ಹನಗುಂದ,ಮೇ,೧೮ : ನರೇಗಾ ಯೋಜನೆ ಅಡಿಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಕೆಲಸ, ರಿಜಕ್ಟ್ ಪೇಮೆಂಟ್ ನೀಡುವುದು, ಜಾಬ್ ಕಾರ್ಡ್ ವಿತರಣೆ, ವೈದ್ಯಕೀಯ ವೆಚ್ಚ,ನಿರುದ್ಯೋಗ ಭತ್ತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಗುರುವಾರ ತಾಲೂಕ ಪಂಚಾಯತ ಕಾರ್ಯಾಲಯದ ಮುಂದೆ ಹುನಗುಂದ- ಇಳಕಲ್ಲ ಅವಳಿ ತಾಲೂಕಿನ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಬೃಹತ್ ಪ್ರತಿಭಟನೆ ನಡೆಸಿದರು.
ಸಂಘಟನೆ ಗ್ರಾಕೂಸಾ ಮುಖಂಡ ಮಹಾಂತೇಶ ಹೊಸಮನಿ ಮಾತನಾಡಿ ಹುನಗುಂದ ಇಳಕಲ್ಲ ಅವಳಿ ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಒಂದೆರಡು ಗ್ರಾಮಗಳ ಕಾರ್ಮಿಕರಿಗೆ ಕೆಲಸ ನೀಡಿದ್ದು ಬಿಟ್ಟರೇ ಬಹುತೇಕ ಗ್ರಾಮಗಳ ಕಾರ್ಮಿಕರಿಗೆ ಕಳೆದ ನಾಲ್ಕು ತಿಂಗಳಿಂದ ಕಾರ್ಮಿಕರಿಂದ ಕೆಲಸದ ಬೇಡಿಕೆ ಪತ್ರ ಪಡೆದರೂ ಕೂಡಾ ಪಿಡಿಓಗಳ ದಿವ್ಯ ನಿರ್ಲಕ್ಷ್ಯದಿಂದ ಇಲ್ಲಿವರೆಗೂ ಕೆಲಸವಿಲ್ಲದೆ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ. ಇನ್ನು ಹುನಗುಂದ ತಾಲೂಕಿನ ಹಿರೇಮಳಗಾವಿ, ಬಿಸಿಲದಿನ್ನಿ, ರಕ್ಕಸಗಿ, ಹಿರೇಬಾದವಾಡಗಿ, ಮೂಗನೂರ ಮತ್ತು ಇಳಕಲ್ಲ ತಾಲೂಕಿನ ನಂದವಾಡಗಿ, ಕರಡಿ, ಬೂದಿಹಾಳ ಎಸ್. ಕೆ, ಜಂಬಲದಿನ್ನಿ, ಹಿರೇಶಿಂಗನಗುತ್ತಿ, ಕೆಲೂರು ಗ್ರಾ.ಪಂಗಳಲ್ಲಿ ಜಾಬ್ ಕಾರ್ಡ್ ನೀಡುವಂತೆ ಅರ್ಜಿ ಸಲ್ಲಿಸಿದರೂ ಕೂಡಾ ಇಲ್ಲಿವರೆಗೆ ನೀಡುತ್ತಿಲ್ಲ. ಕರಡಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಎನ್ಎಂಆರ್ ಸಂಪೂರ್ಣ ಜೀರೋ ಮಾಡಿದ್ದು ಅದರ ನಷ್ಟ ಪರಿಹಾರವನ್ನು ನೀಡಬೇಕೆಂದು ಅವರು ಒತ್ತಾಯಿಸಿದರು. ಬೂದಿಹಾಳ ಎಸ್ ಕೆ, ಹಿರೇಶಿಂಗನಗುತ್ತಿ ಮತ್ತು ಕೆಲೂರು ಗ್ರಾಮ ಪಂಚಾಯತಿಯಲ್ಲಿ ಕಾರ್ಮಿಕರ ವೈದ್ಯಕೀಯ ವೆಚ್ಚವನ್ನು ನೀಡಿಲ್ಲ. ಜಂಬಲದಿನ್ನಿ ಗ್ರಾ. ಪಂಯಲ್ಲಿ ಪೇಮೆಂಟ್ ರಿಜೆಕ್ಟ್ ಮಾಡಿದ್ದು ಇಲ್ಲಿವರೆಗೂ ಪೇಮೆಂಟ್ ಮಾಡುತ್ತಿಲ್ಲ, ಧನ್ನೂರ, ಹಿರೇಮಳಗಾವಿ, ಹಿರೇಬಾದವಾಡಗಿ ಗ್ರಾ. ಪಂಯಲ್ಲಿ ಕಾರ್ಮಿಕರಿಂದ ಕೆಲಸದ ಅರ್ಜಿ ಪಡೆದು ಕೆಲಸ ನೀಡಲ್ಲದಿರುವದರಿಂದ ನಿರುದ್ಯೋಗ ಭತ್ತೆ ನೀಡಬೇಕೆಂದು ಅವಳಿ ತಾಲೂಕಿನ ಸಾವಿರಾರು ಕಾರ್ಮಿಕರು ಬೇಡಿಕೆ ಈಡೇರಿಸಲು ಪಟ್ಟು ಹಿಡಿದು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ಮುಂದುವರಿಸಿದಾಗ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ ಮತ್ತು ನರೇಗಾ ಯೋಜನಾಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಬೇಡಿಕೆಗಳನ್ನು ಇನ್ನು ಮೂರು ದಿನಗಳಲ್ಲಿ ಬಗೆಹರಿಸಲಾಗುವುದು. ಜಾಬ್ ಕಾರ್ಡ ಸಮಸ್ಯೆಯನ್ನು ಒಂದು ವಾರದಲ್ಲಿ ಸರಿಪಡಿಸಲಾಗುವುದೆಂದು ಭರವಸೆ ನೀಡಿದ ಬಳಿಕ ಕೂಲಿ ಕಾರ್ಮಿಕರು ಪ್ರತಿಭಟನೆಯನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ಗ್ರಾಕೂಸ್ ಮುಖಂಡರಾದ ರೇಣುಕಾ ತುಪ್ಪದ, ಶಾರದಾ ಪರನಗೌಡ್ರ, ಯಮನೂರು ಕಡಿವಾಲ, ದೇವಮ್ಮ ವಾಲಿಕಾರ, ಸರೋಜ ಭದ್ರಶೆಟ್ಟಿ, ಶಾಂತಾ ಅಂಗಡಿ, ಸೈರಾಬಾನು ಹಿರೇಮನಿ, ಅಮರೇಶ ಕುಂಬಾರ, ಬಸವರಾಜ ಸಜ್ಜನ, ರೇಣುಕಾ ಕುರಿ, ಸಾವಿತ್ರಿ ಕುರಿ, ಮಹಾದೇವಿ ಗೋತಗಿ, ಬಸಮ್ಮ ಮಲ್ಲನಗೌಡ್ರ ಕೋರಿದಂತೆ ಅನೇಕರು ಇದ್ದರು. ಬಾಕ್ಸ್; ಮೂರು ದಿನಗಳಲ್ಲಿ ಬೇಡಿಕೆ ಈಡೇರಿಸದಿದ್ದರೇ ಸಿ.ಎಸ್ ಗೆ ಪತ್ರ- ಕಳೆದ ನಾಲ್ಕು ತಿಂಗಳಿಂದ ಕೆಲಸ ನೀಡುತ್ತಿಲ್ಲ, ರಿಜಕ್ಟ್ ಪೇಮೆಂಟ್ ಮಾಡುತ್ತಿಲ್ಲ,ಜಾಬ್ ಕಾರ್ಡ್ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.ಅನೇಕ ಪಂಚಾಯತಿಗಳಲ್ಲಿ ವೈದ್ಯಕೀಯ ವೆಚ್ಚ ಮತ್ತು ನಿರುದ್ಯೋಗ ಭತ್ತೆ ಸಮಸ್ಯೆ ಬಗೆಹರಿಸುವಂತೆ ಸಾಕಷ್ಟು ದಿನಗಳಿಂದ ಅಧಿಕಾರಿಗಳಿಗೆ ತಿಳಿಸಿದರೂ ಕೂಡಾ ಬಗೆಹರಿಸದಿದ್ದಾಗ ಪ್ರತಿಭಟನೆ ಅನಿವಾರ್ಯವಾಗಿತ್ತು.ಈ ಎಲ್ಲ ಸಮಸ್ಯೆಗಳನ್ನು ಮೂರು ದಿನಗಳಲ್ಲಿ ಈಡೇರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅಷ್ಟರೊಳಗೆ ಸಮಸ್ಯೆ ಈಡೇರಿಸದಿದ್ದರೇ ಜಿಲ್ಲಾ ಪಂಚಾಯತಿ ಸಿ.ಎಸ್ ಗೆ ಪತ್ರ ಬರೆಯಲಾಗುವುದು. ಮಹಾಂತೇಶ ಹೊಸಮನಿ. ಗ್ರಾಕೂಸ್ ಮುಖಂಡರು.
