ಗದಗ, ಮೇ. ೫ : ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ ಕವಿತೆಗಳು ಹೊರಹೊಮ್ಮಬೇಕು. ವಾಸ್ತವಿಕ ಬದುಕಿಗೆ ಹತ್ತಿರವಾಗುವ ಕವಿತೆಗಳು ಜನಮನ ಸೆಳೆಯಬಲ್ಲವು ಅಂತಹ ಕವಿತೆಗಳ ರಚನೆಗೆ ಯುವ ಬರಹಗಾರರು ಮುಂದಾಗಬೇಕೆಂದು ಸಾಹಿತಿ ಶ್ರೀಮತಿ ಶಿವಶಾಂತಾ ಬಿಸನಳ್ಳಿ ಹೇಳಿದರು.
ಗದುಗಿನ ಲಾಯನ್ಸ್ ಭವನದಲ್ಲಿ ಕರ್ನಾಟಕ ರಾಜ್ಯ ಲೇಖಕಿಯರ ಸಂಘ ಗದಗ ಜಿಲ್ಲಾ ಘಟಕ ಹಾಗೂ ಶರಣೆ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆ ಗದಗ ಜಿಲ್ಲಾ ಘಟಕ ಧಾರವಾಡದ ಚೇತನ ಫೌಂಡೇಶನ್, ಬೆಂಗಳೂರಿನ ಗಂಧದ ಗುಡಿ ಕನ್ನಡ ಸಂಘ ಎರ್ಪಡಿಸಿದ್ದ ರಾಜ್ಯ ಮಟ್ಟದ ಕನ್ನಡ ನುಡಿ ಸಡಗರ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬರಹಗಾರರು ಅಧ್ಯಯನಶೀಲರಾಗಬೇಕು, ಇತರ ಬರಹಗಾರರ ಸಾಹಿತ್ಯವನ್ನು ಓದುವ ಒಳ್ಳೆಯದನ್ನು ಸ್ವೀಕರಿಸುವ ಹಾಗೂ ಅಗತ್ಯವಿದ್ದಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ಉತ್ತಮ ಸಾಹಿತ್ಯ ರಚನೆಗೆ ಪ್ರೇರಣೆ ನೀಡಬೇಕು ಅಂದಾಗ ಸಾಹಿತ್ಯ ಸಂವರ್ಧಿಸುವದು, ಸ್ನೇಹ ಬಲಗೊಳ್ಳುವದು ಎಂದರು.
ಇಂದಿಲ್ಲಿ ಕವನ ವಾಚಿಸಿದ ಕವಿ, ಕವಯಿತ್ರಿಯರು ಒಳ್ಳೆಯ ಪ್ರಬುದ್ಧವಾದ ಕವನಗಳನ್ನು ರಚಿಸಿದ್ದಾರೆ, ಅವರ ಈ ಸಾಹಿತ್ಯ ಕೃಷಿ ಹೀಗೆ ಮುಂದುವರೆಯಲಿ ಬರಲಿರುವ ದಿನಗಳಲ್ಲಿ ಇವರ ಸಾಹಿತ್ಯಿಕ ಕೃತಿಗಳು ಕನ್ನಡ ಸಾಹಿತ್ಯ ಭಂಡಾರವನ್ನು ಸೇರಿಕೊಳ್ಳುವಂತಾಗಲಿ ಎಂದು ಶುಭ ಕೋರಿದರು.
ಆಶಯ ನುಡಿಗಳನ್ನಾಡಿದ ಪ್ರೊ.ಪ್ರಕಾಶ ಸುಣಗಾರ ಕಾವ್ಯ ಸಾಹಿತ್ಯದ ಜೀವಾಳ, ರವಿ ಕಾಣದ್ದನ್ನು ಕವಿ ಕಾಣುವನು ಎಂಬಂತೆ ಶಬ್ದ, ನುಡಿಗಳು ಅರ್ಥಪೂರ್ಣ ಎನ್ನಿಸುವಂತೆ ಕಾವ್ಯ ರಚನೆಗೆ ಯುವ ಬರಹಗಾರರು ಮುಂದಾಗಲಿ ಜೊತೆಗೆ ಓದುಗರಿಗೆ, ಜನಸಾಮಾನ್ಯರಿಗೂ ಅರ್ಥವಾಗುವ ಹಾಗೆ ಸರಳ ಭಾಷೆಯ ಬಳಕೆಯಾಗಲಿ ಎಂದರು. ಸಮ್ಮೇಳನದ ಸರ್ವಾಧ್ಯಕ್ಷೆ ಶ್ರೀಮತಿ ರತ್ನಾ ಬದಿ ಸಂದರ್ಭೋಚಿತವಾಗಿ ಮಾತನಾಡಿದರು.
ಅತಿಥಿಗಳಾಗಿ ಅತಿಥಿಗಳಾಗಿ ಸಾಹಿತಿ ಶ್ರೀಮತಿ ಪರ್ವಿನ್ಭಾನು ಬುಳ್ಳಣ್ಣವರ, ರಾಜೇಶ್ವರಿ ಹಿರೇಮಠ, ಮಂಜುನಾಥ ಭೀಮಕ್ಕಣ್ಣವರ, ಎಲ್.ಐ.ಲಕ್ಕಮ್ಮನವರ, ಸಾಹಿತಿ ಶಿವಲಿಂಗಪ್ಪ ಅಣ್ಣಿಗೇರಿ, ಶರಣಪ್ಪ ಹೊಸಂಗಡಿ ಆಗಮಿಸಿದ್ದರು.
ಕವಿಗೋಷ್ಠಿಯಲ್ಲಿ ಬಸವಣ್ಣೆವ್ವ ಹರ್ತಿ, ಜಿ.ಎನ್.ಪಾಟೀಲ, ನೇತ್ರಾ ಕುರಬರ, ಬೂದೇಶ ಮಜ್ಜಿಗುಡ್ಡ, ಸೌಜನ್ಯ ಪಾಟೀಲ, ಭಾಗ್ಯಶ್ರೀ ಹುರಕಡ್ಲಿ, ಶಿಲ್ಪಾ ಮಿಣಜಗಿ, ಕಸ್ತೂರಿ ಕಡಗದ, ರೇಖಾ ನಾಲ್ವಾಡ, ಮೇಘಾ ಬೆಳದಡಿ, ವಿಜಯಲಕ್ಷ್ಮೀ ಬಂಡಿವಾಡ, ಶಶಿಕಲಾ ಕಮತರ, ಜೆ.ಚಂದ್ರಶೇಖರ ಸೇರಿದಂತೆ ರಾಜ್ಯದ ವಿವಿದೆಡೆಯಿಂದ ಆಗಮಿಸಿದ ಕವಿಗಳು ನಾಡು, ನುಡಿ, ದೇಶಾಭಿಮಾನ, ಅತ್ತೆ-ಸೊಸೆ, ಸಮಯದ ಮಹತ್ವ, ಹೆಣ್ಣು, ಬಾಲ್ಯವಿವಾಹ, ಪರಿಸರ ಕುರಿತಾಗಿ ಕವನ ವಾಚಿಸಿದರು. ಚೇತನಾ ಫೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ ಸ್ವಾಗತಿಸಿದರು, ಡಾ.ಜೆ.ಪ್ರೇಮಾ ನಿರೂಪಿಸಿದರು ಸುಜಾತಾ ಪಾಟೀಲ ವಂದಿಸಿದರು.
ಕಾರ್ಯಕ್ರಮದಲ್ಲಿ ದೀಪ್ತಿ ಪಾಠಕ, ಪುಷ್ಪಲತಾ ಬಸವರಾಜ ಬಳ್ಳಾರಿ, ಚಂಪಾ ಪಾಟೀಲ, ಸುಮತಿ ಮುರುಗೇಶ ಗದಗಿನಮಠ, ಉಡಚಮ್ಮ ಮುದಿಯಪ್ಪ ವಾಲ್ಮೀಕಿ, ಪ್ರೊ.ಸಿದ್ದಲಿಂಗೇಶ ಸಜ್ಜನಶೆಟ್ಟರ, ನಿರ್ಮಲಾ ಚಿತ್ತಾಮೂರ, ಶಕುಂತಲಾ ಬಂಡಿ, ರೇಖಾ ರೊಟ್ಟಿ, ಚಂದ್ರಕಲಾ ಸ್ಥಾವರಮಠ, ವಿಜಯಲಕ್ಷ್ಮೀ ಹಳ್ಳಿ, ಸಂಧ್ಯಾ ಕೋಟಿ, ಸುಶೀಲಾ ಕೋಟಿ, ವೀಣಾ ಕಾವೇರಿ, ಮೀನಾಕ್ಷಿ ಕೊರವನವರ, ಕಾವ್ಯಾ ದಂಡಿನ ಸೇರಿದಂತೆ ರಾಜ್ಯದ ವಿವಿದ ಜಿಲ್ಲೆಗಳ ಸಾಹಿತಿಗಳು, ಗಣ್ಯರು ಪಾಲ್ಗೋಂಡಿದ್ದರು.
