ರಾಮದುರ್ಗ,ಮೇ,೧೪: ತಾಲೂಕಿನ ಹಲಗತ್ತಿ ಗ್ರಾಮದ ಹೇಮ-ವೇಮ ಸೇವಾ ಸಮಿತಿಯ ನೇತೃತ್ವದಲ್ಲಿ ಮಹಾಸಾಧ್ವಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯೋತ್ಸವವನ್ನು ವಿವಿಧ ಕಲಾ ವಾದ್ಯಮೇಳಗಳು ಹಾಗೂ ಮಹಿಳೆಯರ ಕುಂಭಮೇಳದೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.
ಮಲ್ಲಮ್ಮನ ದೇವಸ್ಥಾನದಲ್ಲಿ ಎಲ್ಲ ಸಮಾಜದ ಭಕ್ತರು ಕೂಡಿಕೊಂಡು ಮಲ್ಲಮ್ಮನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಹೇಮರಡ್ಡಿ ಮಲ್ಲಮ್ಮನ ಭಾವಚಿತ್ರದೊಂದಿಗೆ ವಾದ್ಯಮೇಳ ಹಾಗೂ ಮಹಿಳೆಯರ ಕುಂಭದೊಂದಿಗೆ ಗ್ರಾಮದಲ್ಲಿ ಭವ್ಯ ಮೆರವಣೆಗೆ ನಡೆಸಲಾಯಿತು.
ರಕ್ತದಾನ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ:
ಜಯಂತಿಯ ಅಂಗವಾಗಿ ಗ್ರಾಮದ ಹೇಮ-ವೇಮ ಸೇವಾ ಸಮೀತಿಯಿಂದ ಸ್ವಯಂ ಪ್ರೇರಿತ ರಕ್ತ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಗ್ರಾಮದ ಬೀರದೇವರ ಭವನದಲ್ಲಿ ಏರ್ಪಡಿಸಲಾಗಿತ್ತು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಹಿರಿಯ ಸಾಹಿತಿ ಪ್ರೊ| ವೆಂಕಟೇಶ್ ಹುಣಸಿಕಟ್ಟಿ ಅವರು ಮಾತನಾಡಿ, ಮಹಾಸಾದ್ವಿ ಮಲ್ಲಮ್ಮ ಸದಾಚಾರ ಸದ್ವಿಚಾರಗಳುಳ್ಳ ಗ್ರಹಣಿಯಾಗಿ ಸ್ರ್ತೀ ಕುಲದ ಆದರ್ಶಕ್ಕೆ ಉದಾಹರಣೆಯಾಗಿದ್ದಾರೆ. ಲೌಕಿಕ ಸಾಧನೆಯೊಂದಿಗೆ ಪಾರಮಾರ್ಥಿಕ ಉನ್ನತಿ ಸಾಧಿಸಿದ ಹೇಮರಡ್ಡಿ ಮಲ್ಲಮ್ಮನ ಬದುಕು ಸದಾ ಕಾಲ ಸ್ಮರಣೀಯವಾದದ್ದು. ತ್ಯಾಗ ಸೇವೆ ಪರೋಪಕಾರಗಳ ತ್ರಿವೇಣಿ ಸಂಗಮದಂತಿರುವ ಮಲ್ಲಮ್ಮ ತಾಯಿಯ ಜೀವನ ಸಂದೇಶಗಳನ್ನು ಇಂದಿನ ಸಮಾಜಕ್ಕೆ ಅಗತ್ಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಯಿತು. ಅಲ್ಲದೇ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಅನೇಕ ತಾಯಂದಿರಿಗೆ ಸನ್ಮಾನಿಸಲಾಯಿತು.
ಹೇಮ-ವೇಮ ಸಮಿತಿಯ ಅಧ್ಯಕ್ಷ ಪ್ರವೀಣ ನಂದೆಪ್ಪನವರ ಅಧ್ಯಕ್ಷತೆ ವಹಿಸಿದ್ದರು. ರಡ್ಡಿ ಸಮಾಜದ ಮುಖಂಡರಾದ ಬಾಲಪ್ಪ ರುದ್ರಗೌಡ. ರವಿ ಗಲಿಬಿ. ಶ್ರೀನಿವಾಸ್ ದ್ಯಾವಣ್ಣವರ, ಬಸು ನಡಮನಿ. ಗೋವಿಂದಪ್ಪ ಅಂಬಲಜೇರಿ, ಫಕೀರಗೌಡ ರುದ್ರಗೌಡ. ಬಿ.ಎಸ್. ಮುಳ್ಳೂರ, ಗ್ರಾ.ಪಂ ಸದಸ್ಯ ಮಂಜು ಮುಧೋಳ, ರಂಗಪ್ಪ ನಡಮನಿ, ಲಕ್ಷ್ಮಣ ಹೂಗಾರ, ಹನುಮಂತ ಹೂಗಾರ, ಹನುಮಂತ ಹೊಸಕೋಟಿ, ಬಸು ಕರಗನ್ನವರ, ಕೃಷ್ಣಪ್ಪ ನಾಯಕ ಸೇರಿದಂತೆ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು. ಬಸು ನಾಗಮ್ಮನವರ ಸ್ವಾಗತಿಸಿದರು. ಸರೋಜಾ ಆಲಗುಂಡಿ ನಿರೂಪಿಸಿದರು. ಗೀತಾ ನಂದೆಪ್ಪನವರ ವಂದಿಸಿದರು.
