ಹಸಿರು ಕ್ರಾಂತಿ ವರದಿ ಬೆಂಗಳೂರು
ಕನ್ನಡ ಸಾಮ್ರಾಜ್ಯದ ಉದಯಕ್ಕೆ ಮೂಲ ಕಾರಣವಾದ ಮಯೂರನ ಆಡಳಿತ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಆಚರಣೆಯಾಗಬೇಕು, ಮಯೂರವರ್ಮನ ನಾಡಪ್ರೇಮ ಅಮರವಾಗಬೇಕು ಎಂದು ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು
ನಗರದ ಕುರುಬಳ್ಳಿಯ ಚಾಲುಕ್ಯ ಡಾ.ರಾಜಕುಮಾರ್ ಟ್ರಸ್ಟ್ ಸ್ಥಳದಲ್ಲಿ ಕನ್ನಡ ಮೊದಲು ಬಳಗದ ವತಿಯಿಂದ ನಡೆದ ಮಯೂರ ವರ್ಮನ ನೆನಪಿನ ಕನ್ನಡ ಸಾಮ್ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಯೂರವರ್ಮನ ಪ್ರತಿಮೆಗೆ ಕಿರೀಟಧಾರಣೆ ಮಾಡಿ ಮಾತನಾಡಿದ ಅವರು, ಕರ್ನಾಟಕದ ಇತಿಹಾಸ ವಿಶ್ವದ ಮಾನ್ಯತೆ ಪಡೆದು ಕನ್ನಡ ಭಾಷೆಗೆ ಶ್ರೀಮಂತಿಕೆ ತಂದಿದೆ. ವಿಶ್ವಮಟ್ಟದಲ್ಲಿ ಕನ್ನಡ ಸಾಮ್ರಾಜ್ಯೋತ್ಸವ ನಡೆಯುತ್ತಿರುವ ಈ ವೇಳೆ ಅತ್ಯಂತ ಮಹತ್ವದ ಸಂಗತಿ ಆಗಿದೆ ಎಂದರು.
ಕನ್ನಡ ಮೊದಲು ಬಳಗದ ಅಧ್ಯಕ್ಷ ಜ್ಞಾನೇಶ್ವರ ಮಧು ಮಾತನಾಡಿ, ಕನ್ನಡ ಸಾಮ್ರಾಜ್ಯ ಉದಯವಾಗಿ 1681 ವರ್ಷಗಳ ಇತಿಹಾಸ ನಮ್ಮಲ್ಲಿ ಕಂಡು ಬಂದಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಸ್ಪೇನ್, ಇಟಲಿ, ದುಬೈ ಸೇರಿದಂತೆ ಇಂದು ರಾಜ್ಯದ ಅನೇಕ ಕನ್ನಡಪರ ಮನಸುಗಳು ಕನ್ನಡ ಸಾಮ್ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಕನ್ನಡ ಭಾಷೆಯ ಬೆಳವಣಿಗೆಯ ಜೊತೆ, ಜೊತೆಗೆ ಮಯೂರವರ್ಮನ ನೆನಪು ಉಳಿಯುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಗೌರವ ಕಾರ್ಯದರ್ಶಿ ರಾಮಲಿಂಗಶೆಟ್ಟಿ ಶೆಟ್ಟಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡದ ಭಾಷೆ ಸದಾಕಾಲ ಜೀವಂತವಾಗಿರುತ್ತದೆ. ಕನ್ನಡ ಚಳುವಳಿಗೆ ನಾಡಿನ ಚಳುವಳಿಗಾರರು ಸಾಹಿತಿಗಳು ಸದಾ ಕಾಲ ಜಾಗೃತರಾಗಿ ಕನ್ನಡ ಭಾಷೆ ಉಳಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರ ಲಕ್ಷ್ಮೀ ನಾರಾಯಣ್, ಕುರುಬರಹಳ್ಳಿ ರಮೇಶ್, ಶಶಿಕುಮಾರ್, ಯಲ್ಲಪ್ಪ.ವೈ. ಕುಂಬಾರ, ಶ್ರೀರಾಜ್ , ಸಾರಿಕಾ, ವಾಣಿ, ಜಯರಾಮ್, ಪ್ರಭು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
