ಬಳ್ಳಾರಿ, ಮೇ.31: :ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ 11 ದಿನ ಅಗರಬತ್ತಿ ತರಬೇತಿ ಪಡೆದ ಶಿಬಿರಾರ್ಥಿಗಳಿಂದ ಅಗರಬತ್ತಿ ಮೇಳ ಹಾಗೂ ಮಹಿಳಾ ಋತುಚಕ್ರ ಜಾಗೃತಿ ಕಾರ್ಯಕ್ರಮ ನಿನ್ನೆ ನಡೆಯಿತು.
ಎನ್.ಆರ್.ಎಲ್.ಎಮ್ ಯೋಜನೆ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಸಂಸ್ಥೆಯ ಶ್ರೀ ಕೊಟ್ಟೂರೇಶ್ವರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಹಾಗೂ ಕೆನರಾ ಬ್ಯಾಂಕ್ ಆರ್ಸೆಟಿ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಇದನ್ನು ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ಕುರುಗೋಡು ತಾಲೂಕು ಪಂಚಾಯ್ತಿ ಇಓ ಕೆ.ವಿ.ನಿರ್ಮಲ ಸ್ವಾವಲಂಬಿ ಬದುಕಿಗೆ ಸಾಲ ಸೌಲಭ್ಯಗಳ ಬಳಕೆ ಕುರಿತು ತಿಳಿಸಿದರು
ತರಬೇತಿ ಪಡೆದ ಶಿಬಿರಾರ್ಥಿಗಳು ಸಿದ್ಧಪಡಿಸಿದ ಅಗರಬತ್ತಿಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ವೀಕ್ಷಿಸಿ ತೀವ್ರ ಸಂತಸ ವ್ಯಕ್ತಪಡಿಸಿದರು. ಸ್ವತಃ ತಾವೇ ಅಗರಬತ್ತಿಗಳನ್ನು ಖರೀದಿಸುವ ಮೂಲಕ ಮಹಿಳೆಯರನ್ನು ಪ್ರೋತ್ಸಾಹಿಸಿದರು
"ಸ್ವಸಹಾಯ ಸಂಘಗಳ ಮಹಿಳೆಯರು ಮುಂದಿನ ದಿನಗಳಲ್ಲಿ ಕೇವಲ ತರಬೇತಿಗೆ ಸೀಮಿತವಾಗದೆ, ಎನ್.ಆರ್ ಎಲ್ ಎಂ ಯೋಜನೆಯಡಿ ಸಿಗುವ ಸಾಲ ಸೌಲಭ್ಯಗಳು ಹಾಗೂ ಎಂಪಿಇಜಿಪಿ ಯೋಜನೆಯಡಿ ಸಾಲ ಪಡೆದು ಸ್ವಂತ ಅಗರಬತ್ತಿ ಉದ್ಯಮವನ್ನು ಆರಂಭಿಸಿ ದೊಡ್ಡ ಉದ್ಯಮಿಗಳಾಗಿ ಬೆಳೆಯಬೇಕು ಎಂದರು
ಋತುಚಕ್ರದ ಸಮಯದಲ್ಲಿ ಮಹಿಳೆಯರು ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಬಳಸಿದ ಪ್ಯಾಡ್ಗಳನ್ನು ಎಲ್ಲೆಂದರಲ್ಲಿ ಬಿಸಾಡದೆ, ಸ್ವಚ್ಛತಾ ವಾಹನಗಳಿಗೆ ನೀಡಬೇಕು ಅಥವಾ ಶಾಲಾ ಮಟ್ಟದಲ್ಲಿರುವ ಬರ್ನಿಂಗ್ ಮಿಷನ್ ಬಳಸಿ ಸುಟ್ಟು ವಿಲೇವಾರಿ ಮಾಡಬೇಕು ಎಂದು ಜಾಗೃತಿ ಮೂಡಿಸಿದರು.
ಈ ವೇಳೆ ಗ್ರಾಪಂ ಕಾರ್ಯದರ್ಶಿ ಗೋವಿಂದಪ್ಪ,
ಉಪನ್ಯಾಸಕ ದಿನೇಶ್, ಕರವಸೂಲಿಗಾರ ಹೊನ್ನೂರಸ್ವಾಮಿ, ಹೆಚ್. ಅಡಿವೆಪ್ಪ, ಆಶಾ ಕಾರ್ಯಕರ್ತೆಯರು ಹಾಗೂ ತರಬೇತಿ ಪಡೆದ ಮಹಿಳಾ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
