ಬಳ್ಳಾರಿ,ಜೂ.11 ನಗರದ ಹವಂಬಾವಿ ರಸ್ತೆಯಲ್ಲಿರುವ ಗ್ಲಾಸ್ ಹೌಸ್ ನಲ್ಲಿ ಜರುಗಿದ ವಿಶ್ವ ಭಾರತಿ ಕಲಾನಿಕೇತನ ಹಾಗೂ ಶಿಕ್ಷಣ ಸಂಸ್ಥೆಯ ವತಿಯಿಂದ “ನಾರಿ ಜೀವನ್” ಸೀಸನ್-೩ ಉಚಿತ ತರಬೇತಿ ಶಿಬಿರಕ್ಕೆ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹಾಗೂ ಪತ್ನಿ ಗಾಲಿ ಲಕ್ಷ್ಮಿ ಅರುಣ ಅವರು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ ನೇತೃತ್ವದ ಕೇಂದ್ರ ಸರ್ಕಾರದ ೧೨ ವರ್ಷಗಳ ಯಶಸ್ವಿ ಆಡಳಿತ ಹಾಗೂ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಜನರಿಂದ ಚುನಾಯಿತರಾಗಿ ಅತ್ಯಂತ ದೀರ್ಘಾವಧಿಗೆ ಪ್ರಧಾನಮಂತ್ರಿಯಾಗಿ ಹೊಸ ದಾಖಲೆ ನಿರ್ಮಿಸಿರುವ ನರೇಂದ್ರ ಮೋದಿ ಜೀ ಅವರಿಗೆ ಅಭಿನಂದನೆ ಸಲ್ಲಿಸಿದರು.
ಹಾಗೂ ಮುಂಜಾನೆ ಗ್ರಾಮ ದೇವತೆ ಶ್ರೀ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಮೋದಿಜಿಯವರ ಪ್ರತಿಯೊಂದು ಕಾರ್ಯವು ಯಶಸ್ವಿಯಾಗಲಿ ಅವರು ಉತ್ತಮ ಆರೋಗ್ಯದ ಆಯುಷ್ಯ ಹಾಗೂ ಇನ್ನಷ್ಟು ಶಕ್ತಿಯಿಂದ ದೇಶ ಸೇವೆಯನ್ನು ಮುಂದುವರಿಸಲಿ ಎಂದು ಶ್ರೀಮತಿ ಗಾಲಿ ಲಕ್ಷ್ಮಿ ಅರುಣ ಜನಾರ್ಧನ ರೆಡ್ಡಿಯವರು ಪೂಜೆ ಸಲ್ಲಿಸಿದರು.
ಮೋದಿಜಿಯವರ “ನಾರಿ ಶಕ್ತಿ ದೇಶದ ಶಕ್ತಿ” ಎಂಬ ಆಶಾಯದಂತೆ ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬಿ ಸಮಾಜ ನಿರ್ಮಾಣದ ಉದ್ದೇಶದಿಂದ ಆಯೋಜಿಸಲಾದ ಈ ಶಿಬಿರದಲ್ಲಿ ಮಹಿಳೆಯರಿಗೆ ಸ್ವ-ಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಆರ್ಥಿಕ ಸ್ವಾವಲಂಬನೆಗೆ ಅಗತ್ಯವಾದ ವಿವಿಧ ತರಬೇತಿಗಳನ್ನು ನೀಡಲಾಗುತ್ತದೆ.
“ನಾರಿ ಜೀವನ” ಕಾರ್ಯಕ್ರಮದ ಮೂಲಕ ಮಹಿಳೆಯರು ಆತ್ಮವಿಶ್ವಾಸದಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೇರಣೆ ಮತ್ತು ಮಾರ್ಗದರ್ಶನ ದೊರೆಯಲಿದ್ದು, ಮಹಿಳಾ ಸಬಲೀಕರಣದ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಇದೇ ಸಂದರ್ಭದಲ್ಲಿ ಕರ್ನಾಟಕದ ವೇಗದ ಮೆಹಂದಿ ಕಲೆಗಾರರಾದ ಮೆಹಂದಿ ನರೇಶ್ ಹಾಗೂ ನೂರಾರು ಮಹಿಳೆಯರು, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.