ಬಳ್ಳಾರಿ, ಮೇ.27:.ಜಿಲ್ಲೆಯ ಮಹಿಳಾ ಕ್ರಿಕೆಟ್ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಬಳ್ಳಾರಿ ಜಿಲ್ಲಾ ಮಹಿಳಾ ಕ್ರಿಕೆಟ್ ಅಕಾಡೆಮಿ (ರಿ) ವತಿಯಿಂದ ರಾಜ್ಯ ಮಟ್ಟದ ಮಹಿಳಾ ಟಿ-20 ಕ್ರಿಕೆಟ್ ಟೂರ್ನಿಯನ್ನು ಮೇ 30 ಮತ್ತು 31ರಂದು ಆಯೋಜಿಸಲಾಗಿದೆ ಎಂದು ಅಕಾಡೆಮಿಯ ಜಿಲ್ಲಾಧ್ಯಕ್ಷ ಬ್ರಹ್ಮಯ್ಯ ಹಾಗೂ ಜಿಲ್ಲಾ ಸಂಚಾಲಕ ಹಾಗೂ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಾ. ಬಿ.ಹೆಚ್.ಎಂ. ವಿರೂಪಾಕ್ಷಯ್ಯ ಹಿರೇಮಠ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅವರು, ಬಳ್ಳಾರಿ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ಗೆ ವಿಶೇಷ ವೇದಿಕೆ ಕಲ್ಪಿಸುವ ಕೆಲಸವನ್ನು ನಮ್ಮ ಅಕಾಡೆಮಿ ಮಾಡಿದೆ ಎಂದು ಹೇಳಿದರು.
ಹಿಂದಿನ ಟೂರ್ನಿಗಳಲ್ಲಿ ಬೆಂಗಳೂರು, ಹೈದರಾಬಾದ್, ಪುಣೆ, ವಿಜಯಪುರ ಸೇರಿದಂತೆ ವಿವಿಧ ನಗರಗಳ ತಂಡಗಳು ಭಾಗವಹಿಸಿದ್ದವು. ವಿಮ್ಸ್ ಮೈದಾನದಲ್ಲಿ ನಡೆದ ಪಂದ್ಯಾವಳಿಗಳು ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ವಿಶೇಷ ಗುರುತು ಮೂಡಿಸಿದ್ದವು ಎಂದು ಅವರು ನೆನಪಿಸಿಕೊಂಡರು.
ಅಂತರಾಷ್ಟ್ರೀಯ ಆಟಗಾರ್ತಿ ಡಯಾನ, ವಿಶ್ವಕಪ್ ಆಟಗಾರ್ತಿಯರಾದ ರಾಜೇಶ್ವರಿ ಗಾಯಕವಾಡ್ ಹಾಗೂ ವೇದ ಕೃಷ್ಣಮೂರ್ತಿ ಸೇರಿದಂತೆ ಖ್ಯಾತ ಮಹಿಳಾ ಕ್ರಿಕೆಟಿಗರೊಂದಿಗೆ ಜಿಲ್ಲೆಯ ಆಟಗಾರ್ತಿಯರು ಕಣಕ್ಕಿಳಿದಿದ್ದು, ಅದು ಬಳ್ಳಾರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಕೆಲ ವರ್ಷಗಳಿಂದ ಸ್ಥಗಿತಗೊಂಡಿದ್ದ ಮಹಿಳಾ ಕ್ರಿಕೆಟ್ ಅಕಾಡೆಮಿಯನ್ನು ಇದೀಗ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಈ ಕಾರ್ಯಕ್ಕೆ ಶ್ರೇಷ್ಠ ಇಂಟರ್ನ್ಯಾಷನಲ್ ಶಾಲೆಯ ಅಧ್ಯಕ್ಷ ಬ್ರಹ್ಮಯ್ಯ ನಾಯ್ಡು ತಮ್ಮಿನೇನಿ, ಗಣಿ ಪ್ರಾಪರ್ಟೀಸ್ ಮಾಲೀಕ ಅಶೋಕ್ ಚೌಹಾಣ್ ಸೇರಿದಂತೆ ಹಲವರು ಬೆಂಬಲ ನೀಡುತ್ತಿದ್ದಾರೆ ಎಂದು ವಿರೂಪಾಕ್ಷಯ್ಯ ತಿಳಿಸಿದರು.
ಮಹಿಳಾ ಆಟಗಾರ್ತಿಯರು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂಬ ಆಶಯದಿಂದ ಟೂರ್ನಿ ಆಯೋಜಿಸಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಶೋಕ್ ಚೌಹಾಣ್, ಪಿ. ಉಜ್ವಲಾ ಶ್ರೀಧರ್, ಲಲಿತ ಶ್ರೀನಿವಾಸ್ ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.
ಪ್ರಶಸ್ತಿ ವಿವರ, ಪ್ರಥಮ ಬಹುಮಾನ: 25,000, ದ್ವಿತೀಯ ಬಹುಮಾನ: 15,000, ಅತ್ಯುತ್ತಮ ಬ್ಯಾಟರ್ ಪ್ರಶಸ್ತಿ: 5,000 ಅತ್ಯುತ್ತಮ ಬೌಲರ್ ಪ್ರಶಸ್ತಿ: 5,000, ಸ್ಥಳ : ವಿಮ್ಸ್ ಮೈದಾನ, ಕಂಟೋನ್ಮೆಂಟ್, ಬಳ್ಳಾರಿ
