ಬಳ್ಳಾರಿ. ಆ. 30: ತಾಲೂಕಿನ ರೂಪನಗೂಡಿ ಹೋಬಳಿಯ ಎತ್ತಿನಬೂದಿಹಾಳು ಗ್ರಾಮದ ಸರ್ವೆ ನಂ.55, ವಿಸ್ತೀರ್ಣ 17.01 ಎಕರೆ ಜಮೀನು ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸಂಬಂಧಪಟ್ಟಿದ್ದು, ಈ ಜಮೀನಿನನ್ನು ದೇವಸ್ಥಾನದ ಅರ್ಚಕರು ಎಂದು ಸುಳ್ಳು ಹೇಳಿ ಮಾರಾಟ ಮಾಡಿದವರ ಮೇಲೆ ಕಲಂ 145 ಸಿಆರ್ಪಿಸಿ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಕೀಲರಾದ ಜೆ ರಾಮಣ್ಣ ಮತ್ತು ಕಲ್ಲೇಶ್ವರ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಕಾವಲಿ ಮಾರಣ್ಣ ಸಂಬಂಧಿಸಿದ ಅಧಿಕಾರಿಗಳಲ್ಲಿ ಒತ್ತಾಯಿಸಿದರು.
ಅವರು ಇಂದು ನಗರದ ಪತ್ರಿಕಾಭವನದಲ್ಲಿ ಪತ್ರಿಕೆಯ ಗೋಷ್ಠಿ ನಡೆಸಿ ಮಾತನಾಡಿ
ದೇವಸ್ಥಾನಕ್ಕೆ ಸಂಬಂಧಪಟ್ಟ ಈ ಜಮೀನನ್ನು ಅರ್ಚಕರ ಕುಟುಂಬದವರು 48 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. 

ಜಮೀನು ಮಾರಾಟಕ್ಕೂ ಮುನ್ನವೇ ಈ ಕುರಿತು 1ನೇ ಅಪರ ಸಿವಿಲ್ ನ್ಯಾಯಾಲಯದಲ್ಲಿ ಓ.ಎಸ್.ನಂ.233/2015ರ ದಾವೆ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ, ಜಮೀನು ದೇವಸ್ಥಾನಕ್ಕೆ ಸಂಬಂಧಪಟ್ಟಿರುವುದರಿಂದ ಅರ್ಚಕರು ಅಥವಾ ಅವರ ಸಂಬಂಧಪಟ್ಟವರು ದೇವಸ್ಥಾನದ ಜಮೀನನ್ನು ಮಾರಾಟ ಮಾಡಬಾರದು ಎಂದು ಆದೇಶ ನೀಡಿದ್ದು ಎಂದು ರಾಮಣ್ಣ ಅವರು ತಿಳಿಸಿದರು.
ನ್ಯಾಯಾಲಯದ ವಿಚಾರ ಹಾಗೂ ಜಮೀನಿನ ಸ್ವರೂಪದ ಬಗ್ಗೆ ತಿಳಿದಿದ್ದರೂ ಜಮೀನನ್ನು ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದ ಅವರು . ಜಮೀನು ಮಾರಾಟದ ಬಳಿಕ ದೇವಸ್ಥಾನದ ಪೂಜೆ, ಪುನಸ್ಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡಚಣೆ ಉಂಟಾಗಿದ್ದು, ಹಲವು ಧಾರ್ಮಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಎತ್ತಿನಬೂದಿಹಾಳು ಗ್ರಾಮದ ನಿವಾಸಿಗಳು ಹಾಗೂ ಭಕ್ತರು ತಿಪ್ಪಮ್ಮ ಮತ್ತು 1ನೇ ಪ್ರತಿವಾದಿ ವಿರುದ್ಧ ಓ.ಎಸ್.ನಂ.348/2021ರಲ್ಲಿ ದಾವೆ ಹೂಡಿದ್ದಾರೆ ಎಂದು ಹೇಳಿದರು.
ಮತ್ತು ಈ ವಿಚಾರವಾಗಿ ಗ್ರಾಮಾಂತರ ಪೊಲೀಸ್ ಠಾಣೆಗೆ ಹಲವು ಬಾರಿ ದೂರು ನೀಡಲಾಗಿದ್ದು, ಪೊಲೀಸರು ಜಮೀನನ್ನು ಪರಿಶೀಲಿಸಿ ದೇವಸ್ಥಾನಕ್ಕೆ ಸಂಬಂಧಪಟ್ಟ ಜಮೀನಿನಲ್ಲಿ ಉಳುಮೆ ಮಾಡದಂತೆ ಜಮೀನು ಖರೀದಿದಾರರಿಗೆ ಹಾಗೂ ಅವರ ಸಂಗಡಿಗರಿಗೆ ಸೂಚಿಸಿದ್ದರು. 2025ರಲ್ಲಿ ಜಮೀನು ಖರೀದಿಸಿದವರು ಹಾಗೂ ಅವರ ಸಂಗಡಿಗರು ಪೊಲೀಸ್ ಠಾಣೆಗೆ ಭೇಟಿ ನೀಡಿ, ದೇವಸ್ಥಾನದ ಜಮೀನಿನಿಂದ ಬರುವ ಆದಾಯವನ್ನು ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ದೇವಸ್ಥಾನದ ನಿರ್ವಹಣೆಗಾಗಿ ಯಾವುದೇ ಹಣವನ್ನು ಖಾತೆಗೆ ಜಮಾ ಮಾಡಿಲ್ಲ
ದೇವಸ್ಥಾನದ ನಿರ್ವಹಣೆಗಾಗಿ ನೋಂದಾಯಿತ ಟ್ರಸ್ಟ್ ಕೂಡ ರಚಿಸಲಾಗಿದೆ ಎಂದು ರಾಮಣ್ಣ ಅವರು ತಿಳಿಸಿದರು.
ಜಮೀನಿನ ಯಾವುದೇ ದಾಖಲೆಗಳು ಖರೀದಿದಾರರ ಹೆಸರಿನಲ್ಲಿ ಇಲ್ಲ ಮತ್ತು ಪಹಣಿ ಪತ್ರಿಕೆಯು ಸಹ ಕಲ್ಲೇಶ್ವರ ದೇವಸ್ಥಾನ ಎಂದು ಇರುತ್ತದೆ ಕಳೆದ ಹಲವು ದಶಕಗಳಿಂದ ಈ ಜಮೀನು ಕಲ್ಲೇಶ್ವರ ದೇವಸ್ಥಾನಕ್ಕೆ ಒಳಪಟ್ಟಿರುತ್ತದೆ ಪ್ರಸ್ತುತ ಜಮೀನು ವಿವಾದಕ್ಕೆ ಒಳಪಟ್ಟಿರುವ ಹಿನ್ನೆಲೆಯಲ್ಲಿ, ಕಲಂ 145 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ವಿವಾದಿತ ಜಮೀನಿನಲ್ಲಿ ಜಮೀನು ಖರೀದಿದಾರರು ಹಾಗೂ ಅವರ ಸಂಬಂಧಪಟ್ಟವರು ಉಳುಮೆ ಅಥವಾ ಯಾವುದೇ ಚಟುವಟಿಕೆ ನಡೆಸದಂತೆ ತಡೆಯಬೇಕು. ಅಗತ್ಯವಿದ್ದಲ್ಲಿ ಜಮೀನನ್ನು ಪೊಲೀಸ್ ವಶಕ್ಕೆ ಪಡೆದು ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಹಿರಿಯ ವಕೀಲರಾದ ರಾಮಣ್ಣ ಅವರು ಆಗ್ರಹಿಸಿದರು.
ದೇವಸ್ಥಾನಕ್ಕೆ ಸಂಬಂಧಪಟ್ಟ ಆಸ್ತಿಗಳು ದೇವಸ್ಥಾನದ ಆಸ್ತಿಗಳಾಗಿದ್ದು, ಅವುಗಳನ್ನು ಕಂದಾಯ ದಾಖಲೆಗಳಲ್ಲಿ ದೇವಸ್ಥಾನದ ಹೆಸರು ಹಾಗೂ ಸಂಬಂಧಪಟ್ಟ ಟ್ರಸ್ಟ್ನ ವಿವರಗಳೊಂದಿಗೆ ನಮೂದಿಸುವ ಕುರಿತು ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ. ಈ ಆದೇಶದ ಪ್ರತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ಹೀಗಾಗಿ ಅಧಿಕಾರಿಗಳು ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಲಂ 145 ಸಿಆರ್ಪಿಸಿ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ಜಮೀನಿನಿಂದ ಬರುವ ಆದಾಯವನ್ನು ದೇವಸ್ಥಾನದ ಖಾತೆಗೆ ಜಮಾ ಮಾಡುವಂತೆ 1ನೇ ಪ್ರತಿವಾದಿಗೆ ನಿರ್ದೇಶನ ನೀಡಬೇಕು ಎಂದು ರಾಮಣ್ಣ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಲ್ಲೇಶ್ವರ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಕಾವಲಿ ಮಾರಣ್ಣ ಕಾರ್ಯದರ್ಶಿ ಕಟ್ಟೆ ಬಸಪ್ಪ ಸದಸ್ಯರಾದ , ಶ್ರೀದೇವಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.