ಬಳ್ಳಾರಿ, ಏ.21:.. ಆಂಧ್ರಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರ 76ನೇ ಜನ್ಮದಿನದ ಅಂಗವಾಗಿ ಬಳ್ಳಾರಿ ನಗರದ ಗಾಂಧಿನಗರದ ಎರಡನೇ ಕ್ರಾಸ್ನಲ್ಲಿರುವ ಶ್ರೀ ಸೂರ್ಯ ವೃದ್ಧಾಶ್ರಮದಲ್ಲಿ ಸರಳ ಹಾಗೂ ಹೃದಯಸ್ಪರ್ಶಿ ರೀತಿಯಲ್ಲಿ ಆಚರಣೆ ನಡೆಯಿತು.
ಶ್ರೀ ಶಿವಶಕ್ತಿ ಸೇವಾ ಟ್ರಸ್ಟ್ನ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೂರ್ಯ ನಿವಾಸ್ ವೃದ್ಧಾಶ್ರಮದಲ್ಲಿ ಅನಂತಪುರ ಜಿಲ್ಲಾ ಟಿಡಿಪಿ ಯುವ ಘಟಕದ ಕಾರ್ಯದರ್ಶಿ ವೈ.ಬಿ. ವಿಜಯ್ ಕುಮಾರ್ ಅವರ ನೇತೃತ್ವದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವೃದ್ಧಾಶ್ರಮದಲ್ಲಿರುವ ಹಿರಿಯರೊಂದಿಗೆ ಸಂಭ್ರಮ ಹಂಚಿಕೊಂಡು, ಅವರಿಗೆ ಆಹಾರ ಹಾಗೂ ಹಣ್ಣುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೈ.ಬಿ. ವಿಜಯ್ ಕುಮಾರ್, “ಚಂದ್ರಬಾಬು ನಾಯ್ಡು ಅವರು ಇನ್ನೂ ಅನೇಕ ಜನ್ಮದಿನಗಳನ್ನು ಆಚರಿಸಲಿ. ಅವರ ಜನ್ಮದಿನದಂದು ವೃದ್ಧಾಶ್ರಮಗಳಲ್ಲಿ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವುದು ನಮ್ಮ ಸಂಕಲ್ಪವಾಗಿದೆ. ಪ್ರತಿ ವರ್ಷವೂ ಅನ್ನದಾನ, ರಕ್ತದಾನ ಶಿಬಿರ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಸೂರ್ಯ ವೃದ್ಧಾಶ್ರಮ ಟ್ರಸ್ಟ್ ನಿರ್ದೇಶಕ ಶಿವಕುಮಾರ್ ಸೇರಿದಂತೆ ಲೋಕೇಶ್, ಅಖ್ತರ್, ಚಿಟ್ಟಿ, ಶಾರದ, ತಿರುಮಲ ಮತ್ತು ಇತರರು ಉಪಸ್ಥಿತರಿದ್ದು, ವೃದ್ಧರೊಂದಿಗೆ ಕೇಕ್ ಕತ್ತರಿಸಿ ಸಂತೋಷ ಹಂಚಿಕೊಂಡರು.