“ನೀವು ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶ ಸರ್ಕಾರಕ್ಕೆ ಕಾನೂನು ರೀತಿಯಲ್ಲಿ ಹಸ್ತಾಂತರಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಈ ದೇಶದ ಜನರು ಅವರ ವಿಚಾರಣೆಗೆ ಕಾದಿದ್ದಾರೆ. ಆಕೆ ಆ ವಿಚಾರಣೆಯನ್ನು ಎದುರಿಸಲಿ” ಎಂದು BNP ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಹೇಳಿದ್ದಾರೆ. ಶೇಖ್ ಹಸೀನಾಗೆ ಆಶ್ರಯ ನೀಡುವ ಮೂಲಕ ಭಾರತವು ಪ್ರಜಾಪ್ರಭುತ್ವದ ಬಗ್ಗೆ ತನ್ನ ಬದ್ಧತೆಯನ್ನು ತೋರುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.
ಭಾರತದಲ್ಲಿಯೇ ಉಳಿದುಕೊಂಡು ಬಾಂಗ್ಲಾದೇಶದಲ್ಲಿ ಸಂಭವಿಸಿದ ಕ್ರಾಂತಿಯನ್ನು ತಡೆಯಲು ಶೇಖ್ ಹಸೀನಾ ನಾನಾ ಕುತಂತ್ರಗಳನ್ನು ಆರಂಭಿಸಿದ್ದಾರೆ ಎಂದು ಮಿರ್ಜಾ ಫಕ್ರುಲ್ ಆರೋಪಿಸಿದ್ದಾರೆ. ಜುಲೈ ಮಧ್ಯದಲ್ಲಿ ಸರ್ಕಾರಿ ಉದ್ಯೋಗಗಳ ವಿವಾದಾತ್ಮಕ ಕೋಟಾ ಪದ್ಧತಿಯ ವಿರುದ್ಧ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ ಪ್ರಾರಂಭವಾದಾಗಿನಿಂದ ಬಾಂಗ್ಲಾದೇಶದಲ್ಲಿ 600ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದು ಹಿಂಸಾತ್ಮಕ ಸರ್ಕಾರಿ ವಿರೋಧಿ ಆಂದೋಲನಕ್ಕೆ ವೇಗವನ್ನು ನೀಡಿತು.