ಬಳ್ಳಾರಿ,ಮೇ.19:: ನಗರದ ಗುಗ್ಗರಹಟ್ಟಿ ಪ್ರದೇಶದಲ್ಲಿರುವ ಜನ್ನತುಲ್ ಫಿರ್ದೋಸ್ ಮಸೀದಿ ಆವರಣದಲ್ಲಿ ಸಮುದಾಯದ ಮಕ್ಕಳಿಗಾಗಿ ವಿಶೇಷ ಪ್ರಾರ್ಥನಾ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಜನ್ನತುಲ್ ಫಿರ್ದೋಸ್ ಮಸೀದಿ ಆಡಳಿತ ಮಂಡಳಿ ಸದಸ್ಯರ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ 100ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಪ್ರಾರ್ಥನೆ, ಧಾರ್ಮಿಕ ಪಾಠಗಳು ಹಾಗೂ ನೈತಿಕ ಮೌಲ್ಯಗಳ ಕುರಿತು ತಿಳುವಳಿಕೆ ಪಡೆದರು.
ಬೇಸಿಗೆ ರಜೆ ಸಂದರ್ಭದಲ್ಲಿ ಮಕ್ಕಳು ಅನಾವಶ್ಯಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಮಾಡಿ, ಧಾರ್ಮಿಕ ಹಾಗೂ ಶಿಸ್ತುಬದ್ಧ ಜೀವನದತ್ತ ಪ್ರೇರೇಪಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ ಎಂದು ಆಡಳಿತ ಮಂಡಳಿ ಸದಸ್ಯರು ತಿಳಿಸಿದರು.
ಪ್ರಾರ್ಥನೆ ಮತ್ತು ಧಾರ್ಮಿಕ ಬೋಧನೆಗಳ ಮೂಲಕ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ದೇವರ ಬಗ್ಗೆ ಭಕ್ತಿ ಹಾಗೂ ಸಮಾಜದ ಜವಾಬ್ದಾರಿಯ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಮಾಲಿಕ್ ಭಾಷಾ, ಶಫಿ, ಜಾಫರ್ ಸಾಬ್, ನೂರ್ ಮೊಹಮ್ಮದ್, ಮಹಮ್ಮದ್ ಸಬ್, ಜಿಲಾನ್ ಸಬ್, ಅನ್ವರ್ ಭಾಷಾ ಸೇರಿದಂತೆ ಸ್ಥಳೀಯ ಮುಖಂಡರು, ಪೋಷಕರು ಹಾಗೂ ಸಮುದಾಯದ ಗಣ್ಯರು ಉಪಸ್ಥಿತರಿದ್ದರು.
