ಬಳ್ಳಾರಿ, ಆ.28 ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಹಾಗೂ ಮಲಹೊರುವ ವೃತ್ತಿಯಲ್ಲಿ ನೇಮಕ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ–2013ನ್ನು ರಾಜ್ಯಾದ್ಯಂತ ಸಮಗ್ರವಾಗಿ ಮತ್ತು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸಪಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಂದಕೂರು ರಾಮುಡು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಅವರು ಇಂದು ನಗರದ ಡಾ. ರಾಜಕುಮಾರ್ ರಸ್ತೆಯಲ್ಲಿರುವ ಹೊಸ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು,
ಮನುಷ್ಯರನ್ನು ಮಲ, ಮಲಮಿಶ್ರಿತ ತ್ಯಾಜ್ಯ, ಒಳಚರಂಡಿ, ಸೆಪ್ಟಿಕ್ ಟ್ಯಾಂಕ್ ಹಾಗೂ ಮ್ಯಾನ್ಹೋಲ್ಗಳನ್ನು ಸ್ವಚ್ಛಗೊಳಿಸಲು ಸೂಕ್ತ ಸುರಕ್ಷತಾ ವ್ಯವಸ್ಥೆಗಳಿಲ್ಲದೆ ನಿಯೋಜಿಸುವುದು ಅಮಾನವೀಯ ಮಾತ್ರವಲ್ಲದೆ ಕಾನೂನುಬಾಹಿರ ಕೃತ್ಯವಾಗಿದೆ. ಇಂತಹ ಅಪಾಯಕಾರಿ ಕೆಲಸಗಳಿಂದ ವಿಷಕಾರಿ ಅನಿಲ ಸೇವಿಸಿ ಹಾಗೂ ಉಸಿರುಗಟ್ಟಿ ಕಾರ್ಮಿಕರು ಸಾವನ್ನಪ್ಪುತ್ತಿರುವ ಘಟನೆಗಳು ಇಂದಿಗೂ ನಡೆಯುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ
ಭಾರತೀಯ ಸಂವಿಧಾನದ ವಿಧಿ–17 ಅಸ್ಪೃಶ್ಯತೆಯನ್ನು ನಿಷೇಧಿಸಿದ್ದು, ವಿಧಿ–21 ಪ್ರತಿಯೊಬ್ಬರಿಗೂ ಗೌರವಯುತವಾಗಿ ಬದುಕುವ ಹಕ್ಕನ್ನು ಖಾತ್ರಿಪಡಿಸಿದೆ. ಈ ಹಿನ್ನೆಲೆಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ, ಈ ವೃತ್ತಿಯಲ್ಲಿ ತೊಡಗಿರುವ ಕುಟುಂಬಗಳಿಗೆ ಗೌರವಯುತ ಜೀವನ, ಮನೆ, ಉದ್ಯೋಗ, ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಮನೆ ಅಥವಾ ನಿವೇಶನವಿಲ್ಲದ ಕುಟುಂಬಗಳಿಗೆ ಉಚಿತ ನಿವೇಶನ ಅಥವಾ ಪಕ್ಕಾ ಮನೆ, ಅರ್ಹತೆ ಮತ್ತು ಆಸಕ್ತಿಗೆ ಅನುಗುಣವಾಗಿ ಶಾಶ್ವತ ಪರ್ಯಾಯ ಉದ್ಯೋಗ, ಸ್ವಯಂ ಉದ್ಯೋಗಕ್ಕಾಗಿ ಕೌಶಲ್ಯ ತರಬೇತಿ, ಉಪಕರಣಗಳು, ಬಂಡವಾಳ, ಸಾಲ ಹಾಗೂ ಅಗತ್ಯ ಆರ್ಥಿಕ ನೆರವು ನೀಡಬೇಕು. ಆರೋಗ್ಯ ವಿಮೆ ಮತ್ತು ಆರೋಗ್ಯ ಕಾರ್ಡ್ ಒದಗಿಸಿ, ಅಗತ್ಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಕೆಲಸ ಮಾಡಲು ಅಸಮರ್ಥರಾಗಿರುವವರಿಗೆ ಸಮರ್ಪಕ ಮಾಸಿಕ ಪಿಂಚಣಿ ಮತ್ತು ಸಾಮಾಜಿಕ ಭದ್ರತೆಯನ್ನೂ ಕಲ್ಪಿಸಬೇಕು ಎಂದರು .
ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳು ಹಾಗೂ ಸಫಾಯಿಕರ್ಮಚಾರಿಗಳ ಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಬೇಕು. ವಸತಿ ಶಾಲೆ, ಶಾಲೆ, ಕಾಲೇಜು, ಉನ್ನತ ಹಾಗೂ ತಾಂತ್ರಿಕ ಶಿಕ್ಷಣದಲ್ಲಿ ವಿಶೇಷ ಅವಕಾಶ ಮತ್ತು ವಿದ್ಯಾರ್ಥಿವೇತನ ನೀಡುವುದರ ಜತೆಗೆ, ಮಕ್ಕಳು ಶಾಲೆಯನ್ನು ಮಧ್ಯದಲ್ಲೇ ತೊರೆದು ಪೋಷಕರ ವೃತ್ತಿಗೆ ಸೇರುವುದನ್ನು ತಡೆಯಲು ಅವರ ವಸತಿ ಪ್ರದೇಶಗಳಲ್ಲಿ ಮಕ್ಕಳ ಕಲಿಕಾ ಕೇಂದ್ರಗಳಾದ ‘ಭೀಮ ಶಾಲೆ’ಗಳನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಲಾಗಿದೆ.
ಸೆಪ್ಟಿಕ್ ಟ್ಯಾಂಕ್, ಮ್ಯಾನ್ಹೋಲ್ ಹಾಗೂ ಮಲದ ಗುಂಡಿಗಳಿಗೆ ಕಾರ್ಮಿಕರನ್ನು ಸೂಕ್ತ ಸುರಕ್ಷತಾ ಸಾಧನ, ತರಬೇತಿ ಮತ್ತು ವೈಜ್ಞಾನಿಕ ಸುರಕ್ಷತಾ ಮಾನದಂಡಗಳಿಲ್ಲದೆ ಇಳಿಸುವುದನ್ನು ಸಂಪೂರ್ಣವಾಗಿ ತಡೆಯಬೇಕು. ಮಲಸ್ವಚ್ಛತಾ ಕಾರ್ಯವನ್ನು ಆಧುನಿಕ ಯಂತ್ರೋಪಕರಣಗಳ ಮೂಲಕವೇ ನಿರ್ವಹಿಸುವುದನ್ನು ಕಡ್ಡಾಯಗೊಳಿಸಿ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಿರುವ ಕಡೆ ತಕ್ಷಣ ಯಂತ್ರೋಪಕರಣಗಳನ್ನು ಅಳವಡಿಸಬೇಕು ಎಂದು ಮತ್ತು
ಅದೇ ರೀತಿ, ಈ ವೃತ್ತಿಯಲ್ಲಿಯೇ ಮುಂದುವರಿಯಲು ಇಚ್ಛಿಸುವವರಿಗೆ ಆಧುನಿಕ ಸ್ವಚ್ಛತಾ ಯಂತ್ರೋಪಕರಣಗಳನ್ನು ಉಚಿತವಾಗಿ ಒದಗಿಸಿ, ಅವುಗಳ ಬಳಕೆಯ ಕುರಿತು ತರಬೇತಿ ನೀಡಬೇಕು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಗಳು, ಸಮುದಾಯ ಭವನಗಳು, ಉದ್ಯಾನಗಳು ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳ ನಿರ್ವಹಣಾ ಕಾರ್ಯಗಳನ್ನು ಗುರುತಿಸಲ್ಪಟ್ಟ ಸ್ಕ್ಯಾವೆಂಜರ್ ಕುಟುಂಬಗಳಿಗೆ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಡಾ. ಕೆ.ಬಿ. ಓಬಳೇಶ, ರಾಜ್ಯ ಸಮಿತಿ ಸದಸ್ಯ ಡಾ. ಆರ್.ವಿ. ಚಂದ್ರಶೇಖರ್, ರಾಜ್ಯ ಸಂಚಾಲಕರಾದ ಪದ್ಮ ಎಂ., ಜಿಲ್ಲಾ ಸಂಯೋಜಕ ಕಂದಕೂರು ರಾಮುಡು ಸೇರಿದಂತೆ ಬಳ್ಳಾರಿ ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.