ಬಾಗಲಕೋಟ್: ಉತ್ತರ ಕರ್ನಾಟಕಕ್ಕೆ ಅಗತ್ಯ ರೈಲ್ವೆ ಸೌಲಭ್ಯ ಇಲ್ಲದಿರುವುದು ವಿಷಾದನೀಯ ಸಂಗತಿ ಎಂದು ಕರವೇ ಜಿಲ್ಲಾ ಅಧ್ಯಕ್ಷ ಮುತ್ತುರಾಜ್ ಅರವಿಂದ್ ಶೆಟ್ಟಿ ಬೇಸರ ವ್ಯಕ್ತ ಪಡಿಸಿದರು.
ನಗರದಲ್ಲಿ ಶನಿವಾರ ನಡೆದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಉತ್ತರ ಕರ್ನಾಟಕಕ್ಕೆ ಅಗತ್ಯ ರೈಲ್ವೆ ಮಾರ್ಗಗಳಿಲ್ಲದಿರುವುದು ಹಾಗೂ ಅವಶ್ಯಕ ರೈಲ್ವೆ ಸೌಲಭ್ಯಗಳು ಇಲ್ಲದಿರುವುದು ವಿಷಾದನೀಯ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ರೈಲು ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತುಬುದ್ದೀನ್ ಕಾಜಿಯವರ ನೇತೃತ್ವದ ರೈಲ್ವೆ ಹೋರಾಟಕ್ಕೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ನಂತರ ರೈಲ್ವೆ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಕುತ್ಬುದ್ದೀನ್ ಕಾಜಿ ಅವರು ಮಾತನಾಡಿ “ ಕಳೆದ ದಶಕಗಳಿಂದ ಕುಡಚಿ-ಬಾಗಲಕೋಟ ರೈಲ್ವೆ ಕಾಮಗಾರಿ ಪೂರ್ಣಗೊಳ್ಳದಿರುವುದು , ಬಾಗಲಕೋಟೆಯಿಂದ ಲೋಕಾಪೂರವರೆಗೆ ಪ್ಯಾಸೆಂಜರ್ ರೈಲು ಪ್ರಾರಂಭಿಸಿ, ಲೋಕಾಪುರ - ಧಾರವಾಡ ಹೊಸ ರೈಲು ಮಾರ್ಗ ಅನುಷ್ಠಾನಗೊಳಿಸಬೇಕು.
ನಮ್ಮ ಉತ್ತರ ಕರ್ನಾಟಕ ಭಾಗದ ಜನರು ಸಾವಿರಾರು ಸಂಖ್ಯೆಯಲ್ಲಿ ಗೋವಾ ರಾಜ್ಯಕ್ಕೆ ದುಡಿಯಲು ಹೋಗುತ್ತಾರೆ. ಅವರ ಅನುಕೂಲಕ್ಕಾಗಿ ಉತ್ತರ ಕರ್ನಾಟಕದಿಂದ ರೈಲ್ವೆ ಸಂಪರ್ಕ ಕಲ್ಪಿಸುವುದು ಅತ್ಯವಶ್ಯಕವಾಗಿದೆ. ಬಿಜಾಪುರ ಬಾಗಲಕೋಟ ಜಿಲ್ಲೆಗಳ ಭಕ್ತಾದಿಗಳಿಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅನುಕೂಲ ಆಗುವಂತೆ ರೈಲ್ವೆ ಸಂಪರ್ಕ ಕಲ್ಪಿಸುವುದು ಸೇರಿದಂತೆ ಅನೇಕ ಬೇಡಿಕೆಗಳಿಗೆ ಆಗ್ರಹಿಸಿ ಮುಂಬರುವ ದಿನಗಳಲ್ಲಿ ವಿನೂತನವಾದ ಹೋರಾಟ ಹಮ್ಮಿಕೊಳ್ಳಲಾಗುವುದು
ಆದ್ದರಿಂದ ಬಾಗಲಕೋಟೆ - ಕುಡಚಿ ರೈಲ್ವೆ ಮಾರ್ಗಕ್ಕೆ ಒಳಪಡುವ ಲೋಕಾಪುರ್ , ಮುಧೋಳ್ , ಮಹಾಲಿಂಗಪುರ, ಜಮಖಂಡಿ, ರಬಕವಿ, ಬನಹಟ್ಟಿ , ತೇರದಾಳ್ , ಹಾರೋಗೇರಿ ಮತ್ತು ಕುಡಚಿ ನಗರಗಳು ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧ ಸಂಘ - ಸಂಸ್ಥೆಗಳು , ಜನಪರ ಸಂಘಟನೆಗಳು ಪ್ರಗತಿ ಪರ ಚಿಂತಕರು ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕಳೆದ 35 ವರ್ಷಗಳಿಂದ ನಿರಂತರವಾಗಿ ಜನಪರ, ಅಭಿವೃದ್ಧಿ ಪರ ಹೋರಾಟಗಳನ್ನು ಮಾಡುತ್ತಿರುವ ಕುತ್ಬುದ್ದಿನ್ ಕಾಜಿಯವರಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಬಸವರಾಜ್ ತಾಳಿಕೋಟಿ , ತಿಪ್ಪಣ್ಣ ಮೇಟಿ, ಗೋವಾದವರಾದ ಮಂಜುನಾಥ್ ನಾಟಿಕರ್, ಬಸು ಗೌಡರ್ ಹುಬ್ಬಳ್ಳಿ ಮಂಜುನಾಥ್ ಲೋತಿಮಠ, ಗದುಗಿನ ತಿಪ್ಪಣ್ಣ ದೋಣಿ , ಪ್ರಭು ಹಳ್ಳೂರ್ , ಪ್ರಶಾಂತ್ ವಾಲಿ, ರವಿ ಗುಳಸಂಗಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.