ಕೊಪ್ಪಳ ಮೇ 26: ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಮುಂಗಾರು ಬೀಜ ದಿನೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನಿಂದ ಮೇ 25 ರಂದು ಮುಂಗಾರು ಬೀಜ ದಿನೋತ್ಸವವನ್ನು ಆಚರಿಸಲಾಗುತ್ತಿದೆ. ಅದರಂತೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿಯೂ ಮುಂಗಾರು ಬೀಜ ದಿನೋತ್ಸವವನ್ನು ಆಚರಿಸಲಾಯಿತು. ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತಾರಣ ನಿರ್ದೇಶಕರಾದ ಡಾ. ಎ.ಆರ್. ಕುರುಬರ ಮತ್ತು ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ತಿಮ್ಮಣ್ಣ ಚವಡಿ ಹಾಗೂ ಕೊಪ್ಪಳ ಕೃಷಿವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಬದರಿ ಪ್ರಸಾದ ಪಿ.ಆರ್. ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ವ್ಯವಸ್ಥಾಪನಾ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ತಿಮ್ಮಣ್ಣ ಚವಡಿ ಅವರು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಈ ಭಾಗದ ರೈತರಿಗೆ ಉತ್ತಮ ಬೀಜಗಳನ್ನು ಒದಗಿಸುವ ಸಲುವಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದ ವಿಜ್ಞಾನಿ ಮತ್ತು ವಿಸ್ತರಣಾ ಮುಂದಾಳುಗಳೊಂದಿಗೆ ಚರ್ಚಿಸಿ ಉತ್ತಮ ಗುಣಮಟ್ಟದ ವಿವಿಧ ಬೆಳೆಗಳ ಪ್ರಮಾಣಿತ ಸಂಕರಣ ತಳಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕೊಪ್ಪಳ ಕೃಷಿವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಬದರಿ ಪ್ರಸಾದ ಪಿ.ಆರ್. ಅವರು ಮಾತನಾಡಿ, ಈ ಭಾಗದ ರೈತರಿಗೆ ಉತ್ತಮ ತಳಿ ಮತ್ತು ಸಂಕರಣ ತಳಿಗಳನ್ನು ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ರೈತರು ತಳಿಗಳನ್ನು ಆಯ್ಕೆ ಮಾಡಿ ವೈಜ್ಞಾನಿಕವಾಗಿ ಬಿತ್ತನೆ ಮಾಡಿ ನಿರ್ವಹಣೆ ಮಾಡಿದದಲ್ಲಿ ಉತ್ತಮ ಫಸಲು ಪಡೆಯಬಹುದೆಂದು ತಿಳಿಸಿದರು.
ಗುಳದಳ್ಳಿ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಕರು ಹಾಗೂ ಬೀಜ ವಿಜ್ಞಾನಿಯಾದ ಡಾ. ಹನುಮಂತಪ್ಪ ದಾಸರಹಳ್ಳಿ ಅವರು ಮಾತನಾಡುತ್ತಾ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನಲ್ಲಿ ಲಭ್ಯವಿರುವ ವಿವಿಧ ಬೆಳೆಗಳ ತಳಿ ಮತ್ತು ಸಂಕರಣ ತಳಿಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ರೈತರು ಕಡ್ಡಾಯವಾಗಿ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದಲ್ಲಿ ಉತ್ತಮ ಮೊಳಕೆ ಒಡೆದು ಮಣ್ಣಿನಲ್ಲಿರುವ ರೋಗಾಣುಗಳಿಂದ ಬರುವ ರೋಗ ನಿರೋಧಕ ಶಕ್ತಿಯನ್ನು ಮತ್ತು ಬರನಿರೋಧಕ ಶಕ್ತಿಯನ್ನು ಪಡೆಯುವುದಲ್ಲದೆ ಇಳುವರಿಯಲ್ಲಿ ಶೇಕಡಾ 15 ರಿಂದ 25 ರಷ್ಟು ಹೆಚ್ಚಾಗುತ್ತದೆ ಎಂದು ಮಾಹಿತಿ ನೀಡಿದರು.
ಇದೆ ಸಂದರ್ಭದಲ್ಲಿ ಸಾಂಕೇತಿಕವಾಗಿ ಐದಾರು ರೈತರಿಗೆ ವಿವಿಧ ಬೆಳೆಗಳ ಬೀಜಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕುಕನೂರು ತಾಲೂಕಿನ ಕೃಷಿಕ ಸಮಾಜದ ನಿರ್ದೇಶಕರಾದ ಪ್ರಕಾಶ್ ಮೇಟಿ, ಪ್ರಗತಿಪರ ರೈತರಾದ ಮುದುಕಪ್ಪ ದೇವರ, ಜೀವಂತ ಗೌಡ, ಗವಿಸಿದ್ದಪ್ಪ, ಶರಣೆಗೌಡ ಹಾಗೂ ಹನುಮಂತಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ರೈತರು ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳ (ಡಾ. ಬದರಿ ಪ್ರಸಾದ ಪಿ.ಆರ್., ವಿಸ್ತರಣಾ ಮುಂದಾಳು, ಮೊ.ನಂ. 9900145705)ನ್ನು ಸಂಪರ್ಕಿಸಬಹುದು.
