ಘಟಪ್ರಭಾ: ಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ನೇತ್ರತ್ವದಲ್ಲಿ ಇಂದು ಘಟಪ್ರಭಾ ಎಡದಂಡೆ ಕಾಲುವೆಗೆ ಇಳಿದು ರೈತರು ಪ್ರತಿಭಟನೆ ನಡೆಸಿದರು.
ಘಟಪ್ರಭಾದಲ್ಲಿ ಎಡದಂಡೆ ಕಾಲುವೆ ಮೇಲಿನ ಬ್ರಿಜ್ ತಿಂಗಳ ಹಿಂದೆ ಶಿಥಿಲಗೊಂಡ ಕಾರಣ ಹಳೆ ಬ್ರಿಜ್ ತೆರವುಗೊಳಿಸಿ ಕಳೆದ ಒಂದು ತಿಂಗಳಿನಿಂದ ೫ ಕೋಟಿ ವೆಚ್ಚದಲ್ಲಿ ನೂತನ ಬ್ರಿಜ್ ಕಾಮಗಾರಿ ಬರದಿಂದ ನಡೆಯುತಿತ್ತು. ಪ್ರಯಾಣಿಕರ ಅನುಕೂಲಕ್ಕಾಗಿ ಹಳೆ ಸೇತುವೆ ಪಕ್ಕದಲ್ಲಿ ಎಡದಂಡೆ ಕಾಲುವೆ ಮೇಲೆ ಪೈಪಗಳನ್ನು ಹಾಕಿ ತಾತ್ಕಾಲಿಕ ರಸ್ತೆ ಮಾಡಲಾಗಿತ್ತು. ಇದರಿಂದ ಕಾಲುವೆಗೆ ನೀರು ಬಿಡಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ ಆದರೆ ಇಂದು ರೈತರು ರೊಚ್ಚಿಗೆದ್ದು ತಾತ್ಕಾಲಿಕವಾಗಿ ನಿರ್ಮಿಸಿದ ರಸ್ತೆಯನ್ನು ತೆರವುಗೊಳಿಸಿ ನೀರು ಬಿಡಲು ಆಗ್ರಹಿಸಿದರು. ಒಂದು ಹಂತದಲ್ಲಿ ರೈತರೆ ಕಾಲುವೆಗೆ ಇಳಿದು ತಾತ್ಕಾಲಿಕ ರಸ್ತೆಯನ್ನು ತೆರವುಗೊಳಿಸಲು ಪ್ರಯತ್ನಸಿದರು ಆ ಸಂದರ್ಭದಲ್ಲಿ ರೈತರನ್ನು ಸಮಾಧಾನಪಡಿಸಲು ಅಧಿಕಾರಿಗಳು ಹಾಗೂ ಪೊಲೀಸರು ತುಂಬಾ ಪ್ರಯತ್ನ ಪಟ್ಟರು ಯಾರ ಮಾತನ್ನು ಯಾರು ಕೇಳುವ ಪರಿಸ್ಥಿತಿ ಇಲ್ಲದಿದ್ದ ಕಾರಣ ಹೈಡ್ರಾಮವೆ ನಡೆಯಿತು. ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಅಧಿಕಾರಿಗಳನ್ನು ತೀವೃವಾಗಿ ತೆಗೆದುಕೊಂಡು ನೀವು ೫ ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದ್ದೀರಿ ಆದರೆ ಕಳೆದ ಒಂದು ತಿಂಗಳಿನಿಂದ ರೈತರ ಬೆಳೆಗೆ ನೀರು ಇಲ್ಲದೆ ಕೋಟ್ಯಾಂತರ ರೂಪಾಯಿ ಬೆಳೆ ಹಾನಿಯಾಗುತ್ತಿದೆ. ದನ-ಕರುಗಳಿಗೆ ನೀರು ಇಲ್ಲದೆ ಸಾಯುತ್ತಿದೆ ಎಂದು ಹೇಳಿದರು.
ಬ್ರಿಜ್ ಶಿಥಿಲಗೊಂಡ ನಂತರ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿಯವರೆ ನೂತನ ಬ್ರಿಜ್ ತಕ್ಷಣ ಮಾಡಿಸಲು ಅಧಿಕಾರಿಗಳಿಗೆ ಆದೇಶಿಸಿ ೪೫ ದಿನಗಳಲ್ಲಿ ಪೂರ್ಣಗೊಳಿಸಲು ಸೂಚಿಸಿದ್ದರು ಹಾಗೂ ಕಾಮಗಾರಿ ಪ್ರಾರಂಭಗೊಂಡ ನಂತರ ಸ್ಥಳಕ್ಕೆ ಸಚಿವರು ಈಗಾಗಲೆ ೪ ಬಾರಿ ಭೇಟಿ ನೀಡಿ ಪರಿಶೀಲಿಸಿದ್ದರು. ರಸ್ತೆ ಕಾಮಗಾರಿ ಇನ್ನು ಒಂದು ವಾರದಲ್ಲಿ ಮುಗಿಯುತ್ತಿರುವುದರಿಂದ ಒಂದು ವಾರದ ನಂತರ ನೀರು ಬಿಡುವ ಭರವಸೆಯನ್ನು ಅಧಿಕಾರಿಗಳು ನೀಡಿದರು ರೈತರು ಒಪ್ಪದೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಕಾರಣ ಪ್ರಯಾಣಿಕರ ಅನುಕೂಲಕ್ಕಾಗಿ ತಾತ್ಕಾಲಿಕವಾಗಿ ನಿರ್ಮಿಸಿದ ರಸ್ತೆಯನ್ನು ನಾಳೆಯಿಂದಲೆ ತೆರವುಗೊಳಿಸಲು ಅಧಿಕಾರಿಗಳು ಸೂಚಿಸಿದ್ದು ಮುಂದಿನ ೪ ದಿನ ಪ್ರಯಾಣಿಕರು ಬೇರೆ ರಸ್ತೆಯಲ್ಲಿ ಪ್ರಯಾಣಿಸಲು ಸೂಚನೆ ನೀಡಿದರು. ಹಾಗೂ ಜಿಲ್ಲಾಧಿಕಾರಿಗಳು ದಿ.೨೦ರಿಂದ ನೀರು ಬಿಡಲು ಭರವಸೆ ನೀಡಿದ್ದರಿಂದ ಸುಮಾರು ೪ ಗಂಟೆಯ ಪ್ರತಿಭಟನೆಯ ನಂತರ ರೈತರು ಪ್ರತಿಭಟನೆಯನ್ನು ವಾಪಸು ಪಡೆದರು.
ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ಡಾ|| ಮೋಹನ ಭಸ್ಮೆ, ಘಟಪ್ರಭಾ ಠಾಣೆಯ ಪಿಐ ಎಚ್.ಡಿ.ಮುಲ್ಲಾ, ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ, ಗೋಕಾಕ ಸಿಪಿಐ ಸುರೇಶ ಬಾಬು, ಸಂಕೇಶ್ವರ ಸಿಪಿಐ, ಮತ್ತು ಸುತ್ತ-ಮುತ್ತಲಿನ ಪೊಲೀಸ್ ಠಾಣೆಯ ಪಿಎಸ್ಐ, ನೀರಾವಾರಿ ಇಲಾಖೆಯ ಅಧಿಕಾರಿ ನಾಗೇಶ ಕೊಲ್ಕಾರ ಮತ್ತು ದುಂಡಪ್ಪ ಜೊಕ್ಕಾನಟ್ಟಿ, ಸಚಿವರ ಅಪ್ತ ಸಹಾಯಕ ಶಿವು ಪಾಟೀಲ, ಪಿಡಬ್ಲ್ಯೂಡಿ ಅಧಿಕಾರಿ ರಾಮಚಂದ್ರ ಅವತಾಡೆ ಹಾಜರಿದ್ದರು ಹಾಗೂ ರಾಯಬಾಗ, ಹುಕ್ಕೇರಿ, ಮೂಡಲಗಿ ಭಾಗದ ನೂರಾರು ರೈತರು ಪ್ರತಿಭಟನೆಗೆ ಆಗಮಿಸಿದ್ದರು.