ಹುನಗುಂದ,ಮೇ,೧೮ : ತಾಲೂಕಿನ ಇದ್ದಲಗಿ ಗ್ರಾಮದ ಮುಳಗಡೆ ಸಂತ್ರಸ್ತರ ದುರಸ್ತಿಗೊಂಡ ಶೆಡ್ಗಳ ಪುನರ ನಿರ್ಮಾಣ, ಮೂಲಭೂತ ಸೌಲಭ್ಯ ಒದಗಿಸುವದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಡು ಬಿಸಿಲಿನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ೧೧ನೆಯ ದಿನಕ್ಕೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಭೇಟಿ ನೀಡಿ ಸಂತ್ರಸ್ತರಿಗೆ ಬೆಂಬಲ ಸೂಚಿಸಿದರು.
ಸಂತ್ರಸ್ತರ ವಿವಿಧ ಬೇಡಿಕೆಗಳ ಮನವಿ ಸ್ವೀಕರಿಸಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ ನಾನು ಪ್ರಥಮ ಬಾರಿಗೆ ಶಾಸಕನಾದಾಗ ಸುಮಾರು ೧೩ ಹಳ್ಳಿಗಳನ್ನು ಕೃಷ್ಣ ಮತ್ತು ಮಲಪ್ರಭೆ ನದಿ ಪ್ರವಾಹಕ್ಕೆ ಸಿಲುಕುವ ಗ್ರಾಮಗಳ ಗ್ರಾಮಸ್ಥರನ್ನು ಯೋಜನಾ ನಿರಾಶ್ರಿತರೆಂದು ಘೋಷಿಸಬೇಕೆನ್ನುವದು ಬಹುದಿನದ ಬೇಡಿಕೆಯಾಗಿತ್ತು. ಇದಕ್ಕೂ ಮೊದಲು ೨೦೦೭ರಲ್ಲಿ ಬಂದ ಭಯಂಕರ ಪ್ರವಾಹಕ್ಕೆ ಸಿಲುಕಿದ ಇದ್ದಲಗಿ ಗ್ರಾಮದ ೩೫೦ಕ್ಕೂ ಹೆಚ್ಚು ಕುಟುಂಬಗಳಿಗೆ ತಾತ್ಕಾಲಿಕ ಶೆಡ್ಡುಗಳನ್ನು ನಿರ್ಮಿಸಿ ಕೊಟ್ಟಿದ್ದಲ್ಲದೇ ನನ್ನ ಅವಧಿಯಲ್ಲಿ ಎರಡು ಬಾರಿ ಆ ಶೆಡಗಳನ್ನು ರಿಪೇರಿ ಕೂಡಾ ಮಾಡಿಸಿದ್ದೇನೆ. ತಾಲೂಕಿನ ಕಟಗೂರದಿಂದ ಕೆಸರಪೆಂಟಿವರಗಿನ ಸುಮಾರು ೧೩ ಗ್ರಾಮಗಳನ್ನು ನನ್ನ ಅವದಿಯಲ್ಲೆ ಯುಕೆಪಿ ಅಡಿಯಲ್ಲಿ ಮುಳುಗಡೆ ಗ್ರಾಮವೆಂದು ಮಾಡಿದೆ. ಇದ್ದಲಗಿ ಗ್ರಾಮದ ಪುನರ್ವಸತಿ ಕೇಂದ್ರಕ್ಕೆ ೧೧೦ಕೆವಿ ವಿದ್ಯುತ್ ಸ್ಟೇಷನ್ ಮತ್ತು ೧೨೩ ವಿದ್ಯುತ್ ಟಿ.ಸಿಗಳನ್ನು ಕೂಡಾ ನನ್ನ ಅವಧಿಯಲ್ಲಿ ಮಂಜೂರು ಮಾಡಿಸಿದೆ. ಆದರೆ ೨೦೨೩ ನಂತರ ಮಂಜೂರಾತಿ ಫೈಲ್ ಮುಂದು ಹೋಗದೇ ದೂಳು ಹಿಡಿದು ಕಚೇರಿಯಲ್ಲಿ ಬಿದ್ದಿದೆ. ಬಿದ್ದು ಹೋಗಲಿರುವ ಶಡ್ಡುಗಳನ್ನು ಸ್ಥಳಾಂತರ ಮಾಡಿ ಹೊಸ ಶೆಡ್ ನಿರ್ಮಿಸಿ ಕೊಡುವುದು, ಒಂದು ಗುಂಟೆ ಬದಲು ನಾಲ್ಕು ಗುಂಟೆ ಜಾಗೆ ನೀಡುವುದು ಮತ್ತು ಪುನರ್ವಸತಿ ಕೇಂದ್ರದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆನ್ನುವ ನಿಮ್ಮಗಳ ನ್ಯಾಯಯುತ ಬೇಡಿಕೆಗೆ ನನ್ನ ಬೆಂಬಲವಿದೆ. ನನಗೆ ನೀಡಿದ ಮನವಿಯ ಜೊತೆಗೆ ನನ್ನ ಪತ್ರವನ್ನು ಹಚ್ಚಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಕಂದಾಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಮಾತನಾಡಿ ಬೇಡಿಕೆ ಇಏರಿಕೆಗೆ ಒತ್ತಾಯಿಸುವ ಕೆಲಸ ಮಾಡುತ್ತೇನೆ ಹೊರತು ನಾನೇ ಎಲ್ಲವನ್ನು ಮಾಡುತ್ತಿದ್ದೇನೆಂದು ಹೇಳಲಿಕ್ಕೆ ನನ್ನ ಕೈಯಲ್ಲಿ ಏನು ಅಧಿಕಾರವಿಲ್ಲ. ನೀವು ಅಧಿಕಾರ ಕೂಡಾ ನನಗೆ ಕೊಟ್ಟಿಲ್ಲ. ಅದರ ಜೊತೆಗೆ ೨೮೦ ಸಂತ್ರಸ್ತರ ಗ್ರಾಮ ಪಂಚಾಯಿತಿಯ ೯ ನಂಬರ್ ರಜಿಸ್ಟರಲ್ಲಿ ಹೆಸರು ಇದ್ದರೂ ಕೂಡಾ ಅವರಿಗೆ ಹಕ್ಕು ಪತ್ರ ಕೊಟ್ಟಿಲ್ಲದಿರುವುದು ಮತ್ತು ೧೬೦ ಸಂತ್ರಸ್ತರ ಹೆಸರು ಇಲ್ಲದಿರುವರಿಗೂ ಹಕ್ಕು ಪತ್ರ ನೀಡುವಂತೆ ಒತ್ತಾಯಿಸುತ್ತೇನೆ ಎಂದರು.
ಅಧಿಕಾರಿಗಳ ಮೂಲಕ ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡ್ತೀನಿ ಸದ್ಯ ಈ ಧರಣಿ ಸತ್ಯಾಗ್ರಹವನ್ನು ಬಿಟ್ಟುಬಿಡಿ ಎಂದಾಗ ನಮ್ಮ ನ್ಯಾಯಯುತ ಬೇಡಿಕೆ ಈಡೇರುವರಿಗೂ ಯಾವುದೇ ಕಾರಣಕ್ಕೂ ಧರಣಿಯನ್ನು ಹಿಂಪಡೆಯುವುದಿಲ್ಲ ಎಂದು ಸಂತ್ರಸ್ತರು ಮಾಜಿ ಶಾಸಕರಿಗೆ ಖಡಕಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ್ ಬಡ್ಡಿ, ಮಹಾಂತೇಶ ನಾಡಗೌಡರ, ಮಲ್ಲಪ್ಪ ಹಾವರಗಿ, ಸಂಗಮೇಶ ಆನೇಹೊಸೂರ, ರಾಚಪ್ಪ ಹುರಕಡ್ಲಿ,ಹಸನಸಾಬ ಪಿಂಜಾರ, ಭೀಮಣ್ಣ ಅಡಿಹಾಳ, ಕಲ್ಲಪ್ಪ ಆನೆಹೊಸೂರ,ಶರಣಪ್ಪ ಮುಳ್ಳೂರ,ಕಲ್ಲಪ್ಪ ಬೇನಾಳ,ಬಸವರಾಜ ಮುಳ್ಳೂರ,ಮಲ್ಲಮ್ಮ ಗಡ್ಡಿಮಠ, ಮುತ್ತವ್ವ ಬೇನಾಳ, ಮಹಾದೇವಿ ತೋಟಗೇರಿ, ನೀಲಮ್ಮ ಮಾಗಿ, ಭೀಮವ್ವ ಬೇನಾಳ. ಸಂಗವ್ವ ಹಾವರಗಿ ಸೇರಿದಂತೆ ಇತರರಿದ್ದರು.
