ಬಳ್ಳಾರಿ, ಜೂ.03: ರಾಜ್ಯ ಸರ್ಕಾರ ನಡೆಸಿರುವ ಮಾಜಿ ದೇವದಾಸಿ ಮಹಿಳೆಯರು ಹಾಗೂ ಅವರ ಮೂರು ತಲೆಮಾರಿನ ಕುಟುಂಬಗಳ ಸಮೀಕ್ಷೆ ಅಪೂರ್ಣವಾಗಿದ್ದು, ಸಮಗ್ರ ಮರುಸಮೀಕ್ಷೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಒತ್ತಾಯಿಸಿದೆ.
ಸಂಘದ ಜಿಲ್ಲಾ ಮುಖಂಡರಾದ ಎ. ಸ್ಟಾಮಿ, ಹೆಚ್. ದುರುಗಮ್ಮ, ಭಾರತಿ, ಲಕ್ಷ್ಮೀದೇವಿ, ದೊಡ್ಡ ಹುಲಿಗೆಮ್ಮ, ಶಿಲ್ಪಾ, ರುದ್ರಮ್ಮ, ಶೇಖಮ್ಮ, ರಂಗಮ್ಮ, ಗಂಗಮ್ಮ, ಕಾಡಮ್ಮ, ಗೋವಿಂದಮ್ಮ, ರೇಣುಕಮ್ಮ, ದುರುಗಮ್ಮ, ಹಂಪಮ್ಮ ಸೇರಿದಂತೆ ಹಲವು ಮಹಿಳೆಯರು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಈ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
2007-08ರಲ್ಲಿ ನಡೆದ ಸಮೀಕ್ಷೆಯಲ್ಲಿ ಸುಮಾರು 46,800 ದೇವದಾಸಿ ಮಹಿಳೆಯರನ್ನು ಗುರುತಿಸಲಾಗಿತ್ತು. ಆದರೆ ಆಗಲೂ 20 ಸಾವಿರಕ್ಕೂ ಹೆಚ್ಚು ಮಹಿಳೆಯರು ಸಮೀಕ್ಷೆಯಿಂದ ಹೊರಗುಳಿದಿದ್ದರು. ಈ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಮರುಸಮೀಕ್ಷೆಗೆ ಒತ್ತಾಯಿಸಲಾಗುತ್ತಿತ್ತು. ಅದರ ಫಲವಾಗಿ 2025ರಲ್ಲಿ ಸರ್ಕಾರ ಮತ್ತೊಮ್ಮೆ ಸಮೀಕ್ಷೆ ನಡೆಸಿದರೂ ಕೇವಲ 23,385 ಮಹಿಳೆಯರನ್ನು ಮಾತ್ರ ಗುರುತಿಸಿರುವುದು ಗಂಭೀರ ಲೋಪವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಹಿಂದಿನ ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟ ಮಹಿಳೆಯರ ಮಕ್ಕಳ ಹಾಗೂ ಮೊಮ್ಮಕ್ಕಳ ಕುಟುಂಬಗಳ ಸಂಖ್ಯೆಯನ್ನು ಪರಿಗಣಿಸಿದರೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಲೆಕ್ಕಕ್ಕೆ ಬರಬೇಕಿತ್ತು. ಆದರೆ ಪ್ರಸ್ತುತ ಸಮೀಕ್ಷೆಯಲ್ಲಿ ಸುಮಾರು 90 ಸಾವಿರ ಕುಟುಂಬಗಳನ್ನು ಮಾತ್ರ ದಾಖಲಿಸಿರುವುದು ಸಮೀಕ್ಷೆಯ ಅಸಮರ್ಪಕತೆಯನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಯಲ್ಲಿನ ಕೊರತೆಗಳನ್ನೂ ಈ ಸಮೀಕ್ಷೆ ಬಯಲಿಗೆಳೆದಿದೆ. ಗುರುತಿಸಲ್ಪಟ್ಟ ಮಹಿಳೆಯರಲ್ಲಿ ಕೇವಲ ಸಾವಿರಕ್ಕೂ ಕಡಿಮೆ ಮಂದಿಗೆ ಮನೆ ಸೌಲಭ್ಯ ದೊರೆತಿದ್ದು, ಅರ್ಧದಷ್ಟು ಮಂದಿಗೆ ಮಾತ್ರ ಪಿಂಚಣಿ ಸಿಕ್ಕಿದೆ. ಅನೇಕ ವಯೋವೃದ್ಧ ಮಹಿಳೆಯರು ಯಾವುದೇ ಸೌಲಭ್ಯ ಪಡೆಯದೆ ಮೃತಪಟ್ಟಿದ್ದಾರೆ ಎಂದು ದೂರಿದ್ದಾರೆ.
ದೇವದಾಸಿ ಮಹಿಳೆಯರ ಮಕ್ಕಳನ್ನು ಸಮೀಕ್ಷೆಗೆ ಸೇರಿಸಲು ಅನಗತ್ಯ ದಾಖಲೆಗಳನ್ನು ಕಡ್ಡಾಯಗೊಳಿಸಿರುವುದರಿಂದ ಅನೇಕ ಕುಟುಂಬಗಳು ಹೊರಗುಳಿದಿವೆ. 1982ರ ನಂತರ ದೇವದಾಸಿಗಳಾಗಿ ಗುರುತಿಸಲ್ಪಟ್ಟ ಮಹಿಳೆಯರನ್ನೂ ಈ ಸಮೀಕ್ಷೆಯಲ್ಲಿ ಸೇರಿಸಿಲ್ಲ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.
ಬೇಡಿಕೆಗಳು
ನಿಂತಿರುವ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡಿ ಮಾಸಿಕ ₹6,000ಕ್ಕೆ ಹೆಚ್ಚಿಸಬೇಕು. 2007ರ ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟ ಮಹಿಳೆಯರನ್ನು ಹೊಸ ಸಮೀಕ್ಷೆಯಿಂದ ಹೊರಗಿಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮೂನೆ-1, 2 ಮತ್ತು 3ರಡಿ ಸಮರ್ಪಕ ಮರುಸಮೀಕ್ಷೆ ನಡೆಸಬೇಕು. ದೇವದಾಸಿ ಮಹಿಳೆಯರ ಮಕ್ಕಳಿಗೆ ಶಿಕ್ಷಣಕ್ಕಾಗಿ ತಾಯಿಯ ದೇವದಾಸಿ ದೃಢೀಕರಣ ಪತ್ರ ನೀಡಬೇಕು.
ಎಲ್ಲಾ ದೇವದಾಸಿ ಮಹಿಳೆಯರಿಗೆ ₹2 ಲಕ್ಷ ಸಾಲ ಹಾಗೂ ಸಹಾಯಧನ, ಶಿಕ್ಷಣಕ್ಕೆ ಅನುಗುಣವಾಗಿ ಉದ್ಯೋಗ ಅಥವಾ ಮಾಸಿಕ ₹10 ಸಾವಿರ ನಿರುದ್ಯೋಗ ಭತ್ಯೆ ನೀಡಬೇಕು. ಭೂಹೀನ ಮಹಿಳೆಯರಿಗೆ ಐದು ಎಕರೆ ಭೂಮಿ ಹಂಚಿಕೆ ಮಾಡಬೇಕು. 80×80 ಅಡಿ ನಿವೇಶನ ಹಾಗೂ ₹12 ಲಕ್ಷ ವೆಚ್ಚದ ಉಚಿತ ಮನೆ ನಿರ್ಮಿಸಿ ಕೊಡಬೇಕು. ಮದುವೆ ಸಹಾಯಧನ ಅರ್ಜಿಗಳನ್ನು ಒಂದು ವರ್ಷದೊಳಗೆ ವಿಲೇವಾರಿ ಮಾಡಿ ಹಣ ಬಿಡುಗಡೆ ಮಾಡಬೇಕು. ಎಲ್ಲ ದೇವದಾಸಿ ಮಹಿಳೆಯರಿಗೆ ಶಾಶ್ವತ ದೇವದಾಸಿ ದೃಢೀಕರಣ ಪತ್ರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
