ಬಾಗಲಕೋಟೆ, ಜೂನ್ ೦೧ : ಜಿಲ್ಲೆಯಾದ್ಯಂತ ಪ್ರಾರಂಭವಾದ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಾರಂಭದ ಹಿನ್ನಲೆಯಲ್ಲಿ ಸೋಮವಾರ ತಿಮ್ಮಾಪೂರ ಹಾಗೂ ಬೇವಿನಮಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನಕ್ಕೆ ಬಾಗಲಕೋಟೆ ಶಾಸಕ ಉಮೇಶ ಮೇಟಿ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿ, ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು ಶಿಕ್ಷಣವು ಪ್ರತಿಯೊಬ್ಬರ ಜೀವನದ ಭದ್ರ ಅಡಿಪಾಯವಾಗಿದ್ದು, ಶಿಕ್ಷಣವೇ ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಪ್ರಮುಖ ಸಾಧನವಾಗಿದೆ. ವಿದ್ಯಾರ್ಥಿಗಳು ಪಠ್ಯಾಬ್ಯಾಸದ ಜೊತೆಗೆ ಉತ್ತಮ ಸಂಸ್ಕಾರ, ಶಿಸ್ತು, ಸಮಯಪಾಲನೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸರಕಾರ ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದು, ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ. ಪಾಲಕರು ತಮ್ಮ ಮಕ್ಕಳನ್ನು ನಿಯಮಿತವಾಗಿ ಶಾಲೆಗೆ ಕಳುಹಿಸಿ ಅವರ ಶಿಕ್ಷಣದ ಬಗ್ಗೆ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಹಕಾರ ನೀಡಬೇಕು. ಬೇವಿನಮಟ್ಟಿ ಶಾಲೆಗೆ ಶಾಸಕರ ಅನುದಾನದಲಲಿ ಹೆಚ್ಚುವರಿಯಾಗಿ ೨ ಕೊಠಡಿ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು. ಇದರಿಂದ ಕೊಠಡಿ ವಿದ್ಯಾರ್ಥಿಗಳಿಗೆ ಅನುಕೂಲಕರ ಕಲಿಕಾ ವಾತಾವರಣ ದೊರೆಯಲಿದೆ ಎಂದರು. ಈ ಸಂದರ್ಭದಲ್ಲಿ ಸ್ಮಾರ್ಟ ಕ್ಲಾಸ್ಗೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ ಶಾಲೆಗಳು ಕೇವಲ ಪಾಠ ಪುಸ್ತಕಗಳ ಜ್ಞಾನವಲ್ಲ. ಜೀವನದ ಮೌಲ್ಯಗಳನ್ನು ಕಲಿಸುತ್ತವೆ. ಶಾಲೆಯ ಪರಿಸರ ಸರಳತೆ, ಸಹನೆ ಶಿಸ್ತನ್ನು ಬೆಳೆಸುತ್ತದೆ. ಸರ್ಕಾರಿ ಶಾಲೆಗಳು ದೇಶದ ಸಾಮಾನ್ಯ ಜನರ ಕನಸುಗಳಿಗೆ ಬುನಾದಿ ಹಾಕುತ್ತದೆ. ಸರಳ ಬದುಕು, ಉನ್ನತ ಚಿಂತನೆ ಇದರ ಮೊದಲ ಪಾಠ ಸರ್ಕಾರಿ ಶಾಲೆಯಲ್ಲಿ ಸಿಗುತ್ತದೆ ಎಂದು ಹೇಳಿದರು. ಬೇವಿನಮಟ್ಟಿ ಶಾಲೆಯ ಅಭಿವೃದ್ದಿ ಕಾರ್ಯಗಳಿಗಾಗಿ ವ್ಯಕ್ತಿಕವಾಗಿ ೧೦ ಸಾವಿರ ರೂ.ಗಳನ್ನು ಎಸ್.ಡಿ.ಎಂಸಿ ಖಾತೆಗೆ ಜಮೆ ಮಾಡುವುದಾಗಿ ತಿಳಿಸಿದರು.
ತಿಮ್ಮಾಪೂರ ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಪಿಕೆಪಿಎಸ್ ಅದ್ಯಕ್ಷ ಮುತ್ತಪ್ಪ ಹುಗ್ಗಿ, ಗ್ರಾ.ಪಂ ಸದಸ್ಯರಾದ ಸಂಗನಗೌಡ ಪಾಟೀಲ, ಗ್ರಾಮದ ಪ್ರಮುಖರಾದ ಮಲ್ಲಪ್ಪ ಹಂಚಿನಾಳ, ಗ್ಯಾನಪ್ಪ ತುಂಬರಮಟ್ಟಿ, ಎಸ್.ಡಿ.ಎಂಸಿ ಸದಸ್ಯ ಮಹಾದೇವಪ್ಪ ಕುಂಬಾರ ಇದ್ದರೆ, ಬೇವಿನಮಟ್ಟಿ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ಸಮನ್ವಯಾಧಿಕಾರಿ ಪ್ರಮೋದಿನಿ ಬಲೂಲವಾಡಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ, ಪ್ರೌಢಶಾಲಾ ವಿಭಾಗದ ಮುಖ್ಯೋಪಾದ್ಯಾಯ ಲಕ್ಷ್ಮೀದೇವಿ ಮುಂಡವಾಡಿ, ಪ್ರಾಥಮಿಕ ವಿಭಾಗದ ಮುಖ್ಯೋಪಾದ್ಯಾಯ ಎಂ.ಪಿ.ಕುದರಿ, ಬಿ.ಆರ್.ಸಿ ಸಿ.ವಾಯ್ ಸಂಗಮ, ದೈಹಿಕ ಶಿಕ್ಷಣ ಅಧಿಕಾರಿ ಆರ್.ಆರ್.ಪಾಟೀಲ ಸೇರಿದಂತೆ ಮುಖಂಡರಾದ ದ್ಯಾಮಣ್ಣ ಗಾಳಿ, ನಾಗರಾಜ ಹದ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಪೂರ್ವದಲ್ಲಿ ತಿಮ್ಮಾಪೂರ ಗ್ರಾಮದಲ್ಲಿ ಶಾಸಕ ಉಮೇಶ ಮೇಟಿ ಅವರು ಶೈಕ್ಷಣಿಕ ವರ್ಷದ ಮೊದಲ ದಿನ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿ, ಸಿಹಿ ವಿತರಿಸುವ ಮೂಲಕ ಮಕ್ಕಳಲ್ಲಿ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದರು. ಬೇವಿನಮಟ್ಟಿ ಗ್ರಾಮದಲ್ಲಿ ಶಾಲಾ ಪ್ರಾರಂಭೋತ್ಸವ ಸಂಭ್ರದ ಹಿನ್ನಲೆಯಲ್ಲಿ ತೆರೆದ ಬಂಡಿಯಲ್ಲಿ ಶಾಸಕರು ಹಾಗೂ ಇತರೆ ಗಣ್ಯಮಾನ್ಯರನ್ನು ಮೆರವಣಿಗೆ ಮೂಲಕ ಶಾಲೆಗೆ ಕರೆತಂದು ಆರತಿ ಮಾಡುವ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಛಾಯಾಚಿತ್ರ ಲಗತ್ತಿಸಿದೆ. ೧ ರಿಂದ ೬
