ಬಳ್ಳಾರಿ, ಜೂ.30:: ಮಹಿಳೆಯರ ನಿಜವಾದ ವಿಮುಕ್ತಿ ಪ್ರಶ್ನೆ ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆಯನ್ನು ಬದಲಿಸುವ ಸಮಾಜವಾದಿ ಕ್ರಾಂತಿಯೊಂದಿಗೆ ಬೆಸೆದುಕೊಂಡಿದೆ ಎಂದು ಎಸ್ಯುಸಿಐ(ಕಮ್ಯೂನಿಸ್ಟ್) ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಕೆ. ರಾಧಾಕೃಷ್ಣ ಅವರು ತಿಳಿಸಿದರು.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ಕರ್ನಾಟಕ ರಾಜ್ಯ ಸಮಿತಿಯಿಂದ ಜೂನ್ 27ರಿಂದ 29ರವರೆಗೆ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ಎಂಆರ್ಟಿ ಕಣ್ಣಿನ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಮೂರು ದಿನಗಳ ರಾಜ್ಯಮಟ್ಟದ ಮಹಿಳಾ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಿಳಾ ಹೋರಾಟವು ಪುರುಷರನ್ನು ದ್ವೇಷಿಸುವುದಲ್ಲ, ಮಹಿಳೆಯನ್ನು ಕೀಳಾಗಿ ಕಾಣುವ ಹಳೆಯ ಮೌಲ್ಯಗಳ ವಿರುದ್ಧ ಸಂಘಟಿತ ಹೋರಾಟ ನಡೆಸುವುದಾಗಿದೆ. ಮಹಿಳೆಯರಿಗೆ ಸ್ವಾತಂತ್ರ್ಯ ಯಾರೂ ಉಡುಗೊರೆಯಾಗಿ ನೀಡುವುದಿಲ್ಲ. ಅದನ್ನು ಮಹಿಳೆಯರೇ ಹೋರಾಟದ ಮೂಲಕ ಪಡೆದುಕೊಳ್ಳಬೇಕಿದ್ದು, ಇಂದಿನ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮಹಿಳೆಯೂ ಒಂದು ಸರಕಾಗಿ ಪರಿಗಣಿಸಲ್ಪಡುತ್ತಿದ್ದಾಳೆ ಎಂದು ಹೇಳಿದರು.
ಶಿಬಿರದ ಮೊದಲ ದಿನ ಎಐಎಂಎಸ್ಎಸ್ ಅಖಿಲ ಭಾರತ ಉಪಾಧ್ಯಕ್ಷೆ ಡಾ. ಸುಧಾ ಕಾಮತ್ ಅವರು ಥಾಮಸ್ ಹಾರ್ಡಿ ಅವರ "ಟೆಸ್ ಆಫ್ ದಿ ಡರ್ಬರ್ವಿಲ್ಸ್" ಕಾದಂಬರಿ ಕುರಿತು ಉಪನ್ಯಾಸ ನೀಡಿ, ಸಾಹಿತ್ಯವು ಸಮಾಜದಲ್ಲಿ ಹೊಸ ಚಿಂತನೆಗಳನ್ನು ಮೂಡಿಸಿ ಸಾಮಾಜಿಕ ಬದಲಾವಣೆಗೆ ದಾರಿಯಾಗುತ್ತದೆ ಎಂದು ತಿಳಿಸಿದರು.
ಎರಡನೇ ದಿನ ಎಸ್ಯುಸಿಐ ರಾಜ್ಯ ಕಾರ್ಯದರ್ಶಿ ಕೆ. ಉಮಾ ಅವರು ಫೆಡರಿಕ್ ಎಂಗಲ್ಸ್ ಅವರ "ಕುಟುಂಬ, ಖಾಸಗಿ ಆಸ್ತಿ ಮತ್ತು ರಾಜ್ಯದ ಉಗಮ" ಕೃತಿಯ ಕುರಿತು ಮಾತನಾಡಿ, ಖಾಸಗಿ ಆಸ್ತಿಯ ಉಗಮದೊಂದಿಗೆ ಮಹಿಳಾ ಶೋಷಣೆ ಆರಂಭಗೊಂಡಿದ್ದು, ವರ್ಗರಹಿತ ಸಮಾಜ ನಿರ್ಮಾಣವೇ ಶಾಶ್ವತ ಪರಿಹಾರ ಎಂದು ಪ್ರತಿಪಾದಿಸಿದರು.
ಮೂರನೇ ದಿನ ನಡೆದ ಸ್ತ್ರೀವಾದ ಕುರಿತ ಸಂವಾದದಲ್ಲಿ ಎಐಎಂಎಸ್ಎಸ್ ರಾಜ್ಯಾಧ್ಯಕ್ಷೆ ಮಂಜುಳಾ ಎಂ.ಎನ್. ಅವರು, ಮಹಿಳಾ ಸಮಸ್ಯೆಗಳ ಮೂಲ ಕಾರಣಗಳನ್ನು ಅರಿತು ಸರಿಯಾದ ದಿಕ್ಕಿನಲ್ಲಿ ಮಹಿಳಾ ಚಳುವಳಿಯನ್ನು ಮುನ್ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಮೂರು ದಿನಗಳ ಶಿಬಿರದಲ್ಲಿ ಮಹಿಳಾ ಚಳುವಳಿಯ ಕುರಿತು ಛಾಯಾಚಿತ್ರ ಮತ್ತು ಸೂಕ್ತಿ ಪ್ರದರ್ಶನ, ಚಲನಚಿತ್ರ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಿಂದ ಮಹಿಳಾ ಕಾರ್ಯಕರ್ತೆಯರು ಶಿಬಿರದಲ್ಲಿ ಭಾಗವಹಿಸಿದ್ದರು.