ಅಥಣಿ : "ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಅನನ್ಯವಾದುದು. ಶ್ರಮಿಕ ವರ್ಗದ ಕಲ್ಯಾಣಕ್ಕಾಗಿ ಮತ್ತು ಅವರ ಹಿತರಕ್ಷಣೆಗಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರ ಸದುಪಯೋಗವನ್ನು ಪ್ರತಿಯೊಬ್ಬ ಕಾರ್ಮಿಕರು ಪಡೆದುಕೊಳ್ಳಬೇಕು" ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಹೇಳಿದರು.
ನಗರದ ಶಿವಯೋಗಿ ವೃತ್ತದಲ್ಲಿ ಮೇ 1ರ ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ತಾಲೂಕು ಕಾರ್ಮಿಕ ಇಲಾಖೆ ಹಾಗೂ ಅಥಣಿ ತಾಲೂಕಾ ಅಸಂಘಟಿತ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸಮಾಜದ ಬೆನ್ನೆಲುಬಾಗಿರುವ ಕಾರ್ಮಿಕರು ಗೌರವಯುತ ಜೀವನ ನಡೆಸಲು ಪೂರಕವಾದ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಮೇ ಒಂದರಂದು ಪ್ರತಿವರ್ಷ ಕಾರ್ಮಿಕರ ಬದುಕಿನ ಬಗ್ಗೆ ಅವಲೋಕನ ಮಾಡುವುದರ ಜೊತೆಗೆ ಅವರ ಬದುಕಿನ ಕಷ್ಟ ಪರಿಹಾರ ಮಾಡಲು ಅವಶ್ಯಕ ಕ್ರಮ ಕೈಗೊಳ್ಳಲು ಪೂರಕವಾಗಿದೆ. ಹಾಗೆಯೇ ಕಾರ್ಮಿಕರ ಬದುಕಿನಲ್ಲಿ ಚೈತನ್ಯ, ನೀಡುವುದಾಗಿದೆ. ಇಲಾಖೆ ಕಾರ್ಮಿಕರ ಬದುಕಿಗೆ ಆಧಾರ್ ಸ್ಥoಭವಾಗಿ ಅವರ ಬದುಕಿಗೆ ಬೆಳಕು ತರುವುದಾಗಿದೆ.ಕಾರ್ಮಿಕ ಸಚಿವರಾದ ಸಂತೋಷ ಲಾಡ ಅವರು ಕಾರ್ಮಿಕ ಖಾತೆಯ ಮಂತ್ರಿಗಳಾಗಿ ತುಂಬಾ ಉತ್ತಮ ಕಾರ್ಯ ನಿರ್ವಹಣೆ ಮಾಡಿದ್ದಾರೆ.ಲಾಡ್ ಅವರು ಕಾರ್ಮಿಕರ ಬದುಕಿಗೆ ಬೆಳಕು ನೀಡಿದ ವ್ಯಕ್ತಿ ಎಂದು ಶ್ಲಾಘಿಸಿದರು. ಜೊತೆಗೆ ಕಾರ್ಮಿಕರು ಕಾಯಕದಲ್ಲಿ ಸಂತೋಷ ಕಂಡವರು. ಜನತೆ ಇಂದು ಪ್ರತಿಯೊಬ್ಬ ಸುಖವಾಗಿ ಇರಬೇಕಾದರೆ ಅದರ ಹಿಂದೆ ಕಾರ್ಮಿಕರ ಶ್ರಮ ತುಂಬಾ ಇದೆ. ಕಾರ್ಮಿಕರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಅವರು ಕಾರ್ಮಿಕರಾಗಿ ಮುಂದುವರಿಯದಂತೆ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕಾರ್ಯ ನಮ್ಮ ಸರಕಾರ ಮಾಡುತ್ತಿದೆ. ಹೀಗಾಗಿ ಕಾರ್ಮಿಕರ ಮಕ್ಕಳಿಗೆ 36 ಕೋಟಿ ವೆಚ್ಚದಲ್ಲಿ ವಸತಿ ಶಾಲೆ ನಿರ್ಮಾಣ ಮಾಡುತ್ತಿದ್ದೇವೆ. ನಾವು ಇದೆ ವರ್ಷ ತಮ್ಮ ಸಂಘಟನೆಗೆ ಒಂದು ಸ್ಥಳ ಹಾಗೂ ಶಾಸಕರ ನಿಧಿಯಿಂದ 10ಲಕ್ಷ ಅನುದಾನ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.
ಪ್ರತಿಭಾ ಪುರಸ್ಕಾರ: ಇದೇ ಸಂದರ್ಭದಲ್ಲಿ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಾಧನೆಗಾಗಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಗುತ್ತಿಗೆದಾರ ರಾಜು ಅಲಬಾಳ ಪ್ರತಿಭಾವಂತ ಮಕ್ಕಳಿಗೆ ಸೈಕಲ್ ನೀಡಿ ಪ್ರೋತ್ಸಾಹ ನೀಡಿದರು.
ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರಾದ ಭುವನೇಶ್ವರಿ ಢಾಲೆ ಮಾತನಾಡಿ ಕಾರ್ಮಿಕ ದಿನಾಚರಣೆ ಹಿನ್ನೆಲೆ ಹಾಗೂ ಮಹತ್ವ ವಿವರಿಸಿ ಮೊದಲುಕಾರ್ಮಿಕರು 14 ಗಂಟೆ ದುಡಿಯಬೇಕಾಗಿತ್ತು ಅದನ್ನು ಎಂಟು ಗಂಟೆಗೆ ಇಳಿಸಲಾಯಿತು.ಮಹಿಳಾ ಹೆರಿಗೆ ರಜೆ ಜೊತೆಗೆ ಸರಕಾರ ಕೂಡಾ ಹಲವಾರು ಯೋಜನೆ ಜಾರಿಗೆ ತಂದಿದೆ.ಶೈಕ್ಷಣಿಕವಾಗಿ ಕಾರ್ಮಿಕರ ಮಕ್ಕಳಿಗೆ ಸ್ಕಾಲರಶೀಪ ಸೇರಿದಂತೆ ಅಫಘಾತ ವಿಮೆ, ಆರೋಗ್ಯ ವಿಮೆ,ಮುಪ್ಪಿನಲ್ಲಿ ವೃದ್ಯಾಪ ವೇತನ ಸೇರಿದಂತೆ ಹಲವಾರು ಯೋಜನೆಗಳ ಲಾಭ ಪಡೆಯಬೇಕು ಎಂದು ಅಧಿಕಾರಿ ಢಾಲೆ ಅವರು ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಶೆಟ್ಟರ್ ಮಠದ ಶ್ರೀ ಮರುಳಸಿದ್ದ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಶ್ರಮಜೀವಿಗಳ ಬದುಕು ಹಸನಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಅಥಣಿ ನಗರಸಭೆ ಉಪಾಧ್ಯಕ್ಷರಾದ ಭುವನೇಶ್ವರಿ ಯಕ್ಕಂಚಿ ಮಾತನಾಡಿದರು. ಗುತ್ತಿಗೆದಾರ ರಾಜು ಅಲಬಾಳ, ಅಥಣಿ ತಾಲೂಕಾ ಅಸಂಘಟಿತ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸುರೇಶ್ ನಿಕ್ಕಂ,ಉಪಾಧ್ಯಕ್ಷ ಕೇದಾರಿ ಹಳದಮಳ, ಚಂದ್ರಶೇಖರ ಐಗಳಿ, ಸುರೇಶ ಮೊಪಗಾರ, ತಾಲೂಕು ಕಾರ್ಮಿಕ ಇಲಾಖೆಯ ಅಧಿಕಾರಿ ಭುವನೇಶ್ವರಿ ಢಾಲೆ, ಹಾಗೂ ತಾಲೂಕು ಕಾರ್ಮಿಕ ಸಂಘದ ಪದಾಧಿಕಾರಿಗಳು ಮತ್ತು ಕಾರ್ಮಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.