಾಲ ೭ ಗಂಟೆಗೆ ಮುದ್ದೇಬಿಹಾಳದ ಶ್ರೀ ಶಕ್ತಿಡ್ಯಾನ್ಸ್ ಅಕಾಡೆಮಿ ಇವರಿಂದ ನವಶಕ್ತಿ ವೈಭವ ನೃತ್ಯ ಜರುಗಲಿದೆ. ರಾತ್ರಿ ೧೦ ಗಂಟೆಗೆ ಜೈ ಮಾತೃಭೂಮಿ ಲಕ್ಷ್ಮೇಶ್ವರ ಇವರಿಂದ ದುಡ್ಡು ದಾರಿ ಬಿಡಿಸಿತು ಎಂಬ ಸಾಮಾಜಿಕ ನಾಟಕ ಜರುಗಲಿದೆ.
ದಿ. ೨೧ ಮಂಗಳವಾರರಂದು ೯ ಗಂಟೆಯಿಂದ ೨ ಗಂಟೆಯವರೆಗೆ ಗೀಗೀ ಪದ, ಮಧ್ಯಾಹ್ನ ೩ ಗಂಟೆಗೆ ಶ್ರೀ ಗ್ರಾಮದೇವಿ(ದ್ಯಾಮವ್ವದೇವಿ) ಮಹಾಮೂರ್ತಿಯು ಪಾದಗಟ್ಟೆಯಿಂದ ವಿವಿಧ ವಾದ್ಯವೈಭವಗಳೊಂದಿಗೆ ಗುಡಿ ಪ್ರವೇಶ ಕಾರ್ಯಕ್ರಮ ಜರುಗುವದು. ರಾತ್ರಿ ೧೦-೩೦ ಗಂಟೆಗೆ ಮಗ ಹೋದರೂ ಮಾಂಗಲ್ಯ ಬೇಕು ಎಂಬ ಸಾಮಾಜಿಕ ನಾಟಕ ಜರುಗಲಿದೆ.
ಜಾತ್ರೋತ್ಸವ ಅಂಗವಾಗಿ ಪ್ರತಿದಿನ ಮಹಾ ಪ್ರಸಾದ ಅನ್ನ ಸಂತರ್ಪಣೆ ನಡೆಯಲಿದ್ದು ಕಾರಣ ತಾಳಿಕೋಟೆ ನಗರದ ಅಲ್ಲದೇ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕಮಿಟಿ ತಿಳಿಸಿದೆ.