ಬೆಳಗಾವಿ,11 : ನಗು ಮುಖದ ಜನರು ಉತ್ತಮ ಆರೋಗ್ಯವನ್ನು ಹೊಂದಿರುತ್ತಾರೆ. ಅವರು ಹೆಚ್ಚಿನ ಆಯುಷ್ಯವನ್ನು ಹೊಂದಿರುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಜಪಾನ ದೇಶದ ಜನರು. ಇವರು ಶತಾಯುಷಿಗಳು, ಕ್ರಿಯಾಶೀಲರು ಇದಕ್ಕೆ ಮುಖ್ಯ ಕಾರಣವೆಂದರೆ ಇವರು ಸದಾ ಹಸನ್ಮುಖಿಗಳು. ಎಂದು ಖ್ಯಾತ ವೈದ್ಯರಾದ ಡಾ. ಎಚ್. ಬಿ. ರಾಜಶೇಖರ ಅವರು ಇಂದಿಲ್ಲಿ ಹೇಳಿದರು.
ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಇವರು ದಿ. ೯ ಶನಿವಾರದಂದು ಸಾಹಿತ್ಯ ಭವನದಲ್ಲಿ "ವೈದ್ಯಕೀಯ ವೃತ್ತಿಯಲ್ಲಿ ಹಾಸ್ಯ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅದ್ಯಕ್ಷತೆಯನ್ನು ವಹಿಸಿದ್ದ ಡಾ. ರಾಜಶೇಖರ ಮೇಲಿನಂತೆ ಹೇಳಿದರು. ಮುಂದೆ ಮಾತನಾಡುತ್ತ ಅವರು , ಹನ್ನೆರಡು ವರ್ಷಗಳಿಂದ ಜನರನ್ನು ನಗೆಸುತ್ತ, ನೋವನ್ನು ಮರೆಸುತ್ತಿರುವ ಹಾಸ್ಯಕೂಟದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಪ್ರೊ. ಜಿ. ಕೆ. ಕುಲಕರ್ಣಿಯವರು ನವಿರಾದ ಹಾಸ್ಯದೊಂದಿಗೆ ಜನರಲ್ಲಿ ನಗೆಯಲೆ ಎಬ್ಬಿಸಿದರು. “ಹಾಸ್ಯದ ಹಿಂದಿನ ವಿಜ್ಞಾನ” ವಿಷಯ ಕುರಿತಂತೆ ಡಾ. ಚಿದಾನಂದ ಗವಿಮಠ ಅವರು ಮಾತನಾಡಿ ದೇಹದ ಸಂಪೂರ್ಣ ಆರೋಗ್ಯಕ್ಕೆ ನಗು ಹೇಗೆ ಮಹತ್ವವಾಗಿದೆ ಎಂಬುದನ್ನು ಸವಿಸ್ತಾರವಾಗಿ ವಿವರಿಸಿದರು.
ವೈದ್ಯಕೀಯ ವೃತ್ತಿಯಲ್ಲಿ ಹಾಸ್ಯ ಕುರಿತಂತೆ ಆಯುರ್ವೇದ ವೈದ್ಯೆಯರಾದ ಡಾ. ಸ್ವಪ್ನಾ ಕುಲಕರ್ಣಿ ಮತ್ತು ಡಾ. ವೈಷ್ಣವಿ ಕಾಥವಟೆ ಮಾತನಾಡಿದರು. ಪ್ರಾಸ್ತಾವಿಕ ನುಡಿಗಳನ್ನು ಗುಂಡೇನಟ್ಟಿ ಮಧುಕರ ಮಾತನಾಡಿದರು. ತಾನಾಜಿ ನಿರೂಪಿಸಿದರು. ಸಾಹಿತ್ಯ ಭವನ ವಿಶ್ವಸ್ತ ಮಂಡಳಿಯ ಗೌರವ ಕಾರ್ಯದರ್ಶಿ ರಾಮಚಂದ್ರ ಕಟ್ಟಿ, ಹಾಸ್ಯಕೂಟದ ಎಂ. ಬಿ. ಹೊಸಳ್ಳಿ, ಅರವಿಂದ ಹುನಗುಂದ ಉಪಸ್ಥಿತರಿದ್ದರು.