ಜಮಖಂಡಿ: ಅನುಕೂಲ ಎನ್ನುವುದೆಲ್ಲವೂ ಸುಖ. ಪ್ರತಿಕೂಲ ಎನ್ನುವುದೆಲ್ಲವೂ ದುಃಖ. ಸುಖ-ದುಃಖಗಳು ಪುಣ್ಯ-ಪಾಪಗಳ ಫಲ. ಪುಣ್ಯದ ಫಲವೆ ಸುಖ. ಪಾಪದ ಫಲವೆ ದುಃಖ. ಸುಖ-ದುಃಖವನ್ನು ಬೇರೆಯವರಿಗೆ ಕೊಡಲು ಅಥವಾ ಬೇರೆಯವರಿಂದ ಪಡೆಯಲು ಬರುವುದಿಲ್ಲ ಎಂದು ಹಿಪ್ಪರಗಿಯ ಸಿದ್ಧಾರೂಢ ಶರಣರು ಹೇಳಿದರು.
ತಾಲ್ಲೂಕಿನ ಹುಲ್ಯಾಳ ಗ್ರಾಮದ ಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳು ೪ನೇ ಭಾನುವಾರ ಹಮ್ಮಿಕೊಳ್ಳುವ ಶ್ರೀಗುರುದೇವ ಸತ್ಸಂಗ ಏ.೨೬ರ ಮಾಸಿಕ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರದ ಸಾನ್ನಿಧ್ಯ ವಹಿಸಿ ಅವರು ‘ಸುಖಕ್ಕೆ ಸಾಧನಗಳು ಯಾವುವು?’ ವಿಷಯ ಕುರಿತು ಅನುಭಾವ ಹಂಚಿಕೊAಡರು.
ಕೋಟಿ ಕೋಟಿ ಜಪ-ತಪ ಮಾಡಿದರೂ ಗುರುವಿನ ಬೋಧೆ ಪಡೆಯದಿದ್ದರೆ ವಾಸ್ತವಿಕ ಸುಖ ಲಭಿಸದು. ಸದ್ರೂಪ ಸುಖ ಎಲ್ಲ ಕಾಲದಲ್ಲೂ ಇರುವಂತಹದ್ದು. ಪುಣ್ಯದಷ್ಟು ಸುಖ, ಪಾಪದಷ್ಟು ದುಃಖ ಇರುತ್ತದೆ. ಭಗವಂತನ ತಕ್ಕಡಿಯಲ್ಲಿ ಪಾಪ-ಪುಣ್ಯಗಳು ಹೆಚ್ಚು-ಕಡಿಮೆ ಆಗುವುದಿಲ್ಲ ಎಂದರು.
ಕಾಜಿಬೀಳಗಿಯ ಮಲ್ಲಿಕಾರ್ಜುನ ಶರಣರು ಸಾನ್ನಿಧ್ಯ ವಹಿಸಿ ಮಾತನಾಡಿ, ಒಮ್ಮೆ ಸುಖ ಬಂದರೆÉ ತಿರುಗಿ ದುಃಖ ಬರಬಾರದು. ಅದಕ್ಕಾಗಿ ಭಗವಂತನ ಚಿಂತನೆಯಲ್ಲಿ ಇರಬೇಕೆ ವಿನಹ ಸಂಪತ್ತಿನ ಚಿಂತೆಯಲ್ಲಿ ಇರಬಾರದು. ಬಲ್ಲವರ ನುಡಿ ಮುತ್ತುಗಳು ಸುಖಕ್ಕೆ ಸಾಧನ. ಆದ್ದರಿಂದ ಮಹಾತ್ಮರ, ಸಂತರ, ಸತ್ಪುರುಷರ ಸಂಗದಲ್ಲಿ ಇರಬೇಕು ಎಂದು ಆಶೀರ್ವಚನ ನೀಡಿದರು.
ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ದುಃಖ ಯಾವಾಗಲೂ ಇರುತ್ತದೆ. ಸುಖ ಆಗಾಗ ಬಂದು ಹೋಗುತ್ತಿರುತ್ತದೆ. ಆದ್ದರಿಂದ ನಾವು ಸುಖವನ್ನು ಹುಡುಕುತ್ತಿರುತ್ತೇವೆ. ನಿರಂತರ ಸುಖವನ್ನು ಮಹಾತ್ಮರು ಅನುಭವಿಸುತ್ತಾರೆ. ಅಂತೆಯೆ ಮಹಾತ್ಮರನ್ನು ಆರಾಧಿಸುತ್ತೇವೆ ಎಂದು ಆಶೀರ್ವಚನ ನೀಡಿದರು.
ಹೊಸೂರಿನ ಶಂಕರಾನAದ ಮಠದ ಪರಮಾನಂದ ಮಹಾಸ್ವಾಮಿಗಳು, ಸಿದ್ದಾಪುರದ ಅಡವಿ ಸಿದ್ಧೇಶ್ವರ ಮಠದ ಮಾತೋಶ್ರೀ ಅಕ್ಕಮಹಾದೇವಿತಾಯಿ ಸಾನ್ನಿಧ್ಯ ವಹಿಸಿದ್ದರು. ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾದ ಲಿಂಗರಾಜ ಪಾಟೀಲ, ಮಹಾಪ್ರಸಾದದ ದಾಸೋಹ ಸೇವೆಗೈದ ಆಲಬಾಳ ಗ್ರಾಮದ ಸಂಗಮೇಶ ತೇಲಿ-ಸಾವಿತ್ರಿ ತೇಲಿ ದಂಪತಿಯನ್ನು ಸನ್ಮಾನಿಸಲಾಯಿತು.
೨೦೨೫-೨೬ನೇ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ ೯೦ಕ್ಕೂ ಅಧಿಕ ಅಂಕ ಪಡೆದ ಹುಲ್ಯಾಳ ಸುತ್ತಲಿನ ಗ್ರಾಮಗಳ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ಶ್ರೀಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸಗೌಡ ಪಾಟೀಲ, ಪರಮೇಶ್ವರ ತೇಲಿ, ಅಕ್ಷಯ ಹೂಗಾರ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ನಿವೃತ್ತ ಶಿಕ್ಷಕ ಗುರುನಾಥ ಸುತಾರ ಸ್ವಾಗತಿಸಿದರು. ಉಪನ್ಯಾಸಕ ಸಂಗಮೇಶ ತೆಲಸಂಗ, ಶಿಕ್ಷಕ ಎಸ್.ಐ. ಚನಪನ್ನವರ ನಿರೂಪಿಸಿದರು.