ಬಾಗಲಕೋಟೆ, ಜೂನ್ ೧೧ : ಜಮಖಂಡಿ ತಹಶೀಲ್ದಾರ ಕಾರ್ಯಾಲಯದಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಂ.ಬಿ.ನಂದಗಾವಿ ಅವರ ನೇತೃತ್ವದಲ್ಲಿ ಬುಧವಾರ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ೧೩ ಅರ್ಜಿಗಳು ಸ್ವೀಕರಿಸಲಾಯಿತು.
ಜನಸಂಪರ್ಕ ಸಭೆಯಲ್ಲಿ ಜಮಖಂಡಿ ತಾಲೂಕಾ ಮಟ್ಟದ ವಿವಿಧ ಇಲಾಖೆಯ ೪೦ ಜನ ಅಧಿಕಾರಿಗಳು ಸೇರಿದಂತೆ ಲೋಕಾಯುಕ್ತ ಠಾಣೆಯ ಪೊಲೀಸ್ ಉಪಾಧೀಕ್ಷಕ ಸುರೇಶರೆಡ್ಡಿ ಎಂ.ಎಸ್, ಪೊಲೀಸ್ ನಿರೀಕ್ಷಕರಾದ ಎಂ.ಬಿ.ಬಿರಾದಾರ, ಎನ್.ಆರ್.ಖಿಲಾರೆ ಹಾಜರಿದ್ದು, ಬಂದ ದೂರು ಅರ್ಜಿಗಳನ್ನು ಕೂಡಲೇ ಇತ್ಯರ್ಥಪಡಿಸಿ ಹಿಂಬರಹ ಇಲ್ಲವೇ ಮಾಹಿತಿ ನೀಡುವಂತೆ ಸಭೆಯಲ್ಲಿ ಸೂಚಿಸಲಾಯಿತು.
ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗಳ ಬಗ್ಗೆ ವಿಚಾರಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಧ್ಯತೆಯ ಮೇಲೆ ನಿಯಮಾನುಸಾರ ಕ್ರಮ ಜರುಗಿಸಲು ಮತ್ತು ಸಾರ್ವಜನಿಕ ಸಲ್ಲಿಸಿದ ಅರ್ಜಿಗಳನ್ನು ಸ್ವೀಕೃತಿ ವಿಭಾಗದಲ್ಲಿ ಸ್ವೀಕರಿಸಿ ಸಂಬಂಧಿಸಿದವರಿಗೆ ಸ್ವೀಕೃತಿ ನೀಡಲು ಹಾಗೂ ಸದರಿ ವಿಷಯಗಳನ್ನು ವಿನಾಕಾರಣ ಬಾಕಿ ಇಟ್ಟುಕೊಳ್ಳದೇ ನಿಯಮಾನುಸಾರ ಕ್ರಮ ಜರುಗಿಸಲು ತಿಳಿಸಲಾಯಿತು.
ಒಂದು ವೇಳೆ ತಮ್ಮ ಅಧಿಕಾರ ವ್ಯಾಪ್ತಿಗೆ ಒಳಪಡದಿದ್ದಲ್ಲಿ ಸೂಕ್ತ ಮಾಹಿತಿಯೊಂದಿಗೆ ಕೂಡಲೇ ಹಿಂಬರಹ ನೀಡಲು ಸೂಚಿಸಲಾಯಿತು. ಶಾಲೆ, ಕಾಲೇಜು ಹಾಗೂ ವಸತಿ ನಿಲಯಗಳ ಆವರಣದಲ್ಲಿ ಮತ್ತು ಅಕ್ಕ-ಪಕ್ಕದಲ್ಲಿ ಅಪಾಯಕಾರಿ ರೀತಿಯಲ್ಲಿರುವ ವಿದ್ಯುತ್ ಕಂಭ ಪರಿವರ್ತಕ ಹಾಗೂ ಇತರೆ ಇಲೆಕ್ಟ್ರಿಕ್ ಸಾಧನಗಳನ್ನು ತುರ್ತಾಗಿ ಸ್ಥಳಾಂತರ ಮಾಡಲು ಹಾಜರಿದ್ದ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಸಾರ್ವಜನಿಕ ಶೌಚಾಲಯಗಳನ್ನು ಸರಿಯಾಗಿ ನಿರ್ವಹಣೆ ಮಾಡುವದರ ಜೊತೆಗೆ ಬಯಲು ಮುಕ್ತ ಶೌಚಾಲಯ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.