ಸಿರುಗುಪ್ಪ,ಮೇ.06;.ತಾಲ್ಲೂಕಿನ ಸಿರಿಗೇರಿ ಗ್ರಾಮವನ್ನು ಕಂದಾಯ ಗ್ರಾಮವಾಗಿ ಘೋಷಿಸಲು ಬಳ್ಳಾರಿ ಜಿಲ್ಲಾ ಸಹಾಯಕ ಆಯುಕ್ತ ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ಸಿರಿಗೇರಿ ಗ್ರಾಮದ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಜಮೀನಿನ ಕ್ರಯಪತ್ರ ಹೊಂದಿರುವ ಮಾಲೀಕನಿಗೆ ಮುತ್ತಿಗೆ ಹಾಕಿದರು.
ಸಹಾಯಕ ಆಯುಕ್ತ ಎಚ್ ಡಿ ರಾಜೇಶ್ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ,'ಬಸವನಪೇಟೆ ನಿವಾಸಿಗಳಿಗೆ ಹಕ್ಕು ಪತ್ರ ನೀಡುವ ಉದ್ದೇಶದಿಂದ ಪರಿಶೀಲನೆ ನಡೆಸುತ್ತಿದ್ದು, ಮನೆ ಕಟ್ಟಿ ವಾಸವಿರುವವರಿಗೆ ಮಾತ್ರ ಹಕ್ಕು ಪತ್ರ ನೀಡಲಾಗುವುದು ಎಂದು ತಿಳಿಸಿದರು.
ಬಸವನಪೇಟೆಯ 5.80 ಎಕರೆ ಭೂಮಿಯು ಹಳ್ಳಿ ಮರದ ವೀರೇಶ ಇವರ ಹೆಸರಿನಲ್ಲಿದೆ. ಸರ್ವೆಯಂತೆ ಈಗಾಗಲೆ ಮನೆಕಟ್ಟಿಕೊಂಡು ವಾಸವಾಗಿರುವ 106 ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದರು.
ಧಾರವಾಡ ಹೈಕೋರ್ಟ್ ಪೀಠದಲ್ಲಿ ಈ ಕುರಿತು ತಡೆಯಾಜ್ಞೆ ವಾಪಸ್ಸು ಪಡೆದಿರುವ ಜಮೀನಿನ ಮಾಲೀಕ ಹಳ್ಳಿಮರದ ವೀರೇಶ ಸರ್ವೆಕಾರ್ಯಕ್ಕೆ ಸಹಕರಿಸಿ ಈಗಾಗಲೇ ವಾಸವಾಗಿರುವವರಿಗೆ ಮಾತ್ರವೆ ಹಕ್ಕುಪತ್ರ ನೀಡಲು ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದರು.
ಸರ್ವೆ ಕಾರ್ಯದ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಸಿರುಗುಪ್ಪ ತಹಶೀಲ್ದಾರ್ ಗೌಸಿಯಾ ಬೇಗಂ, ಆರ್ ಐ ಗಣೇಶ್, ಗ್ರಾಮ ಆಡಳಿತಾಧಿಕಾರಿ ಶಿವಪುತ್ರಪ್ಪ, ನದಾಫ್, ಹೊನ್ನಪ್ಪ, ಪೊಲೀಸ್ ಹಾಗೂ ಪಂಚಾಯಿತಿ ಸಿಬ್ಬಂದಿ ಇದ್ದರು.
