ಬಳ್ಳಾರಿ, ಏ.೨೨..: ಭಾರತೀಯ ಲಲಿತ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸಂಡೂರು ಸರಕಾರಿ ಪದವಿ ಕಾಲೇಜಿನ ಅಧ್ಯಾಪಕ ಡಾ. ಅಪ್ಪಕಾಯ ಮಹೇಶ ಶರ್ಮ ಅಭಿಪ್ರಾಯಪಟ್ಟರು.
ನಗರದ ರಾಘವೇಂದ್ರ ಮಠದ ಸಭಾಮಂಟಪದಲ್ಲಿ ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ‘ವೈಶಾಖ ಮಾಸ ಸಾಂಸ್ಕೃತಿಕ ಸಂಭ್ರಮ?೨೦೨೬’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಸಮಾನ ಪ್ರೋತ್ಸಾಹ ನೀಡಬೇಕೆಂದರು.
ಬಿಪಿಎಸ್ಸಿ ಶಾಲೆಯ ಪ್ರಾಂಶುಪಾಲ ಅನಿಲ್ ಕುಮಾರ್ ಮಾತನಾಡಿ, ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ಇಂತಹ ಅಪರೂಪದ ಕಲಾ ಪ್ರದರ್ಶನಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಟ್ರಸ್ಟ್ ವತಿಯಿಂದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ವೈದ್ಯರಾದ ಶ್ರೀಧರಮೂರ್ತಿ, ಎಸ್.ಕೆ. ಅಜಯ್, ಬಿ.ಕೆ. ಶ್ರೀಕಾಂತ್, ಎಸ್.ಕೆ. ಪ್ರಣೀತ ಅಜಯ್ ಅವರಿಗೆ ‘ತುಂಗಾ ವೈದ್ಯ ರತ್ನ’, ಡಾ. ಶ್ರೀನಾಥ್ ಹಾಗೂ ಹನುಮಂತ ಆಚಾರ್ ಅವರಿಗೆ ‘ತುಂಗಾ ಸಮಾಜ ಸೇವಾ ರತ್ನ’, ಡಾ. ಮಹೇಶ ಶರ್ಮ ಹಾಗೂ ಅನಿಲ್ ಕುಮಾರ್ ಅವರಿಗೆ ‘ತುಂಗಾ ಶಿಕ್ಷಣ ರತ್ನ’, ಪ್ರಸನ್ನ ಆಚಾರ್ ಅವರಿಗೆ ‘ತುಂಗಾ ಕಲಾ ಪೋಷಕ ರತ್ನ’, ಶ್ರೀಜಾ ಅವರಿಗೆ ‘ತುಂಗಾ ರಂಗ ಕಲಾ ರತ್ನ’ ಪ್ರಶಸ್ತಿ ಪ್ರದಾನಿಸಲಾಯಿತು.
ನಂತರ ಶ್ರೀಜಾ ತಂಡದಿಂದ ‘ಶ್ರೀನಿವಾಸ ಕಲ್ಯಾಣ’ ಭಕ್ತಿಪ್ರಧಾನ ನಾಟಕ ಪ್ರದರ್ಶನಗೊಂಡು ಭಕ್ತರ ಮನಸೆಳೆಯಿತು.
ಕಾರ್ಯಕ್ರಮದಲ್ಲಿ ಕಿಸ್ಕಿಂದ ವಿಶ್ವವಿದ್ಯಾಲಯದ ಕುಲಸಚಿವ ಡಾ. ರಾಜು ಜಡರ್, ಕಣೆಕಲ್ ಶ್ರೀಧರ್, ವಿಠ್ಠಲ ದೇಸಾಯಿ, ವಿಜಯ ವಿಠ್ಠಲ, ರಾಮರಾವ್ ಕುಲಕರ್ಣಿ, ಸಿಮೆಂಟ್ ಗಿರಿ, ಅಶೋಕ್ ಕುಲಕರ್ಣಿ, ವೀರೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಟಿ. ನಾಗಭೂಷಣ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ವಿ. ರಾಮಚಂದ್ರ ವಂದಿಸಿದರು.