ಬಾಗಲಕೋಟೆ, ಮೇ,೩೦ : ಹೊಸ ಶೈಕ್ಷಣಿಕ ವರ್ಷದ ಆರಂಭದ ಹಿನ್ನಲೆಯಲ್ಲಿ ಜೂನ್ ೧ ರಿಂದ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸುವ ಶಾಲಾ ಶಿಕ್ಷಣ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದೆ.
ಜಿಲ್ಲಾಧಿಕಾರಿ ಸಂಗಪ್ಪ ಅವರ ಮಾರ್ಗದರ್ಶನದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಜಿ.ಮನ್ನಿಕೇರಿ ಅವರು ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪೋಷಕರ ಸಹಭಾಗಿತ್ವದಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲು ನಿರ್ಧರಿಸಿದ್ದು, ಮಕ್ಕಳನ್ನು ಆತ್ಮೀಯವಾಗಿ ಶಾಲೆಗೆ ಬರಮಾಡಿಕೊಳ್ಳಲು ವಿಶೇಷ ಸಿದ್ದತೆ ಕೈಗೊಳ್ಳುತ್ತಿದೆ. ಶಾಲಾ ಆವರಣವನ್ನು ತೋರಣ, ಬಲೂನ್ ಹಾಗೂ ಬಣ್ಣ ಬಣ್ಣದ ಅಲಂಕಾರಗಳಿಂದ ಸಿಂಗರಿಸಲಾಗುತ್ತಿದ್ದು, ಮಕ್ಕಳಲ್ಲಿ ಶಾಲೆಯ ಬಗ್ಗೆ ಉತ್ಸಾಹ ಮೂಡಿಸುವ ರೀತಿಯಲ್ಲಿ ಸಜ್ಜುಗೊಳಿಸಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳೊಂದಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಉತ್ತಮ ಗುಣಮಟ್ಟದ ಶೂ ಹಾಗೂ ಸಾಕ್ಸ್ಗಳನ್ನು ನೀಡಲಾಗುತ್ತಿದೆ. ಈ ವರ್ಷದಿಂದ ಜಿಲ್ಲೆಯ ಎಲ್ಲ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ದ್ವೀಭಾಷೆ ಕಲಿಕೆ ಪ್ರಾರಂಭಿಸಲಾಗುತ್ತಿದೆ. ಪ್ರತಿಷ್ಠಿತ ಕೆ.ಜಿ.ಎಸ್, ಪಿ.ಎಂ.ಶ್ರೀ, ಆದರ್ಶ ವಿದ್ಯಾಲಯ ಹಾಗೂ ಕೆ.ಜಿ.ಬಿ.ವಿಗಳಂತಹ ಮಾದರಿ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಮಕ್ಕಳ ಸರ್ವಾಂಗೀನ ಅಭಿವೃದ್ದಿ ಮಾಡಲಾಗುತ್ತಿದೆ. ರಾಗಿ ಮಾಲ್ಟ, ಸಕ್ಕರೆ ಮಿಶ್ರಿತ ಹಾಲು, ರುಚಿ ಕಟ್ಟಾದ ಮಧ್ಯಾಹ್ನ ದ ಬಿಸಿಊಟ, ಮೊಟ್ಟೆ, ಬಾಳೆಹಣ್ಣುಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.
ಗ್ರಂಥಾಲಯ, ಪ್ರಯೋಗಾಲಯ, ಸ್ಮಾರ್ಟ ಕ್ಲಾಸ್ಗಳ ಲಭ್ಯತೆಯಿಂದ ಕಲಿಕೆ ಉತ್ತೇಜಿಸಲಾಗುತ್ತಿದೆ. ಈ ವರ್ಷದಿಂದ ಮೌಲ್ಯ ಶಿಕ್ಷಣದ ಪಠ್ಯಪುಸ್ತಕಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ಕಲಿಸುವ ಕೆಲಸ ಮಾಡಲಾಗುತ್ತದೆ. ಪೂರ್ವ ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವ ಪಾಲಕರಿಗೆ ಆರ್ಥಿಕ ಹೊರೆ ಇರುವದಿಲ್ಲ. ಆದ್ದರಿಂದ ಪಾಲಕರು ಅಥವಾ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ದಾಖಲಿಸಲು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಸಿ.ಮನ್ನಿಕೇರಿ ಹಾಗೂ ತಂಡದೊಂದಿಗೆ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.
ಸರ್ಕಾರಿ ಶಾಲೆಗಳ ಶೈಕ್ಷಣಿಕ ಶ್ರೇಷ್ಠತೆ ಸರ್ಕಾರಿ ಶಾಲೆಗಳಲ್ಲಿ ಸಮಾಜಿಕ ಸಮಾನತೆಯನ್ನು ಸಾರಲಾಗುತ್ತಿದ್ದು, ಬೇಧ-ಭಾವವಿಲ್ಲದ, ಭಾತೃತ್ವದ ನೆಲೆಗಟ್ಟಿನ ಶಿಕ್ಷಣ ನೀಡಿ ಮಾನವೀಯ ಮೌಲ್ಯಗಳನ್ನು ರೂಢಿಸಲಾಗುತ್ತಿದೆ. ಸರಳ ಬದುಕು, ಉನ್ನತ ಚಿಂತನೆಗಳ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಕನಸುಗಳನ್ನು ಸಾಕಾರ ಮಾಡಲಾಗುತ್ತಿದೆ. ಗ್ರಾಮೀಣ, ನಗರ ಭಾಗಗಳಲ್ಲಿ ಸರ್ವರಿಗೂ ಶಿಕ್ಷಣವನ್ನು ನೀಡಿ ಸಾಮಾಜಿಕ ಒಗ್ಗಟ್ಟನ್ನು ಮೂಡಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಓದಿದವರು ಶ್ರೇಷ್ಟ ಹುದ್ದೆಗಳಲ್ಲಿ ಹಾಗೂ ವಿವಿಧ ಸಾಮಾಜಿಕ ಸ್ಥಾನಮಾಗಳಲಿದ್ದಾರೆ.
