ವಿಜಯಪುರ,ಏ.೨4: ನಿರ್ದಿಷ್ಟ ಗುರಿ ಇಟ್ಟುಕೊಂಡು ಆ ದಿಶೆಯಲ್ಲಿ ಅಧ್ಯಯನಶೀಲರಾದರೆ ಖಂಡಿತಾ ಹೆಚ್ಚಿನ ಅಂಕ ಪಡೆದು ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಹೇಳಿದರು.
ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ನಿತ್ಯ ಅಭ್ಯಾಸದೊಟ್ಟಿಗೆ ಮಾನಸಿಕ ಹಾಗೂ ದೈಹಿಕ ಸಮತೋಲನ ಕಾಯ್ದುಕೊಂಡರೆ ಮುಖಬರುವ ದಿನಗಳಲ್ಲಿ ಉನ್ನತ ಸಾಧನೆ ಮಾಡಬಹುದಾಗಿದೆ ಎಂದ ಅವರು, ಇದೇ ವೇಳೆ ಸಾಧನೆ ಮಾಡಿದ ಸಾಧಕರು ಹಾಗೂ ಪೋಷಕರನ್ನು ಅಭಿನಂದಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳಾದ ರಿಷಿ ಆನಂದ ಮಾತನಾಡಿ, ಕಳೆದ ವರ್ಷಕ್ಕಿಂತ ಪ್ರಸ್ತುತ ವರ್ಷದ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಿಸಿದ್ದು ಸಂತಸದ ವಿಷಯ. ಈ ಒಂದು ಕಾರ್ಯದಲ್ಲಿ ಶ್ರಮಿಸಿದ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ವಿದ್ಯಾರ್ಥಿಗಳನ್ನು, ಪಾಲಕರನ್ನು ಅಭಿನಂದಿಸಿದರು. ಪ್ರಸ್ತುತ ವರ್ಷ ಜಿಲ್ಲೆಯು ಇನ್ನೂ ಉನ್ನತ ಸಾಧನೆ ಮಾಡುವಂತೆ ಜೂನ್ ಪ್ರಾರಂಭದಿಂದಲೇ ಯೋಜನೆಗಳನ್ನು ಹಮ್ಮಿಕೊಳ್ಳಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ನಾಗರಬೆಟ್ಟ ಆಕ್ಸ್ ಫರ್ಢ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸೌಜನ್ಯ ಬಸವರಾಜ ಕಂದಕೂರ, ನೇಹಾ ಪ್ರಭುಗೌಡ ಗುರಡ್ಡಿ, ಪೂಜಾ ಎಚ್ ಲಮಾಣಿ, ಜ್ಯೋತ್ಸಾ ಬಾಲಚಂದ್ರ ಪಾಟೀಲ, ಗಂಗಮ್ಮ ಅಶೋಕ ಕೋಳೂರ, ಸೌಪರ್ಣಿಕಾ ಸಂಗನಗೌಡ ಪಾಟೀಲ, ಸುಪ್ರೀತ ಎಸ್ ಪಾಟೀಲ, ಉಮೇರಾ ಮಹ್ಮದಸಾಬ ಉಸ್ತಾದ, ಎ,ಎ ತಾಂಬೆ, ಅರ್ಪಿತಾ ಮಡಿವಾಳಪ್ಪ ನಾಟೀಕರ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೀರಯ್ಯ ಸಾಲಿಮಠ, ಸೇರಿದಂತೆ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳ ಪಾಲಕರು, ಶಿಕ್ಷಕರು. ಶಾಲಾ ಆಡಳಿತ ಮಂಡಳಿಯ ಮತ್ತು ಎಸ್ ಡಿಎಂಸಿ ಸದಸ್ಯರು ಪಾಲ್ಗೊಂಡಿದ್ದರು.