ಬಳ್ಳಾರಿ, ಜೂ. 08:: ನಗರದ ಡಿ.ಸಿ. ಕ್ಯಾಂಪ್ ರಸ್ತೆ ಸಮೀಪದ ಆಂದ್ರಾಳ್ ಹಳ್ಳದಲ್ಲಿ ಪತ್ತೆಯಾದ ಮಹಿಳೆಯ ಮೃತದೇಹ ಪತ್ತೆಯಾಗಿದ್ದು ಮೃತರನ್ನು ಮೋತಿ ಸರ್ಕಲ್ನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಉದ್ಯೋಗಿ ಹನೀಫ್ ಫಾತಿಮಾ ಎಂದು ಗುರುತಿಸಲಾಗಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಫಾತಿಮಾ ಅವರು ನಿನ್ನೆ ರಾತ್ರಿ ತಮ್ಮ ಸಹೋದ್ಯೋಗಿಗಳೊಂದಿಗೆ ಅಲ್ಲಂ ಭವನ ಹೋಟೆಲ್ನಲ್ಲಿ ಊಟ ಮಾಡಿದ್ದರು. ಊಟದ ಬಳಿಕ ಸಹೋದ್ಯೋಗಿಗಳು ಅವರನ್ನು ಮೋತಿ ಸರ್ಕಲ್ ಸಮೀಪಕ್ಕೆ ಕರೆತಂದು ಬಿಟ್ಟಿದ್ದು, ಅಲ್ಲಿ ನಿಲ್ಲಿಸಿದ್ದ ತಮ್ಮ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಮನೆಗೆ ತೆರಳಲು ಹೊರಟಿದ್ದರು ಎನ್ನಲಾಗಿದೆ.
ಆದರೆ, ಮೋತಿ ಸರ್ಕಲ್ನಿಂದ ಮನೆಗೆ ತೆರಳುವ ಮಾರ್ಗದಲ್ಲಿ ಏನಾಯಿತು ಎಂಬುದು ನಿಗೂಢವಾಗಿಯೇ ಉಳಿದಿದೆ. ರಾತ್ರಿ ಸುರಿದ ಭಾರಿ ಮಳೆಯ ನಡುವೆ ಅವರು ಹೇಗೆ ಆಂದ್ರಾಳ್ ಹಳ್ಳದ ಪ್ರದೇಶಕ್ಕೆ ತಲುಪಿದರು, ಇದು ಅಪಘಾತವೇ, ಆತ್ಮಹತ್ಯೆಯೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ಘಟನೆಯ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಬೆಳಕಿಗೆ ಬರುವ ಸಾಧ್ಯತೆ ಇದೆ. ಸದ್ಯ ಪೊಲೀಸರು ಫಾತಿಮಾ ಅವರ ಕೊನೆಯ ಚಲನವಲನಗಳು, ಸಿಸಿಟಿವಿ ದೃಶ್ಯಗಳು ಹಾಗೂ ಇತರೆ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ.
ಈ ಘಟನೆ ಬಳ್ಳಾರಿ ನಗರದ ನಾಗರಿಕರು ತೀರ್ವ ಆತಂಕ ಮತ್ತು ಅಘಾತ ವ್ಯಕ್ತಪಡಿಸಿದ್ದಾರೆ.