ರಾಮದುರ್ಗ: ರಾಮದುರ್ಗ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತನಲ್ಲಿ ವಿಚ್ಛೇದನ ಪ್ರಕರಣದಲ್ಲಿ ದಂಪತಿಗಳನ್ನು ಒಂದಾಗಿಸುವ ಮೂಲಕ ಇಲ್ಲಿನ ನ್ಯಾಯಾಧೀಶರ ಪ್ರಯತ್ನ ಲೋಕದಾಲತ್ ಮಹತ್ವಕ್ಕೆ ಕಾರಣವಾಗಿದೆ.
ಹಲವಾರು ವರ್ಷಗಳಿಂದ ಪ್ರತ್ಯೇಕವಾಗಿದ್ದು, ವಿಚ್ಛೇದನ ಪ್ರಕರಣ ಎದುರಿಸುತ್ತಿದ್ದ ಜೋಡಿ ದಂಪತಿಗಳನ್ನು ಒಂದು ಗೂಡಿಸುವ ಮೂಲಕ ರಾಮದುರ್ಗ ನ್ಯಾಯಾಲಯ ಗಮನ ಸೆಳೆದಿದ್ದು, ಪ್ರತ್ಯೇಕವಾಗಿದ್ದ ಸತಿ-ಪತಿಗಳನ್ನು ಒಂದಾಗಿಸಿದ ಕೀರ್ತಿಗೆ ಸಾಕ್ಷಿಯಾಗಿದೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ರಾಮದುರ್ಗ ತಾಲೂಕಾ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ಸಹಯೋಗದೊಂದಿಗೆ ನಡೆದ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ನಲ್ಲಿ ರಾಮದುರ್ಗ ನ್ಯಾಯಾಲಯದಲ್ಲಿ ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ ಹಾಗೂ ಹಿರಿಯ ದಿವಾಣಿ ನ್ಯಾಯಾಧೀಶರಾದ ಪುಷ್ಪಲತಾ ಕೆ, ಮತ್ತು ದಿವಾಣಿ ನ್ಯಾಯಾಧೀಶರಾದ ಭಾಗ್ಯಶ್ರೀ ಮಾದರ ಇವರ ಸಮ್ಮುಖದಲ್ಲಿ ರಾಜಿ ಸಂಧಾನದ ಮೂಲಕ ಒಂದಾದ ಪತಿ ಪತ್ನಿ ತಮ್ಮ ಮುಂದಿನ ಬಾಳ ಜೀವನಕ್ಕೆ ಕಾಲಿಡಲು ಪೂರಕವಾಯಿತು ಈ ಲೋಕ ಅದಾಲತ್.
ಲೋಕ ಅದಾಲತನಲ್ಲಿ ಸಾಮಾನ್ಯವಾಗಿ ವಿಚ್ಛೇದನ ಅಥವಾ ಕೌಟುಂಬಿಕ ಕಲಹದ ಕಾರಣದಿಂದ ದೂರಾಗಿದ್ದ ಜೋಡಿಗಳಿಗೆ ನ್ಯಾಯಾಧೀಶರು, ವಕೀಲರು ಮತ್ತು ಸಂಧಾನಕಾರರು ಸೂಕ್ತ ಸಮಾಲೋಚನೆ ನಡೆಸಿ, ಅವರ ಮನವೊಲಿಸುವ ಮೂಲಕ ಮತ್ತೆ ಒಂದಾಗಲು ದಾರಿ ಮಾಡಿಕೊಟ್ಟಿದ್ದಾರೆ.