ಬಳ್ಳಾರಿ,ಜೂ.04:
ಗ್ರಂಥಾಲಯಗಳು ಅರಿವಿನ ದೇಗುಲಗಳಾಗಿದ್ದು ಅವು ಜ್ಞಾನದ ಕಣಜಗಳಾಗಿವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಮೈಸೂರು ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರ, ಬಳ್ಳಾರಿ ಜಿಲ್ಲಾ ಜಾಗೃತಿ ಸಮಿತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ಮಂಗಳವಾರ ಕಪ್ಪಗಲ್ ರಸ್ತೆಯ ಪ್ರಣವ ಸ್ವರೂಪ ನಿಲಯದಲ್ಲಿ ‘ಮನೆಗೊಂದು ಗ್ರಂಥಾಲಯ ಅನುಷ್ಠಾನ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಕ್ತಿಯ ಸಂಕೇತವಾಗಿ ಮನೆಯಲ್ಲಿ ಪೂಜಾಗೃಹ ಇರುವಂತೆ, ಜ್ಞಾನದ ಸಂಕೇತವಾಗಿ ಚಿಕ್ಕದೊಂದು ಗ್ರಂಥಾಲಯ ಪ್ರತಿ ಮನೆಯಲ್ಲಿ ಅತ್ಯಗತ್ಯವಾಗಿ ಇರಬೇಕು. ಬದುಕನ್ನು ಸುಂದರವಾಗಿ ಕಲಿಸುವ ಶಕ್ತಿ ಪುಸ್ತಕಗಳಿಗಿದೆ. ಹಾಗಾಗಿ ಪುಸ್ತಕಗಳನ್ನು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಹಸ್ತದೊಳಗಿರುವ ಮೊಬೈಲ್ ಬಿಡಿಸಿ ಮಕ್ಕಳ ಮಸ್ತಕಗಳಿಗೆ ಪುಸ್ತಕ ನೀಡುವಂತಾಗಬೇಕು. ಮನೆ-ಮನೆಯಲಿ ಪುಸ್ತಕ ಪ್ರೀತಿ ಬೆಳಗುವ ಮೂಲಕ ಮಕ್ಕಳಿಗೆ ಬದುಕುವ ಕಲೆಯನ್ನು ಕಲಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಅವರು ಮಾತನಾಡಿ, ಪುಸ್ತಕಗಳು ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದ್ದು, ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ವೇಳೆ ಮನೆಗೊಂದು ಗ್ರಂಥಾಲಯ ಅನುಷ್ಠಾನದ ಕರಪತ್ರ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ, ಪ್ರಾಧ್ಯಾಪಕ ತಿಪ್ಪೇರುದ್ರ ಸಂಡೂರು, ಬಳ್ಳಾರಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಚಾಂದ್ ಪಾಷ, ಮಸೂತಿ ನಾಗರಾಜ, ಚಾಂದ್ ಬಾಷ ತೆಕ್ಕಲಕೋಟೆ, ಸಂಡೂರು ಕಸಾಪ ಅಧ್ಯಕ್ಷ ನಾಗನಗೌಡ, ಬಳ್ಳಾರಿ ತಾಲ್ಲೂಕು ಕಸಾಪ ಅಧ್ಯಕ್ಷ ನಾಗಿರೆಡ್ಡಿ, ರುದ್ರಮೂರ್ತಿ ಸ್ವಾಮಿ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
