ಕುರುಗೋಡು, ಮೇ 15:: ತಾಲೂಕಿನ ಏಳುಬೆಂಚಿ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ (ರಿ) ಮಾವಿನಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ “ಏಳುಬೆಂಚಿ ಗ್ರಾಮೀಣ ಸಂಜೆ ಸಾಂಸ್ಕೃತಿಕೋತ್ಸವ–2026” ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಪುರಾಣಿಕರು ಹಾಗೂ ಸಂಗೀತಗಾರರಾದ ಡಿ.ಎಂ. ಎರ್ರಿಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು. ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಜೊತೆಗೆ ಜನರಿಗೆ ಮನರಂಜನೆ ನೀಡುವ ಕೆಲಸವನ್ನು ವಿವಿಧ ಇಲಾಖೆಗಳು ನಿರಂತರವಾಗಿ ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ. ನಾಗರಾಜ ಮಾತನಾಡಿ, ಗ್ರಾಮೀಣ ಜನರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಲುಪಿಸುವ ಉದ್ದೇಶದಿಂದ ಸರ್ಕಾರ ವಿವಿಧ ಇಲಾಖೆಗಳ ಮೂಲಕ ಧನಸಹಾಯ ನೀಡಿ ಬೆಂಬಲಿಸುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಬಲಾ ವಾದಕರಾದ ಚಾಗೆವರ ಬಸಪ್ಪ ಅವರು, ಹಳ್ಳಿಗಳಲ್ಲೇ ಕಲೆಗಳು ಬೆಳೆಯುತ್ತವೆ. ಆದ್ದರಿಂದ ಗ್ರಾಮೀಣ ಕಲೆಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಕೆಲಸವನ್ನು ಸರ್ಕಾರ ಹಾಗೂ ಸಮಾಜ ಒಟ್ಟಾಗಿ ಮಾಡಬೇಕು ಎಂದು ಹೇಳಿದರು.
ಬಯಲಾಟ ಹಾರ್ಮೋನಿಯಂ ಮಾಸ್ಟರ್ ಡಿ.ಎಂ. ಮಂಜುನಾಥ ಮಾತನಾಡಿ, ಶಾಲಾ ಹಂತದಲ್ಲೇ ಮಕ್ಕಳಲ್ಲಿ ಸಂಗೀತ, ನಾಟಕ ಹಾಗೂ ನೃತ್ಯದಂತಹ ಕಲಾತ್ಮಕ ಚಟುವಟಿಕೆಗಳನ್ನು ಬೆಳೆಸುವ ಅಗತ್ಯವಿದೆ. ಶಾಲೆಗಳಲ್ಲಿ ಸಂಗೀತ, ನಾಟಕ ಹಾಗೂ ನೃತ್ಯ ಶಿಕ್ಷಕರ ನೇಮಕಾತಿಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಾಣಿಕರು ಹಾಗೂ ಕಲಾವಿದರಾದ ಕರುಣಾಮೂರ್ತಿ ಶಾಸ್ತ್ರಿಗಳು ಮಾತನಾಡಿ, ಮಕ್ಕಳ ಆಸಕ್ತಿ ಮತ್ತು ಪ್ರತಿಭೆಯನ್ನು ಗುರುತಿಸಿ ಪೋಷಕರು ಪ್ರೋತ್ಸಾಹ ನೀಡಬೇಕು ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಡಿ.ಎಂ. ಮಂಜುನಾಥ ಮತ್ತು ತಂಡದವರಿಂದ ಸುಗಮ ಸಂಗೀತ ಹಾಗೂ ಕೆ.ಸಿ. ಸುಂಕಣ್ಣ ಮತ್ತು ತಂಡದವರಿಂದ ಸಮೂಹ ನೃತ್ಯ ಪ್ರದರ್ಶನಗಳು ನಡೆಯಿತು.
ಈ ಸಂದರ್ಭದಲ್ಲಿ ಕೆ.ಎಂ. ಶರಭಯ್ಯ ಸ್ವಾಮಿ, ಆರ್. ಲಿಂಗಪ್ಪ, ಎನ್. ಮಾರೆಣ್ಣ, ಬಿ. ಸಿದ್ದಪ್ಪ, ಧರ್ಮಪ್ಪ, ಜಿ.ಎ. ದೊಡ್ಡಬಸವನಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಗುರುಮಹಾಂತೇಶ ಬಿ. ಹಾಗೂ ಕಾರ್ಯದರ್ಶಿ ಕುರುಬರ ಹೇಮೇಶ್ವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತವನ್ನು ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಎಸ್. ಎರ್ರಿಸ್ವಾಮಿ ನೆರವೇರಿಸಿದರು. ಪಿಎಂಶ್ರೀ ಸರ್ಕಾರಿ ಪ್ರೌಢ ಶಾಲೆಯ ಕನ್ನಡ ಶಿಕ್ಷಕರಾದ ಮುದಿಯಪ್ಪ ವಂದಿಸಿದರು.
