ಬಳ್ಳಾರಿ06:..: ಸಚಿವ ಬಿ . ಜಡ್ . ಜಮೀರ್ ಅಹ್ಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ನಗರದ ಕೌಲ್ಬಜಾರ್ ಪ್ರದೇಶದ ದಿವಾನೆ ಮಸ್ತಾನ್ ವಲಿ ಬಾಬಾ ದರ್ಗಾದಲ್ಲಿ ಶುಕ್ರವಾರ ಮುಸ್ಲಿಂ ಸಮುದಾಯದ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ ಕೆಲ ಮುಖಂಡರು, "ಜಮೀರ್ ಅವರಿಗೆ ಡಿಸಿಎಂ ಸ್ಥಾನ ನೀಡದಿದ್ದರೆ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ" ಎಂದು ಎಚ್ಚರಿಕೆ ನೀಡಿದರು.
ಶುಕ್ರವಾರದ ನಮಾಜ್ ಬಳಿಕ ದರ್ಗಾಕ್ಕೆ ಚದ್ದರ್ ಸಮರ್ಪಿಸಿ ವಿಶೇಷ ದುವಾ ಸಲ್ಲಿಸಿದ ಮುಖಂಡರು, ಜಮೀರ್ ಅಹ್ಮದ್ ಅವರು ರಾಜ್ಯದ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ಗೆಲುವಿಗೆ ನಿರಂತರವಾಗಿ ಶ್ರಮಿಸುತ್ತಿರುವ ನಾಯಕರಾಗಿದ್ದಾರೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಮುಖಂಡರು, "ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಮುಸ್ಲಿಂ ಸಮುದಾಯದ ಕೊಡುಗೆ ಅಪಾರವಾಗಿದೆ. ಪ್ರತಿ ಚುನಾವಣೆಯಲ್ಲೂ ಪಕ್ಷದ ಪರವಾಗಿ ದುಡಿಯುವವರು ನಾವು. ಮತಗಳ ರೂಪದಲ್ಲಿ ಬೆಂಬಲ ನೀಡುವುದು ನಾವು. ಪಕ್ಷ ಸಂಕಷ್ಟದಲ್ಲಿದ್ದಾಗ ಬೆನ್ನಿಗೆ ನಿಲ್ಲುವುದು ನಾವು. ಆದರೆ ಅಧಿಕಾರ ಹಂಚಿಕೆ ಮತ್ತು ಉನ್ನತ ಹುದ್ದೆಗಳ ವಿಚಾರ ಬಂದಾಗ ಮಾತ್ರ ನಮ್ಮ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಕಾಂಗ್ರೆಸ್ ಪಕ್ಷದಲ್ಲಿ ಕೆಲವರಿಗೆ ಬೆಣ್ಣೆ, ಕೆಲವರಿಗೆ ಸುಣ್ಣ ಎಂಬ ರೀತಿಯ ರಾಜಕಾರಣ ನಡೆಯಬಾರದು. ಪಕ್ಷಕ್ಕಾಗಿ ಹಗಲಿರುಳು ದುಡಿಯುವ ನಾಯಕರಿಗೆ ಸೂಕ್ತ ಗೌರವ ಸಿಗಬೇಕು. ಜಮೀರ್ ಅಹ್ಮದ್ ಅವರು ಸಚಿವರಾಗಿ ಮಾತ್ರವಲ್ಲದೆ ರಾಜ್ಯ ಮಟ್ಟದಲ್ಲಿ ಪಕ್ಷದ ಸಂಘಟನೆ ಬಲಪಡಿಸಲು ಸಾಕಷ್ಟು ಶ್ರಮಿಸಿದ್ದಾರೆ. ಇಂತಹ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದು ನ್ಯಾಯಸಮ್ಮತ ಬೇಡಿಕೆಯಾಗಿದೆ" ಎಂದು ಹೇಳಿದರು.
ಇದೇ ವೇಳೆ ಕೆಲ ಮುಖಂಡರು ಕಾಂಗ್ರೆಸ್ ಹೈಕಮಾಂಡ್ಗೆ ನೇರ ಸಂದೇಶ ರವಾನಿಸುತ್ತಾ, "2028ರ ವಿಧಾನಸಭಾ ಚುನಾವಣೆಗೆ ಮುನ್ನ ಜಮೀರ್ ಅಹ್ಮದ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಸಮುದಾಯದ ಕಾರ್ಯಕರ್ತರಲ್ಲಿ ಅಸಮಾಧಾನ ಮತ್ತಷ್ಟು ಹೆಚ್ಚಾಗಲಿದೆ. ಅಗತ್ಯ ಬಿದ್ದರೆ ಸಾಮೂಹಿಕ ರಾಜೀನಾಮೆ ನೀಡಿ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ. ಕಾಂಗ್ರೆಸ್ ಪಕ್ಷ ನಮ್ಮ ಭಾವನೆಗಳಿಗೆ ಬೆಲೆ ಕೊಡದಿದ್ದರೆ ಮತದಾರರು ಕೂಡ ಸೂಕ್ತ ಉತ್ತರ ನೀಡುವರು" ಎಂದು ಎಚ್ಚರಿಸಿದರು.
ದರ್ಗಾ ಆವರಣದಲ್ಲಿ ನಡೆದ ಪ್ರಾರ್ಥನೆ ವೇಳೆ ಜಮೀರ್ ಅಹ್ಮದ್ ಅವರಿಗೆ ಉನ್ನತ ಹುದ್ದೆ ಸಿಗಲಿ ಎಂದು ವಿಶೇಷ ದುಆ ಮಾಡಲಾಯಿತು. ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್ ಸಮುದಾಯದ ಭಾವನೆಗಳನ್ನು ಗೌರವಿಸಿ ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ಮುಖಂಡರುಗಳಾದ ಅಸ್ಲಾಂ ಬಾಯ್, ಸೈಫುಲ್ಲಾ, ವಾಹಿದ್, ಪಿಂಜರ್ ನೂರ್, ಜಾಂಡ ಜಿಲಾನ್, ಮೊಷಿನ್,
ಕಲೀಮ್, ಮನ್ಸೂರ್, ಮುನೀರ್ ,ಸೀನಾ, ಶಿವಾಜಿ, ಬಟ್ಟಿ ಉಮೇಶ್ ಸಾದಿಕ್, ಸೇರಿದಂತೆ , ಅನೇಕ ಸಮುದಾಯದ ನಾಯಕರು ಹಾಗೂ
ಕಾಂಗ್ರೆಸ್ ಕಾರ್ಯಕರ್ತರು, ಉಪಸ್ಥಿತರಿದ್ದರು