ಬಳ್ಳಾರಿ, ಜೂ.04: ಎಐಯುಟಿಯುಸಿ ನೇತೃತ್ವದಲ್ಲಿ ವಸತಿ ನಿಲಯಗಳ ಕಾರ್ಮಿಕರು, ಬಳ್ಳಾರಿ ವೖದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಕಾರ್ಮಿಕರಿಂದ, ವೇತನ ಹೆಚ್ಚಳ ಪರಿಷ್ಕರಣೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ, ಸಂಬಂಧಪಟ್ಟ ಸಮಾಜ ಕಲ್ಯಾಣ , ಪರಿಶಿಷ್ಟ ವರ್ಗ , ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಇಲಾಖೆಗಳ ಜಿಲ್ಲಾ ಅಧಿಕಾರಿಗಳು ಹಾಗೂ ಬಿ.ಎಂ.ಸಿ.ಆರ್. ಸಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು. ಎಲ್ಲಾ ಅಧಿಕಾರಿಗಳು ಪರಿಷ್ಕೃತ ವೇತನ ಜಾರಿಗೊಳಿಸಲು ಕೂಡಲೆ ಸೂಕ್ತ ಕ್ರಮ ಕೖಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ಎ. ದೇವದಾಸ್ ಮಾತನಾಡುತ್ತಾ "ತೀವ್ರ ಸಂಕಷ್ಟದಲ್ಲಿರುವ ಕಾರ್ಮಿಕ ವರ್ಗಕ್ಕೆ ವೇತನ ಹೆಚ್ಚಿಸುವಂತೆ ಎಐಯುಟಿಯುಸಿ ಅನೇಕ ಬಾರಿ ಸ್ವತಂತ್ರವಾಗಿ ಹಾಗೂ ಇತರ ಕಾರ್ಮಿಕ ಸಂಘಗಳೊಂದಿಗೆ ಸೇರಿ ಜಂಟಿ ಹೋರಾಟ ಹಾಗೂ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಬೃಹತ್ ಹೋರಾಟ ನಡೆಸಿದೆ.ಇಂದಿನ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ಕಾರ್ಮಿಕರಿಗೆ ಕನಿಷ್ಠ 36,000 ವೇತನ ನಿಗದಿಪಡಿಸಬೇಕೆಂದು ಕಾರ್ಮಿಕ ಸಂಘಟನೆಗಳು ನಿರಂತರವಾಗಿ ಒತ್ತಾಯಿಸುತ್ತಾ ಬಂದಿದ್ದವು. ಆದರೆ ಮಾಲೀಕ ವರ್ಗವು ಇದಕ್ಕೆ ತೀವ್ರ ಅಡ್ಡಿಪಡಿಸುತ್ತಲೆ ಇತ್ತು. ಮಾಲೀಕ ವರ್ಗದ ಒತ್ತಡಕ್ಕೆ ಮಣಿದಿದ್ದ ಸರ್ಕಾರವು ಆದೇಶ ಜಾರಿ ಮಾಡಲು ಮೀನಾಮೇಷ ಎಣಿಸುತ್ತಿತ್ತು. ಇದನ್ನು ಪ್ರತಿಭಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ಇದೇ ಮೇ 27 ರಂದು ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟಕ್ಕೆ ಕರೆ ನೀಡಿತ್ತು. ಹೋರಾಟದ ತೀವ್ರತೆಯನ್ನು ಅರಿತ ಸರ್ಕಾರವು ಕೊನೆಗೂ ಮಣಿದು, ಈ ಆದೇಶವನ್ನು ಹೊರಡಿಸಿದೆ ಎಂದರು.ಇದು ಕಾರ್ಮಿಕರ ಹೋರಾಟದ ಶಕ್ತಿಗೆ ಸಿಕ್ಕ ಪ್ರತಿಫಲವಾಗಿದೆ". ಎಂದರು
ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್ ಮಾತನಾಡುತ್ತಾ "ಸರ್ಕಾರದ ಈ ಆದೇಶ ಕೇವಲ ಕಾಗದದ ಮೇಲಿದ್ದರೆ ಸಾಲದು. ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ, ಅನುಸೂಚಿತ ಉದ್ಯಮಗಳ ಮಾಲೀಕರು ಈ ಪರಿಷ್ಕೃತ ಕನಿಷ್ಠ ವೇತನವನ್ನು ವಿಳಂಬಗೊಳಿಸದೆ ತಕ್ಷಣದಿಂದಲೇ ಜಾರಿಗೊಳಿಸಬೇಕು. ಯಾವುದೇ ಕಾರಣಕ್ಕೂ ಮಾಲೀಕ ವರ್ಗದ ಒತ್ತಡಕ್ಕೆ ಮಣಿಯದೆ, ಈ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಮಾಡಲು ಕಾರ್ಮಿಕರು ಸದಾ ಜಾಗರೂಕರಾಗಿರಬೇಕು ಮತ್ತು ಒಗ್ಗಟ್ಟಿನಿಂದ ನಿಲ್ಲಬೇಕು." ಎಂದು ಕರೆ ನೀಡಿದರು.
ನಿಯೋಗದಲ್ಲಿ ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷರಾದ ಶಾಂತ, ಜಂಟಿ ಕಾರ್ಯದರ್ಶಿ ಸುರೇಶ್. ಜಿ, ಮುಖಂಡರಾದ ಕಿರಣ್ ಕುಮಾರ್, ಚೇತನ್, ಮುರಳಿ ಕೃಷ್ಣ, ಹುಲಗಪ್ಪ, ಚಿಟ್ಟಮ್ಮ, ಪಾರ್ವತಿ, ಲಕ್ಷ್ಮಿ ದೇವಿ, ಮುಂತಾದವರು ಭಾಗವಹಿಸಿದ್ದರು.
