ಮಹಾಲಿಂಗಪುರ: ಮಕ್ಕಳು ಮಾಣಿಕ್ಯವಾಗಿ ಮಿನುಗಬೇಕಾದರೆ ಶಿಕ್ಷಕರು ಚಾಣಕ್ಯನಂತೆ ಚತುರರಾಗಿರಬೇಕು ಎಂದು ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.
ಸ್ಥಳೀಯ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ರಾಷ್ಟ್ರೋತ್ಥಾನ ಪರಿಷತ್ ಪ್ರಶಿಕ್ಷಣ ಭಾರತಿ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಪ್ರಾಸ್ತಾವಿಕ ಮಾತನಾಡಿದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸಪನಾ ಅನಿಗೋಳ ಮಾತನಾಡಿ ಇತ್ತೀಚಿನ ಶಿಕ್ಷಣದಿಂದ ಮಕ್ಕಳ ಜ್ಞಾನಕೋಶ ಹೆಚ್ಚುತ್ತಿದ್ದರೂ ಭಾವಕೋಶ ಬಡವಾಗುತ್ತಿದೆ ಎಂದು ವಿಷಾದಿಸಿ ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ ಮತ್ತು ಭಾವನಾತ್ಮಕ ಬುದ್ದಿ ಬೆಳೆಸುವ ಕೌಶಲ್ಯದ ಬಗ್ಗೆ ತಿಳಿಸಿದರು.
ರಾಷ್ಟ್ರೋತ್ಥಾನ ಪರಿಷತ್ನ ವಿಭಾಗೀಯ ಸಂಚಾಲಕ ಶ್ರೀನಿವಾಸ ಪಾಟೀಲ ಮಾತನಾಡಿ ಪಂಚಮುಖಿ ಶಿಕ್ಷಣದ ಮೂಲಕ ಸರ್ವಾಂಗೀಣ ಕಲಿಕಾ ತಂತ್ರಗಳನ್ನು ಶಿಕ್ಷಕರಿಗೆ ತಿಳಿಸಿಕೊಟ್ಟರು. ರಾಜ್ಯಮಟ್ಟದ ಕನ್ನಡ ಸಂಪನ್ಮೂಲ ವ್ಯಕ್ತಿ ಡಿ.ವಿ.ಹಿರೇಮಠ ಮಾತನಾಡಿ, ಆದರ್ಶ ಶಿಕ್ಷಕರ ದಿನಚರಿ, ನಡೆ, ನುಡಿ, ಕಲಿಕಾ ಕ್ರಮದ ಬಗ್ಗೆ ವಿವರಿಸಿದರು.
ಉಪನ್ಯಾಸಕ ಶಿವಲಿಂಗ ಸಿದ್ನಾಳ ಪ್ರಾಸ್ತಾವಿಕ ಮಾತನಾಡಿ ಶಿಕ್ಷಣದ ಮೂಲ ಪರಿಕಲ್ಪನೆ ಹಾಗೂ ರಾಷ್ಟೋತ್ಥಾನ ಪರಿಷತ್ನ ಧ್ಯೇಯದ ಬಗ್ಗೆ ತಿಳಿಸಿದರು.
ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಜಿ.ಜುಟನಟ್ಟಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕ ನಾರನಗೌಡ ಉತ್ತಂಗಿ ಸಮಾರೋಪದಲ್ಲಿ ಮಾತನಾಡಿ, ನಮ್ಮ ಸಂಸ್ಕೃತಿಯ ಶ್ರೀಮಂತಿಕೆ ಬಗ್ಗೆ ತಿಳಿಯದೇ ಮಕ್ಕಳಲ್ಲಿ ಧೀಮಂತಿಕೆ ಬೆಳೆಯಲು ಸಾಧ್ಯವಿಲ್ಲ ಎಂದರು. ಸ್ವಾಮಿ ವಿವೇಕಾನಂದ ಶಾಲೆಯ ಅಧ್ಯಕ್ಷ ರಮೇಶ ಶೆಕ್ಕಿ ಅಧ್ಯಕ್ಷತೆ ವಹಿಸಿದ್ದರು.
ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು. ಶಾಲೆಯ ವತಿಯಿಂದ ಸಂಪನ್ಮೂಲ ವ್ಯಕ್ತಿಗಳಿಗೆ ದೇಸಿ ಸಾವಯವ ಬೆಲ್ಲದ ಉತ್ಪನ್ನಗಳ ಉಡುಗೊರೆ ನೀಡಿ ಸನ್ಮಾನಿಸಲಾಯಿತು. ರೊಟ್ಟಿ, ಚಪಾತಿ, ಹೋಳಿಗೆ, ಶೀಕರಣಿ, ಅನ್ನಸಾರು ಜವಾರಿ ಸಿಹಿಯೂಟ ಉಣಬಡಿಸಲಾಯಿತು. ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆ ಮತ್ತು ಚಾಣಕ್ಯ ಕೋಚಿಂಗ್ ಸೆಂಟರ್ ಅಧ್ಯಕ್ಷ ರಮೇಶ ಶೆಕ್ಕಿ, ಕಾರ್ಯದರ್ಶಿ ಬಸವರಾಜ ನಿಂಗನೂರ, ಮುಖ್ಯ ಶಿಕ್ಷಕ ರಾಮಸ್ವಾಮಿ ಕೋಲ್ಕರ, ಶಿಕ್ಷಕರಾದ ಮಹೇಶ ಕಾಂಬಳೆ, ಶ್ರೀಮಂತ ಶಿರೋಳ, ಎಂ.ಡಿ.ನರಗಟ್ಟಿ ಇದ್ದರು.
