ಬಳ್ಳಾರಿ, ಮೇ.25: ಬಳ್ಳಾರಿ ಜಿಲ್ಲಾ ಸಾರಿಗೆ ನಿರ್ವಾಹಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳು ನಡೆದಿದ್ದು, ರಾಜಕೀಯ ಒತ್ತಡದಿಂದ ಸಂಘದ ಪ್ರಜಾಸತ್ತಾತ್ಮಕ ವ್ಯವಸ್ಥೆ ಹಾಳಾಗುತ್ತಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಮುಲ್ಲಾ ಮೆಹಬೂಬ್ ಬಾಷ್ ಆರೋಪಿಸಿದರು.
ನಗರದ ಬೆಂಗಳೂರು ರಸ್ತೆಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಲಾರಿ ಟರ್ಮಿನಲ್ನ ಸಂಘದ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಂಘದಲ್ಲಿ 250ಕ್ಕೂ ಹೆಚ್ಚು ಲಾರಿ ಮಾಲೀಕರು ಸದಸ್ಯರಾಗಿದ್ದರೂ, ನೂತನ ಪದಾಧಿಕಾರಿಗಳ ಆಯ್ಕೆ ಕುರಿತು ಯಾವುದೇ ಸಾಮಾನ್ಯ ಸಭೆ ನಡೆಸದೇ, ಸದಸ್ಯರಿಗೆ ನೋಟಿಸ್ ನೀಡದೇ ಕೆಲವರು ಸ್ವಯಂ ಘೋಷಿತವಾಗಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿಗಳೆಂದು ಘೋಷಿಸಿಕೊಂಡು ಮೇ 16ರಂದು ಪದಗ್ರಹಣ ಕಾರ್ಯಕ್ರಮ ನಡೆಸಿರುವುದು ಅಸಂವಿಧಾನಿಕ ಕ್ರಮವಾಗಿದೆ ಎಂದು ದೂರಿದರು.
ಪದಗ್ರಹಣ ಮಾಡಿಕೊಂಡಿರುವ ಹಲವರಿಗೆ ಸಂಘದ ಸದಸ್ಯತ್ವವೇ ಇಲ್ಲ. ಕೆಲವರು ಲಾರಿ ಮಾಲೀಕರೇ ಅಲ್ಲದಿದ್ದರೂ ಪದಾಧಿಕಾರಿಗಳಾಗಿ ಘೋಷಿಸಿಕೊಂಡಿರುವುದು ಸಂಘದ ನಿಯಮಾವಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ನನಗೂ ಯಾವುದೇ ಮಾಹಿತಿ ನೀಡಿಲ್ಲ. ಸಂಘದಲ್ಲಿ ಸದಸ್ಯತ್ವವೇ ಇಲ್ಲದ ಕೆಲ ಅಪರಿಚಿತರು ಕೆಲ ಕಿಡಿಗೇಡಿಗಳೊಂದಿಗೆ ಸೇರಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ. ಇದು ಸಂಘದ ಇತಿಹಾಸದಲ್ಲೇ ಮೊದಲ ಘಟನೆ ಎಂದು ಮೆಹಬೂಬ್ ಬಾಷ್ ಅಸಮಾಧಾನ ವ್ಯಕ್ತಪಡಿಸಿದರು.
ಮೇ 16, 2026ರಂದು ಬಳ್ಳಾರಿ ಲಾರಿ ಅಸೋಸಿಯೇಷನ್ನ ನೂತನ ಅಧ್ಯಕ್ಷರಾಗಿ ಸಿ. ಮಹೇಶ್ವರ ಅವರನ್ನು ಘೋಷಿಸಿರುವುದನ್ನು ಪ್ರಶ್ನಿಸಿದ ಅವರು, ಅವರಿಗೆ ಸಂಘದಲ್ಲಿ ಸದಸ್ಯತ್ವವೇ ಇಲ್ಲ. ಸದಸ್ಯತ್ವವಿಲ್ಲದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಘೋಷಿಸಿರುವುದು ಯಾವ ನಿಯಮದಡಿ ನಡೆದಿದೆ ಎಂದು ಪ್ರಶ್ನಿಸಿದರು.
ಇದೇ ವೇಳೆ ಮಾಜಿ ಅಧ್ಯಕ್ಷ ಮಿಂಚು ಶ್ರೀನಿವಾಸ್ ಅವರ ವಿಚಾರವನ್ನೂ ಉಲ್ಲೇಖಿಸಿದ ಅವರು, ಮಿಂಚು ಶ್ರೀನಿವಾಸ್ ಅವರಿಗೂ ಆರಂಭದಲ್ಲಿ ಸದಸ್ಯತ್ವ ಇರಲಿಲ್ಲ. ರಾಜಕೀಯ ಒತ್ತಡದಿಂದ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಬಳಿಕ ಸದಸ್ಯತ್ವ ಕಲ್ಪಿಸಲಾಯಿತು ಎಂದು ತಿಳಿಸಿದರು.
ಮಾಜಿ ಅಧ್ಯಕ್ಷ ವೆಂಕಟರಾವ್ ಅವರು ಸುಮಾರು 30 ವರ್ಷಗಳ ಕಾಲ ಸಂಘವನ್ನು ಮುನ್ನಡೆಸಿ ಆಸ್ತಿಯನ್ನು ಅಭಿವೃದ್ಧಿಪಡಿಸಿದ್ದರು. ಸಂಘದ ಆಸ್ತಿಯಾಗಿರುವ ಟಿ.ಎಸ್. ನಂ. 28/16ರ ಮೂರು ಎಕರೆ ಲಾರಿ ತಂಗುದಾಣ ಜಾಗದಲ್ಲಿ ಒಂದು ಎಕರೆ ಭೂಮಿಯನ್ನು ಲಾರಿ ಮಾಲೀಕರ ಸಮ್ಮತಿ ಹಾಗೂ ಕಾರ್ಯಕಾರಿ ಸಮಿತಿಯ ಅನುಮತಿ ಪಡೆಯದೇ 2022ರ ಆಗಸ್ಟ್ 24ರಂದು 30 ವರ್ಷಗಳ ಲೀಸ್ಗೆ ನೀಡಲಾಗಿದೆ ಎಂದು ಆರೋಪಿಸಿದರು.
ಆ ಸಂದರ್ಭ ಅಧ್ಯಕ್ಷರಾಗಿದ್ದ ವ್ಯಕ್ತಿಯೇ ಇದೀಗ ಗೌರವಾಧ್ಯಕ್ಷರಾಗಿ ಪದಗ್ರಹಣ ಮಾಡಿರುವುದನ್ನು ಪ್ರಶ್ನಿಸಿದ ಅವರು, ಸಂಘದ ಉಳಿದ ಎರಡು ಎಕರೆ ಜಾಗವನ್ನೂ ಕಬಳಿಸುವ ಉದ್ದೇಶದಿಂದಲೇ ಈ ಬೆಳವಣಿಗೆ ನಡೆದಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪೆದ್ದಣ್ಣ, ಎಂ. ವಿಶ್ವನಾಥ್, ಡಿ. ರಾಮಕುಮಾರ್, ನೀಲಕಂಠೇಶ್ವರ ನಾಯ್ಡು, ಪ್ರವೀಣ್ ಕುಮಾರ್, ಪ್ರದೀಪ್ ಕುಮಾರ್ ನಾಗರಾಜ್ ಸೇರಿದಂತೆ ಅನೇಕ ಲಾರಿ ಮಾಲೀಕರು ಉಪಸ್ಥಿತರಿದ್ದರು.
