ಕುರುಗೋಡು: ಮೇ.05. ಪ್ರತಿಯೊಬ್ಬರ ಜೀವನದಲ್ಲಿ ಆಧ್ಯಾತ್ಮದ ಅರಿವು ಇದ್ದರೆ ಅಂತಹರ ಬದುಕು ಸರಳ ಮತ್ತು ಶಾಂತವಾಗಿ ನಡೆಯುತ್ತದೆ. ಎಂದು ಕುರುಗೋಡು ಪಟ್ಟಣದ ಕೊಟ್ಟೂರು ಸ್ವಾಮಿ ಶಾಕ ವಿರಕ್ತ ಮಠದ ಶ್ರೀ ನಿರಂಜನ ಪ್ರಭು ಸ್ವಾಮೀಜಿಯವರು ತಿಳಿಸಿದರು. ಮಠದಲ್ಲಿ ಶುಕ್ರವಾರ ಆಗಿ ಹುಣ್ಣಿಮೆ ಪ್ರಯುಕ್ತ ಆಯೋಜಿಸಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಪ್ರತಿದಿನವೂ ಕಾಯಕವೇ ಕೈಲಾಸ ಎಂಬ ಮಾರ್ಗದಲ್ಲಿ ಕೆಲಸ ನಿರ್ವಹಿಸಬೇಕು. ಶಿವ ಮೆಚ್ಚುವುದು ಕಷ್ಟಪಟ್ಟು ದುಡಿದಾಗ ಮಾತ್ರ. ಸಂತಸ ಬದುಕಿಗೆ ಆಧ್ಯಾತ್ಮದ ಅರಿವು ಅತ್ಯಗತ್ಯವಾಗಿದ್ದು, ಭೌತಿಕ ಆಸ್ತಿಗಿಂತ ಆಧ್ಯಾತ್ಮ ಸಂಪತ್ತು ಶ್ರೇಷ್ಠವಾಗಿದೆ. ಇತರರಿಗೆ ಒಳಿತನ್ನು ಬಯಸುವುದು ನಿಜವಾದ ಧರ್ಮ. ಗಳಿಸಿದ ಒಳ್ಳೆಯ ಹೆಸರು ಹಣಕ್ಕಿಂತ ಹೆಚ್ಚು ಬೆಲೆ ಬಾಳುತ್ತದೆ. ಸುಳ್ಳಿಗೆ ಹಲವು ದಾರಿಗಳಿದ್ದರೂ ಸತ್ಯಕ್ಕೆ ಒಂದೇ ದಾರಿ. ವೀರಶೈವ ಧರ್ಮದಲ್ಲಿ ರೇಣುಕಾಚಾರ್ಯರು ಬೋಧಿಸಿದ ಮೌಲ್ಯಗಳು ಉಲ್ಲೇಖಾರ್ಹವಾಗಿವೆ. ಕೈಲಾಸಕ್ಕಿಂತ ಕಾಯಕ, ಧರ್ಮಕ್ಕಿಂತ ದಯೆ, ಅರಿವಿಗಿಂತ ಆಚಾರ, ಅಧಿಕಾರಕ್ಕಿಂತ ಅಭಿಮಾನ ಹಾಗೂ ಭೌತಿಕ ಆಸ್ತಿಗಿಂತ ಆರೋಗ್ಯ ಮುಖ್ಯ ಎಂದರು. ಶಿವಾನುಭವ ಸಂಪದದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಇಲಾಖೆಯ ಕುರುಗೋಡು ಸಿಪಿಐ ಎಸ್.ಎಂ. ಬಾಳನಗೌಡ ರವರು ಮಾತನಾಡಿ, ಅಧ್ಯಾತ್ಮದ ಅರಿವು ಮನುಷ್ಯನಲ್ಲಿ ಒಳ್ಳೆಯ ನಡತೆಯನ್ನು ರೂಪಿಸುತ್ತದೆ. ಯಾವುದೇ ಸಮಸ್ಯೆಗಳಿಲ್ಲದೆ ಜೀವನ ಶಾಂತವಾಗಿ, ಎಲ್ಲರೊಂದಿಗೂ ಸಾಮರಸ್ಯವಾಗಿ ನಡೆಯುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪಟ್ಟಣದ ಹಿರಿಯರು, ಮಠದ ಭಕ್ತಾದಿಗಳು, ಪಾಲ್ಗೊಂಡಿದ್ದರು.