ಧಾರವಾಡ,09 : ಧಾರವಾಡ ನಗರದ ಮಾಳಮಡ್ಡಿ ಗೋಪಾಳಪುರದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಉತ್ತರಾದಿ ಮಠದಲ್ಲಿ ಸರ್ವ ವಿದ್ಯಾ ಪ್ರದಾಯಕ ಶ್ರೀ ಲಕ್ಷ್ಮೀ ಹಯಗ್ರೀವ ದೇವರ ಮೂರ್ತಿ ಪ್ರತಿಷ್ಠಾಪನೆ ಮಹೋತ್ಸವವು ವಿವಿಧ ವೈದಿಕ ವಿಧಿವಿಧಾನಗಳಿಂದ ಶ್ರೀ ಮದುತ್ತರಾದಿ ಮಠಾಧೀಶರಾದ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ವೈಭವದಿಂದ ನೆರವೇರಿತು. ಅನುಗ್ರಹ ಸಂದೇಶ ನೀಡಿದ ಶ್ರೀಗಳವರು, ವಿದ್ಯಾನಗರ ಧಾರವಾಡದಲ್ಲಿ ಜ್ಞಾನ, ವಿದ್ಯೆ, ಹಾಗೂ ವಿವೇಕದ ಅಧಿಪತಿಯಾದ ಶ್ರೀ ಹಯಗ್ರೀವ ದೇವರ ಮಂದಿರ ನಿರ್ಮಾಣವಾಗುತ್ತಿರುವುದರಿಂದ ಎಲ್ಲ ವಿದ್ಯಾಪಿಪಾಸುಗಳಿಗೆ ಹಯಗ್ರೀವ ದೇವರ ಅನುಗ್ರಹ ದೊರೆತು ಅವರ ಜ್ಞಾನವು ಅಭಿವೃದ್ಧಿ ಆಗುವುದರಲ್ಲಿ ಸಂದೇಹವಿಲ್ಲ ಎಂದರು.
ಈ ಸಂದರ್ಭದಲ್ಲಿ ಮಠದ ದಿವಾನರಾದ ಪಂ. ಶಶಿಧರಾಚಾರ್ಯ, ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಪಂ. ಸತ್ಯಧ್ಯಾನಾಚಾರ್ಯ ಕಟ್ಟಿ, ಕಟ್ಟಡ ಸಮಿತಿಯ ಅಧ್ಯಕ್ಷರಾದ ಪಂ. ಪ್ರಹ್ಲಾದಾಚಾರ್ಯ ಗಲಗಲಿ, ಉಪಾಧ್ಯಕ್ಷರಾದ ಪಂ. ವಾದಿರಾಜಾಚಾರ್ಯ ತಡಕೋಡ, ಪಂ. ಪಾಂಡುರಂಗಾಚಾರ್ಯ ರೊಟ್ಟಿ, ಪಂ. ಆನಂದತೀರ್ಥಾಚಾರ್ಯ ಚಿಮ್ಮಲಗಿ, ಧಾರವಾಡದ ಎಲ್ಲ ಪಂಡಿತರು, ವಿದ್ವಾಂಸರು ಹಾಗು ಸಮಸ್ತ ಭಕ್ತ ಜನತೆ ಉಪಸ್ಥಿತರಿದ್ದರು. ಶ್ರೀ ಮಠದ ಕಾರ್ಯನಿರ್ವಾಹಕ ಆಡಳಿತಾಧಿಕಾರಿ ಸಿ. ವೈ. ರವೀಂದ್ರನ್, ಚಾತುರ್ಮಾಸ್ಯ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಅರ್. ಎಮ್. ಕುಲಕರ್ಣಿ, ಹನುಮಂತ ಕೊಟಬಾಗಿ, ಮೂರ್ತಿಕಾರ ಶ ವೆಂಕಟರಮಣ ಭಟ್, ಶಿಲ್ಪ ತಂತ್ರಜ್ಞರಾದ ಕೆ. ಎಮ್. ಶೇಷಗಿರಿ, ಅಶೋಕ ಹುದ್ದಾರ, ಶ್ರೀಹರಿ ಕೊಪ್ಪರ್, ಶ್ರೀಕಾಂತ ಕರಜಗಿ, ಗದಗಕರ ಮುಂತಾದವರಿದ್ದರು. ಮಠದಲ್ಲಿಯೇ ದಿಗ್ವಿಜಯ ಮೂಲ ರಾಮದೇವರ ಪೂಜೆ ನಡೆಯಿತು. ನಂತರ ಎಲ್ಲ ಭಕ್ತಾದಿಗಳಿಗೆ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.